ಜೂನ್ ವರೆಗೆ ಸಂಪರ್ಕ ಕಡಿತ ಮಾಡದಿರಿ : ಮೆಸ್ಕಾಂಗೆ ಸಚಿವ ಕೋಟ ಸೂಚನೆ
Team Udayavani, May 13, 2020, 6:09 AM IST
ಮಂಗಳೂರು: ಗ್ರಾಹಕರು ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಮುಂದಿನ ಜೂನ್ ವರೆಗೆ ಗೃಹ ಬಳಕೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಾರದು ಹಾಗೂ ವಿದ್ಯುತ್ ದರ ಪ್ರಥಮ ಸ್ಲ್ಯಾಬ್ನಂತೆ 3.80 ರೂ.ಗೆ ನಿಗದಿಪಡಿಸಿ ಜನರಿಗೆ ಹೊರೆಯಾಗದಂತೆ ಪುನರ್ ಪರಿಶೀಲನೆ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮೆಸ್ಕಾಂನ ಭಾರೀ ವಿದ್ಯುತ್ ಶುಲ್ಕದ ಕುರಿತಂತೆ ಪ್ರಸ್ತಾವಿಸಿದ ಅವರು, ತಿಂಗಳಿಗೆ 250 ರೂ. ಬಿಲ್ ಬರುತ್ತಿದ್ದ ಹಲವು ಮನೆಗಳಿಗೆ ದುಪ್ಪಟ್ಟು ಬಿಲ್ ಬಂದಿದೆ.
ಲಾಕ್ಡೌನ್ ಸಂದರ್ಭ ಜನರು ಕಷ್ಟದಲ್ಲಿರುವಾಗ ಅವರಿಗೆ ಬರೆ ಹಾಕುವ ಕಾರ್ಯವನ್ನು ಮಾಡಬೇಡಿ. ಜನಸಾಮಾನ್ಯರಿಗೆ ಸ್ಲ್ಯಾಬ್ ಆಧಾರದಲ್ಲಿ ದರ ವಿಧಿಸಿ ತೊಂದರೆ ನೀಡಬಾರದು; ನೀವು ಮಾಡುತ್ತಿರುವುದು ವ್ಯಾಪಾರ ಅಲ್ಲ ಎಂದು ಹೇಳಿದರು.
ಸರಾಸರಿ ಬಿಲ್ ನೀಡಿಕೆ
ಈ ವೇಳೆ ಮೆಸ್ಕಾಂ ಅಧಿಕಾರಿ ಮಾತನಾಡಿ, ಲಾಕ್ಡೌನ್ ಸಂದರ್ಭ ಗೃಹ ಬಳಕೆ ವಿದ್ಯುತ್ ಹೆಚ್ಚಿಗೆ ಬಳಕೆಯಾಗಿದೆ. ಎಪ್ರಿಲ್, ಮೇ ತಿಂಗಳಿಗೆ ಒಂದೇ ಬಿಲ್ ನೀಡಲಾಗಿದೆ. ಗೃಹ ಬಳಕೆಯ ವಿದ್ಯುತ್ ದರವನ್ನು ಪರಾಮರ್ಶೆ ಮಾಡಿ ನೀಡಲಾಗುತ್ತಿದೆ.
ಒಟ್ಟು ಬಳಕೆಗೆ ಸಂಬಂಧಿಸಿ 30 ಯುನಿಟ್ ವರೆಗೆ 3.80 ರೂ. ದರದಲ್ಲಿ, 30ರಿಂದ 100 ಯುನಿಟ್ ವರೆಗೆ 5.20 ರೂ., 100-200 ಯುನಿಟ್ ಬಳಕೆಗೆ 6.75 ರೂ. ಹಾಗೂ 200ರಿಂದ ಮೇಲ್ಪಟ್ಟು 7.80 ರೂ. ದರದಲ್ಲಿ ಬಿಲ್ ನೀಡಲಾಗುತ್ತಿದೆ. ಎಪ್ರಿಲ್ನಲ್ಲಿ ನೀಡಿರುವುದು ಸರಾಸರಿ ಬಿಲ್. ಮೇಯಲ್ಲಿ ಒಟ್ಟು ಬಿಲ್ ಕೊಟ್ಟಾಗ ಅದು ಜಾಸ್ತಿಯಾದಂತೆ ತೋರುತ್ತಿದೆ ಎಂದರು.
ಶಾಸಕ ಯು.ಟಿ. ಖಾದರ್ ಮಾತನಾಡಿ, ಸಬ್ ಡಿವಿಜನ್ಗಳಲ್ಲಿ ಈ ಬಗ್ಗೆ ಅದಾಲತ್ ಮಾಡುವಂತೆ ಆಗ್ರ ಹಿಸಿದರು. ಶಾಸಕ ರಾಜೇಶ್ ನಾೖಕ್ ಮಾತನಾಡಿ, ಮೀಟರ್ ರೀಡಿಂಗ್ ಟೆಂಡರ್ ರದ್ದು ಮಾಡಿ ಸಬ್ಡಿವಿಜನ್ಗೆ ಕೊಡಿ ಎಂದು ಆಗ್ರಹಿಸಿದರು. ಸಚಿವ ಕೋಟ ಮಾತನಾಡಿ, ಇ-ಟೆಂಡರ್ ರದ್ದುಗೊಳಿಸಿ ಸಬ್ಡಿವಿಜನ್ ಆಧಾರದಲ್ಲಿ ಮೀಟರ್ ರೀಡಿಂಗ್ ಟೆಂಡರ್ ಮಾಡಿಸುವಂತೆ ಸೂಚಿ ಸಿದರು.
ಎಂಡಿಯನ್ನು ಕರೆಸಿದ ಸಂಸದ
ಸಭೆಯಲ್ಲಿ ಮೆಸ್ಕಾಂ ಎಂಡಿ ಅವರ ಗೈರುಹಾಜರಿಯನ್ನು ಪ್ರಶ್ನಿಸಿದ ಸಂಸದ ನಳಿನ್ ಕುಮಾರ್ ಕಟೀಲು ಅವರು ಕೂಡಲೇ ಸಭೆಗೆ ಹಾಜರಾಗುವಂತೆ ಸೂಚಿಸಿದರು. ಸ್ವಲ್ಪ ಸಮಯದ ಬಳಿಕ ಎಂಡಿ ಆಗಮಿಸಿದರು.
ಸಚಿವ ಕೋಟ ಅವರು ಜೂನ್ ವರೆಗೆ ಮನೆಗಳ ವಿದ್ಯುತ್ ಕಡಿತ ಮಾಡದಂತೆ ಎಂಡಿಗೂ ತಾಕೀತು ಮಾಡಿದರು. ವರ್ಷದ ಕಡಿಮೆ ಬಿಲ್ನ ಆಧಾರದಲ್ಲಿ ಸರಾಸರಿ ಬಿಲ್ ಮಾಡಬೇಕು ಎಂದು ಸೂಚಿಸಿದರು.