ದ.ಕ ಜಿಲ್ಲೆಯ ಎಲ್ಲಾ ದೇವಾಲಯಗಳ ಸೇವೆಗಳು ರದ್ದು: ಕೊರೊನಾ ಪ್ರಯೋಗಾಲಯ ಶೀಘ್ರದಲ್ಲಿ ಆರಂಭ
Team Udayavani, Mar 17, 2020, 1:04 PM IST
ಮಂಗಳೂರು: ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಾಸ್ಥಾನಗಳಲ್ಲಿ ಸೇವೆಗಳು ರದ್ದಾಗಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಮಾಹಿತಿ ನೀಡಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿದ ಅವರು, ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ಮಾಡಲು ಅವಕಾಶವಿರುವುದಿಲ್ಲ. ದರ್ಶನಕ್ಕೆ ಮಾತ್ರ ವ್ಯವಸ್ಥೆ ಮಾಡಿಕೊಡಲಾಗುವುದು. ದೇವಸ್ಥಾನದ ಉತ್ಸವಗಳಿದ್ದರೆ ಸಿಬ್ಬಂದಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ ಎಂದರು.
ರೈಲ್ವೇ ನಿಲ್ದಾಣಗಳಲ್ಲಿ ಇಂದಿನಿಂದ ನಿರಂತರವಾಗಿ ತಪಾಸಣೆ ಇರಲಿದ್ದು, ಬೀಚ್ ಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ ಎಂದರು.
ಕೊರೊನಾ ವೈರಸ್ ಬಗ್ಗೆ ದೇಶಾದ್ಯಂತ ಭಯಾನಕ ವಾತವರಣ ಸೃಷ್ಠಿಯಾಗಿದೆ. ಸರ್ಕಾರ ಇದನ್ನು ಸವಾಲಾಗಿ ಸ್ವೀಕರಿಸಿದೆ. ಕರ್ನಾಟಕಕ್ಕೆ ಬರುತ್ತಿರುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದೆ. ಈವರೆಗೂ 1.75 ಸಾವಿರ ಜನರ ಸ್ಕ್ಯಾಂನಿಗ್ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಈವರೆಗೆ 10 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದೆ. ಕಲಬುರುಗಿಯಲ್ಲಿ ಮೃತಪಟ್ಟ ವ್ಯಕ್ತಿಯ 4 ಮಂದಿ ಸಂಬಂಧಿಕರ ಪರೀಕ್ಷೆ ಮಾಡಲಾಗಿದೆ. ಅವರಲ್ಲಿ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕಾಸರಗೋಡುವಿನಲ್ಲಿ ಪಾಸಿಟಿವ್ ಪ್ರಕರಣ ಪತ್ತೆ ವಿಚಾರ: ದುಬೈನಿಂದ ಮಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆತನ ಪರಿಚಯಸ್ಥರು, ಸ್ನೇಹಿತರು, ಸಂಬಂಧಿಕರ ಮಾಹಿತಿಯನ್ನೂ ಕಲೆಹಾಕುತ್ತಿದ್ದಾರೆ.
ಮಂಗಳೂರಿನಲ್ಲಿ ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷಾ ಲ್ಯಾಬ್ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಯಲ್ಲಿ ಒಂದು ಲ್ಯಾಬ್ ತೆರೆಯಲಾಗುವುದು ಎಂದು ಸಚಿವ ಬಿ ಶ್ರೀರಾಮುಲು ಮಾಹಿತಿ ನೀಡಿದರು.