ಗ್ರಾ.ಪಂ. ಅಧ್ಯಕ್ಷೆಗೆ ಬೆದರಿಕೆಯೊಡ್ಡಿದ ಆರೋಪಿ ಬಂಧನ ಆಗ್ರಹಿಸಿ ಮನವಿ
Team Udayavani, Jul 29, 2018, 12:47 PM IST
ಮೂಲ್ಕಿ : ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ ಅವರ ಕಚೇರಿಗೆ ಬಂದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ ಆರೋಪಿ ರಾಜಾರೋಷವಾಗಿ ತಿರುಗಾಡುತ್ತಿದ್ದು, ಪೊಲೀಸರು ತತ್ಕ್ಷಣ ಕ್ರಮ ಕೈಗೊಂಡು ಆತನನ್ನು ಬಂಧಿಸ ಬೇಕು ಎಂದು ಆಗ್ರಹಿಸಿ ಪಾಣಾರ ಯಾನೆ ನಲ್ಕೆ ಸಮಾಜದ ವಿವಿಧ ಸಂಘಟನೆಗಳ ಸದಸ್ಯರು ಮೂಲ್ಕಿ ಠಾಣೆಗೆ ಬಂದು ಠಾಣಾಧಿಕಾರಿಗೆ ಮನವಿ ಸಲ್ಲಿಸಿದರು.
ಜಲಜಾ ಪಾಣಾರ್ ಅವರು ಗ್ರಾ.ಪಂ. ಅಧ್ಯಕ್ಷೆಯಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಜೀವ ಬೆದರಿಕೆ ಒಡ್ಡಿ, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುವ ಬಗ್ಗೆ ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ತನಿಖೆ ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷೆ ಜಲಜಾ ಪಾಣಾರ್, ಮೂಲ್ಕಿಯ ದಲಿತ ಸಂಘಟನೆ ಮತ್ತು ಹಿಂದುಳಿದ ಸಮಾಜದ ನಾಯಕ ಅಶೋಕ್ ಪೂಜಾರ್, ಪಾಣಾರ ಯಾನೆ ನಲ್ಕೆಯವರ ಸಂಘ ಮೂಡುಬೆಳ್ಳೆಯ ಅಧ್ಯಕ್ಷ ಸುಧಾಕರ, ಉಡುಪಿ ಸಂಘದ ಅಧ್ಯಕ್ಷ ಎಚ್. ಶತಾರಾಂ ಮಾಸ್ತರ್, ಅಳಿಯೂರು ಸಂಘದ ಅಧ್ಯಕ್ಷ ಶಿವಾನಂದ, ಮೂಡಬಿದಿರೆ ಸಂಘದ ಅಧ್ಯಕ್ಷ
ನೋಣಯ್ಯ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.