ಜಲಸಮೃದ್ಧ ಜಿಲ್ಲೆ ಯೋಜನೆ ಶೀಘ್ರ ಜಾರಿ: ಜಿಲ್ಲಾಧಿಕಾರಿ
Team Udayavani, Dec 7, 2018, 12:28 PM IST
ಕಾಸರಗೋಡು: ಜಿಲ್ಲೆಯನ್ನು ಜಲಸಮೃದ್ಧವಾಗಿಸುವ ಯೋಜನೆ ಶೀಘ್ರದಲ್ಲೇ ಜಾರಿಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ಬಾಬು ಹೇಳಿದರು. ಮಣ್ಣು ಸಂರಕ್ಷಣೆ ಇಲಾಖೆ, ಕೃಷಿ ಅಭಿವೃದ್ಧಿ, ಕೃಷಿಕ ಕಲ್ಯಾಣ ಇಲಾಖೆಗಳ ಜಂಟಿ ವತಿಯಿಂದ ಮಡಿಕೈ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ವಿಶ್ವ ಮಣ್ಣು ಸಂರಕ್ಷಣೆ ದಿನಾಚರಣೆ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಪ್ಯಾಕೇಜ್ ಯೋಜನೆಯಲ್ಲೇ ಈ ವಿಚಾರವನ್ನು ಅಳವಡಿಸಿ ಅನುಷ್ಠಾನಗೊಳಿಸಲಾಗುವುದು. ಹರಿತ ಕೇರಳ ಮಿಷನ್ನೊಂದಿಗೆ ಕೈಜೋಡಿಸಿ ಪ್ರತಿ ಪಂಚಾಯತ್ನಲ್ಲೂ ಜಲಾಶಯ ಯೋಜನೆಗಳಿಗೆ ಚಾಲನೆ ನಡೆಯಲಿದೆ. ಇದರ ಮೊದಲ ಹಂತದ ಚಟುವಟಿಕೆ ಚೆಂಗಳ ಗ್ರಾಮ ಪಂಚಾಯತ್ನಲ್ಲಿ ಈಗಾಗಲೇ ಆರಂಭಿಸಲಾಗಿದೆ ಎಂದರು.
ಬಿದಿರು ಯೋಜನೆಗೆ ರಾಜಧಾನಿ
ಜಿಲ್ಲೆಯ ಮಂಜೇಶ್ವರ, ಕಾರಡ್ಕ, ಕಾಸರಗೋಡು ಬ್ಲಾಕ್ಗಳ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕರ್ಗಲ್ಲಿನ ಕಾರಣ ಕೃಷಿ ನಡೆಸುವುದು ಕಷ್ಟಸಾಧ್ಯವಾಗಿದೆ. ಇದಕ್ಕೆ ಪರ್ಯಾಯವಾಗಿ ಬಿದಿರು ಕೃಷಿ ಸಮಂಜಸವಾಗಿದ್ದು, ಮುಂದಿನ ಜೂ. 5ರಂದು 3 ಲಕ್ಷ ಬಿದಿರು ಸಸಿಗಳನ್ನು ನೆಡುವ ಯೋಜನೆ ಜಾರಿಗೊಳಿಸಲಾಗುವುದು. ಬಿದಿರು ಯೋಜನೆಗೆ ಜಿಲ್ಲೆ ರಾಜಧಾನಿಯಾಗಲಿದೆ ಎಂದರು.
ಮಡಿಕೈ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಪ್ರಭಾಕರನ್ ಅಧ್ಯಕ್ಷತೆ ವಹಿಸಿದರು. ಮಣ್ಣಿನ ಆರೋಗ್ಯ ಪಾಲನೆ, ಮಣ್ಣು, ಜಲ ಸಂರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಕೃಷಿ ಸಹಾಯಕ ನಿರ್ದೇಶಕಿ ಆರ್. ವೀಣಾರಾಣಿ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕೆ.ಪಿ. ಮಿನಿ ಪ್ರಬಂಧ ಮಂಡಿಸಿದರು. ಕೃಷಿಕರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಯಿತು. ಮಡಿಕೈ ಗ್ರಾಮ ಪಂಚಾಯತ್ ವ್ಯಾಪ್ತಿಯ ಅತ್ಯುತ್ತಮ ಕೃಷಿಕರಾದ ನಾರಾಯಣನ್ ನಂಬೂದಿರಿ, ರಾಘವನ್ ಬೆಳ್ಚಪ್ಪಾಡ, ಸಿ. ನಾರಾಯಣನ್, ಕೆ.ವಿ. ಶಾಂತಾ, ಟಿ. ಜನಾರ್ದನನ್, ಎ. ನಾರಾಯಣನ್ ಮೊದಲಾದವರನ್ನು ಹಾಗೂ ಜಿಲ್ಲೆಯ ಅತ್ಯುತ್ತಮ ತರಕಾರಿ ಕೃಷಿಕ ಸಿ. ಬಾಲಕೃಷ್ಣನ್ ನಾಯರ್ ಅವರನ್ನು ಜಿ. ಪಂ. ಸದಸ್ಯ ಎಂ. ಕೇಳು ಪಣಿಕ್ಕರ್ ಅಭಿನಂದಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಚಿತ್ರ ರಚನೆ ಸ್ಪರ್ಧಾ ವಿಜೇತರಿಗೆ ನಂಬೀಶನ್ ವಿಜಯೇಶ್ವರಿ ಬಹುಮಾನ ವಿತರಿಸಿದರು. ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ. ಅಶೋಕ್ ಕುಮಾರ್ ಪ್ರತಿಜ್ಞಾ ಸ್ವೀಕಾರಕ್ಕೆ ನೇತೃತ್ವ ವಹಿಸಿದರು. ಮಡಿಕೈ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕೆ. ಪ್ರಮೀಳಾ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಶಶೀಂದ್ರನ್ ಮಡಿಕೈ, ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಎಂ.ಅಬ್ದುಲ್ ರಹಿಮಾನ್, ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಸಿ. ಇಂದಿರಾ, ವಾರ್ಡ್ ಸದಸ್ಯ ವಿ.ಶಶಿ, ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ. ಸುಬ್ರಹ್ಮಣ್ಯನ್, ಕಾಂಞಂಗಾಡ್ ಕೃಷಿ ಸಹಾಯಕ ನಿರ್ದೇಶಕ ಅನಿಲ್ ವರ್ಗೀಸ್, ಪಿ.ಬೇಬಿ ಬಾಲಕೃಷ್ಣನ್ ಉಪಸ್ಥಿತರಿದ್ದರು. ಮಣ್ಣು ಸಮೀಕ್ಷೆ ಸಹಾಯಕ ನಿರ್ದೇಶಕ ಎನ್. ಸತ್ಯನಾರಾಯಣ ಸ್ವಾಗತಿಸಿದರು. ಮಡಿಕೈ ಕೃಷಿ ಅಧಿಕಾರಿ ಕೆ.ವೇಣುಗೋಪಾಲನ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕುಟುಂಬಶ್ರೀ ಉತ್ಪನ್ನಗಳ ಪ್ರದರ್ಶನ , ಮಾರಾಟ, ಮಕ್ಕಳ ಚಿತ್ರ ಪ್ರದರ್ಶನ ಜರಗಿತು.
ಮಣ್ಣಿನ ಮಹತ್ವ ಅರಿಯುವ
ಅವಕಾಶ ಒದಗಿಸಿದ ಸಮಾರಂಭ
ಮಣ್ಣಿನ ಮಹತ್ವ ಅರಿಯಲು ಮಣ್ಣಿನ ಗುಣ ಅರ್ಥಮಾಡಿಕೊಳ್ಳಲು ಜಿಲ್ಲೆಯ ಮಡಿಕೈ ನಿವಾಸಿ ಕೃಷಿಕರಿಗೆ ಅವಕಾಶವೊಂದು ದೊರೆಯಿತು. ವಿಶ್ವ ಮಣ್ಣಿನ ಸಂರಕ್ಷಣೆ ದಿನಾಚರಣೆ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಮಣ್ಣಿನ ಆರೋಗ್ಯ ಪಾಲನೆ, ಮಣ್ಣು ಜಲ ಸಂರಕ್ಷಣೆ ಇತ್ಯಾದಿ ವಿಷಯಗಳಲ್ಲಿ ಕೃಷಿ ಸಹಾಯಕ ನಿರ್ದೇಶಕಿ ಆರ್. ವೀಣಾರಾಣಿ, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕೆ.ಪಿ. ಮಿನಿ ಪ್ರಬಂಧ ಮಂಡಿಸಿದರು. ಕೃಷಿ ಕುರಿತು ಆಸಕ್ತರಿಗೆ ಅನೇಕ ವಿಚಾರಗಳನ್ನು ಹಂಚಿದರು.
ಇಂದಿಗೂ ಕಾಲ ಮಿಂಚಿಲ್ಲ ಎಂಬ ಸದಾಶಯ ವ್ಯಕ್ತಪಡಿಸಿದ ಸಂಪನ್ಮೂಲ ವ್ಯಕ್ತಿಗಳು ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು ಎಂದು ವಿವರಿಸಿದರು. ಮನೆ ಮನೆಗಳಲ್ಲಿ ಈ ಕುರಿತು ಜಾಗೃತಿ ಮೂಡಬೇಕು, ಜಲಾಶಯಗಳನ್ನು ಪುನಶ್ಚೇತನಗೊಳಿಸುವ, ಬಾವಿಗಳನ್ನು ದುರಸ್ತಿಗೊಳಿಸುವ, ಮಳೆ ನೀರು ಸಂಗ್ರಹಕ್ಕೆ ಕಂದಕ ನಿರ್ಮಾಣ ಮಾಡುವ ಮೂಲಕ ಜಲಸಂರಕ್ಷಣೆ ನಡೆಸಬೇಕು ಎಂಬ ವಿಚಾರಕ್ಕೆ ಒತ್ತು ನೀಡಿ ಅವರು ಮಾಹಿತಿ ನೀಡಿದರು.
ಮಳೆ ನೀರಿನ ಸದುಪಯೋಗವಿಲ್ಲ: ಕಳಕಳಿ
ರಾಜ್ಯದಲ್ಲಿ ನಡೆಯುತ್ತಿರುವ ಪ್ರಕೃತಿ ಶೋಷಣೆ ಕುರಿತು ಮಾತನಾಡಿದ ಪರಿಣತರು ಕೇರಳ ಅತ್ಯಧಿಕ ಮಳೆ ಲಭಿಸುವ ರಾಜ್ಯ ಎಂಬ ಭಾವನೆ ಹರಡಿಕೊಂಡಿದ್ದರೂ ಅದರ ಸದುಪಯೋಗ ನಡೆಯುತ್ತಿಲ್ಲ ಎಂದು ಕಳಕಳಿ ವ್ಯಕ್ತಪಡಿಸಿದರು. 3 ಸಾವಿರ ಮಿ.ಮೀ. ಮಳೆ ಲಭ್ಯವಿದ್ದರೂ ಅದನ್ನು ಸಂಗ್ರಹಿಸಿ ಬಳಕೆ ಮಾಡುವ ಸೌಲಭ್ಯ ನಮಗಿಲ್ಲದಿರುವುದು ದುರಂತ ಎಂದು ಹೇಳಿದರು. ರಾಜ್ಯದ ಭತ್ತದ ಗದ್ದೆಗಳು ಜಲಸಂರಕ್ಷಣೆಯ ಭಂಡಾರವೇ ಆಗಿದ್ದುವು. ಆದರೆ 30 ವರ್ಷಗಳ ಅವಧಿಯಲ್ಲಿ 9 ಲಕ್ಷ ಹೆಕ್ಟೇರ್ ಭತ್ತದ ಗದ್ದೆ ಇದ್ದುದು ಇಂದು 2.75 ಲಕ್ಷ ಹೆಕ್ಟೇರ್ ಆಗಿ ಇಳಿಮುಖವಾಗಿದೆ. ಈ ಮೂಲಕ ಕೇರಳ ಭತ್ತದ ಕೃಷಿ ಮಾತ್ರವಲ್ಲ ಪರಂಪರಾಗತ ಜಲಸಂಗ್ರಹಾಗಾರಗಳನ್ನೂ ನಷ್ಟ ಮಾಡಿಕೊಂಡಿದೆ ಎಂದರು. ಅವೈಜ್ಞಾನಿಕ ಮರಳು ಹೂಳೆತ್ತುವಿಕೆಯೂ ನದಿ ನೀರಿನ ಪ್ರಮಾಣ ಕಡಿಮೆಯಾಗುವುದಕ್ಕೆ ಕಾರಣವಾಗುತ್ತಿದೆ ಎಂದು ಕಳಕಳಿ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ