ದ.ಕ. ಜಿಲ್ಲೆಯಲ್ಲಿ ಕೋವಿಡ್ 19ಸೋಂಕಿಗೆ ಮತ್ತೊಂದು ಬಲಿ
Team Udayavani, Apr 30, 2020, 8:06 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಸೋಂಕಿಗೆ ಇಂದು ಇನ್ನೊಂದು ಬಲಿಯಾಗಿದೆ.
ಬಂಟ್ವಾಳ ತಾಲೂಕಿನ ಕಸಬಾ ಮೂಲದ ರೋಗಿ ಸಂಖ್ಯೆ ಪಿ-409 ಆಗಿದ್ದ 67 ವರ್ಷ ಪ್ರಾಯದ ವೃದ್ಧೆ ಕೋವಿಡ್ ಸೋಂಕಿಗೆ ಇಂದು ಬಲಿಯಾಗಿರುವ ಮಹಿಳೆಯಾಗಿದ್ದಾರೆ.
ಏಪ್ರಿಲ್ 18ರಂದು ಉಸಿರಾಟದ ತೊಂದರೆಯಿಂದ ಇವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದಕ್ಕೂ ಮೊದಲು ಈ ವೃದ್ಧೆ ಬಂಟ್ವಾಳದ ಖಾಸಗಿ ವೈದ್ಯರ ಬಳಿಯಲ್ಲಿ ತನ್ನ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಬಳಿಕ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೂ ಚಿಕಿತ್ಸೆಗೆ ಆಗಮಿಸಿದ್ದರು.
ಬಳಿಕ ವೃದ್ಧೆಯ ಉಸಿರಾಟದ ಸಮಸ್ಯೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆ ಅವರನ್ನು ಏಪ್ರಿಲ್ 18ರಂದು ಇದೀಗ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿರುವ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಲ್ಲಿ, ವೃದ್ಧೆಗಿದ್ದ ಆರೋಗ್ಯ ಸಮಸ್ಯೆಯನ್ನು ವೈರಲ್ ನ್ಯೂಮೋನಿಯಾ ಎಂದು ಪರಿಗಣಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೃದ್ಧೆಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷಗೆಂದು ಕಳುಹಿಸಲಾಗಿತ್ತು ಮತ್ತು ಏಪ್ರಿಲ್ 20ರಂದು ಬಂದ ವರದಿಯಲ್ಲಿ ಇವರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತ್ತು.
ಈ ವೃದ್ಧೆ ಗಂಭೀರ ಸ್ವರೂಪದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಮಧುಮೇಹ ಸಮಸ್ಯೆಯೂ ಇವರಿಗಿತ್ತು ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ. ಐಸಿಯುನಲ್ಲಿ ವೆಂಟಿಲೇಟರ್ ಸಹಾಯದಿಂದ ಉಸಿರಾಟ ನಡೆಸುತ್ತಿದ್ದ ವೃದ್ಧೆ ಇಂದು ಸಂಜೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.