ಮಾನ್ಯ: ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮಾನ
Team Udayavani, Jul 30, 2017, 7:35 AM IST
ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಆಶ್ರಯದಲ್ಲಿ ಮಾನ್ಯ ಶಾಲೆಯಲ್ಲಿ ಹಮ್ಮಿಕೊಂಡ ಸಾಹಿತ್ಯ ಸಾಂಸ್ಕೃತಿಕ ಪಯಣ ಕಾರ್ಯಕ್ರಮದಲ್ಲಿ ನೃತ್ಯದ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಿಬೆಳೆಸಿ, ಶಿಸ್ತು, ಶ್ರದ್ಧೆ, ಭಕ್ತಿ, ಪರಿಶ್ರಮದಿಂದ ಸಾಧನೆ ಮಾಡಿ ನೃತ್ಯ ಗುರುವಾಗಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡದ ಸಾವಿರಾರು ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡುವ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಹಾಗೂ ಮೂವತ್ತು ವರ್ಷಗಳ ಕಾಲ ಮಾನ್ಯ ಅಂಚೆ ಕಚೇರಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮುಂಜೂಣಿಯಲ್ಲಿದ್ದು ಮಾನ್ಯದ ಜನರಿಗೆ ಸ್ಫೂರ್ತಿ ಹಾಗೂ ಮಾರ್ಗದರ್ಶಕರಾದ ಸಮಾಜ ಸೇವಕ ಸುಂದರ ಶೆಟ್ಟಿ ಮಾನ್ಯ ಮತ್ತು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಕೇರಳ ಸರಕಾರದ ಉತ್ತಮ ಕೃಷಿಕ ಪುರಸ್ಕಾರವನ್ನು ಪಡೆದ ಐತ್ತ ಮಾನ್ಯ ಅವರಿಗೆ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಘಟಕದ ಉಪಾಧ್ಯಕ್ಷೆ ಡಾ| ಆರತಿ ಕೃಷ್ಣ ಅವರು ಶಾಲು ಹೊದೆಸಿ, ಫಲಪುಷ್ಪಗಳನ್ನು ನೀಡಿ ಸಮ್ಮಾನಿಸಿದರು.
ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕೇಳು ಮಾಸ್ತರ್ ಅಗಲ್ಪಾಡಿ, ಸಾಹಿತಿ ಮಲಾರು ಜಯರಾಮ ರೈ ನಿವೃತ್ತ ಉಪ ಜಿಲ್ಲಾಧಿಕಾರಿ ಬಿ. ಬಾಲಕೃಷ್ಣ ಅಗ್ಗಿತ್ತಾಯ, ಮೀಡಿಯಾ ಕ್ಲಾಸಿಕಲ್ಸ್ನ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಅಚ್ಚಾಯಿ, ಮಾನ್ಯ ಜ್ಞಾನೋದಯ ಶಾಲಾ ಮುಖ್ಯೋಪಾಧ್ಯಾಯ ಗೋವಿಂದ ನಂಬೂದಿರಿ, ಪ್ರೊ| ಎ. ಶ್ರೀನಾಥ್, ಸಾಹಿತಿ ವಿರಾಜ್, ಶ್ಯಾಂ ಪ್ರಸಾದ್ ಮಾನ್ಯ ಮೊದಲಾದವರು ಉಪಸ್ಥಿತರಿದರು