ಕಾಸರಗೋಡಿನ ಕನ್ನಡ ಬೆಳವಣಿಗೆಗೆ ಯಕ್ಷ ನುಡಿಸರಣಿ ಸಹಕಾರಿ
Team Udayavani, Feb 13, 2019, 1:00 AM IST
ಕಾಸರಗೋಡು: ಕನ್ನಡ ಭಾಷೆ, ಸಂಸ್ಕೃತಿಯ ಮೇಲಿನ ಅಭಿಮಾನದಿಂದ ಕ್ರಿಯಾತ್ಮಕವಾಗಿ ಕನ್ನಡಪರ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಮಾತ್ರವೇ ಕನ್ನಡ ಉಳಿ ಯಲು ಸಾಧ್ಯ. ಕರ್ನಾಟಕದಲ್ಲೂ ಕನ್ನಡಕ್ಕಿಂತ ಆಂಗ್ಲ ಭಾಷೆಯ ಪ್ರಭಾವ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಮನೆ ಮನೆ ಯಕ್ಷ ನುಡಿಸರಣಿ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ ಸಹಕಾರಿಯಾಗಬಲ್ಲುದು ಎಂದು ದೇರಳಕಟ್ಟೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಪಜೀರ್ ಗುತ್ತು ಅಭಿಪ್ರಾಯಪಟ್ಟರು.
ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಸಂಸ್ಥೆಯ ನೇತೃತ್ವದಲ್ಲಿ ಗುಣಾಜೆ ರಾಮಚಂದ್ರ ಭಟ್ ಅವರ ಪ್ರಾಯೋಜಕತ್ವದಲ್ಲಿ ದೇರಳಕಟ್ಟೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿÉ ನಡೆದ ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನದ ಹನ್ನೊಂದನೆಯ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಳಮದ್ದಳೆಯ ತಿಂಗಳ ಕಾರ್ಯಕ್ರಮದ ಮೂಲಕ ಯಕ್ಷಗಾನವನ್ನು ಅಧ್ಯಯನ ದೃಷ್ಟಿಯಿಂದ ನೋಡುವುದಕ್ಕೆ ಸಾಧ್ಯವಾಗುತ್ತಿದೆ. ವಿಭಿನ್ನ ವಯಸ್ಸು, ಹಿನ್ನೆಲೆಯುಳ್ಳ ಕಲಾವಿದರ ಆರೋಗ್ಯಪೂರ್ಣ ಚರ್ಚೆಯು ವಿಭಿನ್ನ ನೆಲೆಗಟ್ಟಿನಿಂದ ಒಂದು ಪಾತ್ರವನ್ನು ನೋಡುವುದಕ್ಕೆ ಅವಕಾಶವೊದಗಿಸುತ್ತದೆ. ಒಂದು ಗಂಟೆಯ ತಾಳಮದ್ದಳೆಗೆ ತಿಂಗಳುಗಳ ಪರಿಶ್ರಮವಿದೆ ಎಂದರು.
ಬಳಗದ ಮಾರ್ಗದರ್ಶಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಬಳಗದ ತಾಳಮದ್ದಳೆ ತಂಡ ಮೊದಲ ಬಾರಿಗೆ ಗಡಿ ದಾಟಿ ಕರ್ನಾಟಕವನ್ನು ತಲಪಿದೆ. ಗಡಿನಾಡಿನ ಕಲೆ ಒಳನಾಡಿಗೂ ವಿಸ್ತರಿಸುವುದಕ್ಕೆ ಅವಕಾಶ ಲಭಿಸಿದೆ. ಆ ಮೂಲಕ ಬಳಗದ ಕಲಾವಿದರಿಗೆ ವಿಸ್ತಾರವಾಗಿ ಬೆಳೆಯುವ ಅವಕಾಶ ಒದಗಿಬರುತ್ತಿದೆ ಎಂದರು.
ಕವಿ, ಸಾಹಿತಿ, ನಿವೃತ್ತ ಅಧ್ಯಾಪಕ ಗುಣಾಜೆ ರಾಮಚಂದ್ರ ಬಟ್ ಸ್ವಾಗತಿಸಿದರು. ದೇವಸ್ಥಾನದ ಮೊಕ್ತೇಸರ, ಗುರುಸ್ವಾಮಿ ವಿಶ್ವÌನಾಥ ಕಾಯರಪಳಿಕೆ ವಂದಿಸಿದರು. ದಿವಾಕರ ಬಲ್ಲಾಳ್ ಎ.ಬಿ. ಪ್ರಾರ್ಥನೆ ಹಾಡಿದರು. ಬಳಗದ ಸದಸ್ಯೆ ಶ್ರದ್ಧಾ ನಾಯರ್ಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ದಿವಾಣ ಶಿವಶಂಕರ ಭಟ್ ನೇತೃತ್ವದಲ್ಲಿ ಹಲಸಿನಹಳ್ಳಿ ನರಸಿಂಹಶಾಸ್ತ್ರಿ ವಿರಚಿತ ಯಕ್ಷಗಾನ ತಾಳಮದ್ದಳೆ “ಭೀಷ್ಮಾರ್ಜುನ” ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಕೃಷ್ಣ ಭಟ್ ಸುಣ್ಣಂಗುಳಿ, ಚೆಂಡೆ ಮತ್ತು ಮದ್ದಳೆಯಲ್ಲಿ ಕೃಷ್ಣರಾಜ ಭಟ್ ನಂದಳಿಕೆ ಮತ್ತು ಪೆರ್ಲ ಗಣಪತಿ ಭಟ್, ಮುಮ್ಮೇಳದಲ್ಲಿ ಕೌರವನ ಪಾತ್ರದಲ್ಲಿ ಶಶಿಧರ ಕುದಿಂಗಿಲ, ಭೀಷ್ಮನಾಗಿ ದಿವಾಕರ ಬಲ್ಲಾಳ ಎ.ಬಿ, ಕೃಷ್ಣನ ಪಾತ್ರದಲ್ಲಿ ನವೀನ ಕುಂಟಾರು, ಅರ್ಜುನನಾಗಿ ಶ್ರದ್ಧಾ ಭಟ್ ನಾಯರ್ಪಳ್ಳ, ಅಭಿಮನ್ಯುವಿನ ಪಾತ್ರದಲ್ಲಿ ಪ್ರದೀಪ ಎಡನೀರು ಸಹಕರಿಸಿದರು. ಬಳಗದ ಸದಸ್ಯ ಶಶಿಧರ ಕುದಿಂಗಿಲ ಪಾತ್ರ ಪರಿಚಯ ಮಾಡಿ, ಜತೆ ಕಾರ್ಯದರ್ಶಿ ಸೌಮ್ಯಾ ಪ್ರಸಾದ್ ವಂದಿಸಿದರು.