ಪ್ರಧಾನಿ ಮೋದಿ ಅಭಿವೃದ್ಧಿ ಕಾರ್ಯ ಜನತೆಗೆ ತಲುಪಿಸಿ: ಕೋಟ
Team Udayavani, Jul 14, 2018, 11:30 AM IST
ಕಾವೂರು: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರದ 4 ವರ್ಷಗಳ ಆಡಳಿತ ಶೈಲಿಯು ವಿಶ್ವದ ಅಗ್ರಮಾನ್ಯರ ಗಮನ ಸೆಳೆದಿದೆ. ದೇಶವು ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಸಬಲೀಕರಣದತ್ತ ದಾಪುಗಾಲಿಟ್ಟಿದೆ. ಬಡ ಜನರ ಜೀವನ ಮಟ್ಟವನ್ನು ಸುಧಾರಿಸಬಲ್ಲ ಕೇಂದ್ರದ ಹತ್ತಾರು ಯೋಜನೆಗಳ ಬಗ್ಗೆ ಸಮಗ್ರ ಜ್ಞಾನದೊಂದಿಗೆ ಮನೆ ಮನೆ ಸಂಪರ್ಕ ಮಾಡಿ ಜನರಿಗೆ ಮಾಹಿತಿ ನೀಡುವುದಕ್ಕೆ ಕಾರ್ಯಕರ್ತರು ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.
ಕಾವೂರಿನಲ್ಲಿ ಜರಗಿದ ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲದ ವಿಶೇಷ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ
ಅವರು ಮಾತನಾಡಿದರು. ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವು ಅಧಿ ಕಾರ ಉಳಿಸಿಕೊಳ್ಳಲು ಜನರನ್ನು ವಂಚಿಸುತ್ತಾ ಹೆಣಗಾಡುತ್ತಿದೆ. ಇಂಧನ ಮತ್ತು ವಿದ್ಯುತ್ ಬೆಲೆ ಏರಿಸಿದೆ. ಬಜೆಟ್ನಲ್ಲಿ ನೇಕಾರರು ಮತ್ತು ಮೀನುಗಾರರನ್ನು ನಿರ್ಲಕ್ಷಿಸಲಾಗಿದೆ. ಸಮಗ್ರ ಸಂಪನ್ಮೂಲ ಕ್ರೋಡೀಕರಿಸದೆ ಸಾಲಮನ್ನಾ ಘೋಷಿಸಿರುವುದು ಬೋಗಸ್ ಮಾತ್ರವಲ್ಲದೆ ಕಣೊರೆಸುವ ತಂತ್ರ ಎಂದರು.
ಸಂಘಟಿತ ಪ್ರಯತ್ನ ಅಗತ್ಯ
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ| ಬ್ರಿಜೇಶ್ ಚೌಟ ಕಾರ್ಯಕ್ರಮ ಉದ್ಘಾಟಿಸಿ ಕಳೆದ ಲೋಕಸಭಾ ಚುಣಾವಣೆಯ ವಿಜಯದ ಅಂತರವನ್ನು ಹೆಚ್ಚಿಸಲು ಕಾರ್ಯಕರ್ತರು ಸಂಘಟಿತ ಪ್ರಯತ್ನ ಮಾಡಬೇಕೆಂದರು.
ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಡಾ| ಭರತ್ ಶೆಟ್ಟಿ ವೈ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನಗರ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಅಶೋಕ ಕೃಷ್ಣಾಪುರ ಸಂಘಟನಾತ್ಮಕ ಕಾರ್ಯಕ್ರಮಗಳ ಬಗ್ಗೆ ವಿವರಣೆಯಿತ್ತರು, ಸುಧಾಕರ ಅಡ್ಯಾರ್ ಪೂರ್ವ ಕಾರ್ಯಕ್ರಮಗಳ ವರದಿಯ ಪರಿಶೀಲನೆ ನಡೆಸಿದರು. ಭರತ್ ರಾಜ್ ಕೃಷ್ಣಾಪುರ ಅವರನ್ನು ಸಮಿತಿಯ ಕಾರ್ಯದರ್ಶಿಯನ್ನಾಗಿ ನಿಯುಕ್ತಿಗೊಳಿಸಲಾಯಿತು. ಉಷಾ ಶೆಟ್ಟಿ ಕೋಡಿಕಲ್ ನಿರ್ಣಯ ಮಂಡಿಸಿದರು.
ಸಭೆಯ ನಿರ್ಣಯ
ಸುರತ್ಕಲ್ ರೈಲ್ವೇ ನಿಲ್ದಾಣದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಎರ್ನಾಕುಲಂ-ನಿಜಾಮುದ್ದೀನ್ ಮಂಗಳಾ ಎಕ್ಸ್ಪ್ರೆಸ್ ರೈಲುಗಾಡಿಯನ್ನು ಸುರತ್ಕಲ್ನಲ್ಲಿ ನಿಲುಗಡೆಗೊಳಿಸುವುದು, ಸುರತ್ಕಲ್ನಲ್ಲಿ ರೈಲ್ವೇ ನಿಲ್ದಾಣವನ್ನು ಸಮಗ್ರ ಅಭಿವೃದ್ಧಿಪಡಿಸುವುದು, ಸರಕು ಲಾರಿ ತಂಗುದಾಣ ರೋರೋ ಸೇವೆಯನ್ನು ಜೋಕಟ್ಟೆಗೆ ಸ್ಥಳಾಂತರಿಸುವುದು, ಜೊಕಟ್ಟೆಯಲ್ಲಿ ರೈಲು ನಿಲ್ದಾಣವನ್ನು ಸಾರ್ವಜನಿಕರು ದಾಟಲು ಕಾಲುದಾರಿ ಮೇಲ್ಸೇತುವೆಯನ್ನು ನಿರ್ಮಿಸುವುದು ಹಾಗೂ ಸುರತ್ಕಲ್ನಲ್ಲಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ರೈಲ್ವೇ ಸಚಿವರನ್ನು ಒತ್ತಾಯಿಸುವುದೆಂದು ನಿರ್ಣಯಿಸಲಾಯಿತು.