ಸ್ವಚ್ಛ ಭಾರತ ಕಲ್ಪನೆ ಪ್ರತಿಯೊಬ್ಬರ ಜವಾಬ್ದಾರಿ
Team Udayavani, Sep 24, 2018, 12:07 PM IST
ಮೂಲ್ಕಿ : ನಗರ, ಮನೆ ಹಾಗೂ ಪರಿಸರವನ್ನು ಸ್ವಚ್ಛವಾಗಿರಿಸಿ ನಿತ್ಯವೂ ಉತ್ತಮ ವಾತಾವರಣದಲ್ಲಿ ಬದುಕುವ ನಮ್ಮ ಹಕ್ಕನ್ನು ನಾವೇ ರೂಪಿಸಿಕೊಳ್ಳಬೇಕಾದರೆ ಸ್ವಚ್ಛ ಭಾರತದ ಕಲ್ಪನೆ ದೇಶ ನಿವಾಸಿಗಳಾದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಸೌರಬ್ ದುಭೆ ಹೇಳಿದರು.
ಅವರು ಮೂಲ್ಕಿಯ ಕೊಳಚಿಕಂಬಳದ ಮಂತ್ರ ಸರ್ಫ್ ಸ್ವಾಮಿ ಫೌಂಡೇಶನ್ ಆಶ್ರಯದಲ್ಲಿ ಮಂಗಳೂರು ನಗರದ ವಿವಿಧ ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕೊಳ ಚಿಕಂಬಳದ ಸರ್ಫ್ ತರಬೇತಿ ಪ್ರದೇಶದ ಸಮುದ್ರ ತೀರದಲ್ಲಿ ನಡೆದ ಸಮುದ್ರ ಕಿನಾರೆ ಸ್ವಚ್ಛತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರು ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಸಾಧ್ಯವಾದಷ್ಟು ತಮ್ಮ ಕೆಲಸವನ್ನು ಮುಂದುವರಿಸಿದಲ್ಲಿ ಪ್ರಧಾನಿಯವರ ಕರೆಯಂತೆ ದೇಶ ಸ್ವಚ್ಛಂದವಾಗಿರಲು ಸಾಧ್ಯ ಎಂದರು. ಮಂಗಳೂರಿನ ಇಂದಿರಾ ನರ್ಸಿಂಗ್ ತರಬೇತಿ ಕೇಂದ್ರ, ಮಣಿಪಾಲ ಹಾಗೂ ಸುರತ್ಕಲ್ನ ವಿದ್ಯಾರ್ಥಿ ಮಿತ್ರರು ಹಾಗೂ ನಗರದ ಕೆಲವು ಯುವಕರು ಸೇರಿ ಸುಮಾರು ನೂರಕ್ಕೂ ಮಿಕ್ಕಿದ ಪ್ರತಿನಿಧಿಗಳು ಸುಮಾರು ಇನ್ನೂರು ಗೋಣಿಯಷ್ಟು ತ್ಯಾಜ್ಯಗಳನ್ನು ಸಮುದ್ರ ತೀರದಲ್ಲಿ ಸಂಗ್ರಹಿಸಿದರು. ಬೈಕಂಪಾಡಿ ಸಣ್ಣ ಕೈಗಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ಗೌರವ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪತ್ರಕರ್ತ ಹರೀಶ್ ಹೆಜ್ಮಾಡಿ, ಮಂತ್ರ ಸರ್ಫ್ ಕೇಂದ್ರದ ಜೆಫರ್ ಸನ್ ಕರ್, ಕೀರ್ತನ್ ಶ್ಯಾಮ್, ನಟರಾಜ್, ರವಿಶಂಕರ್, ಧ್ರುವ, ಅರ್ಜುನ್, ಆಸೀಫ್ ಹಾಗೂ ಶ್ರೇಯಸ್ ಅಂಚನ್ ಮತ್ತಿತರರು ಈ ಸಂದರ್ಭದಲ್ಲಿ ಸಹಕರಿಸಿದ್ದರು.