ದ.ಕ.: ರವಿವಾರ ಹೊಸ ಕೋವಿಡ್-19 ಪ್ರಕರಣವಿಲ್ಲ
Team Udayavani, May 4, 2020, 6:19 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರವೂ ಹೊಸ ಕೋವಿಡ್-19 ಪ್ರಕರಣ ಕಂಡುಬಂದಿಲ್ಲ. ಈ ಮೂಲಕ ಎರಡನೇ ದಿನವೂ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ವರದಿಯಾಗಿಲ್ಲ.
ರವಿವಾರ ಒಟ್ಟು 114 ಮಂದಿಯ ಗಂಟಲ ದ್ರವ ಮಾದರಿಯ ವರದಿ ಬಂದಿದ್ದು, ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ರವಿವಾರ ಒಟ್ಟು 95 ಮಂದಿಯ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, 377 ವರದಿ ಬರಲು ಬಾಕಿ ಇದೆ. ಎನ್ಐಟಿಕೆಯಲ್ಲಿ ಒಟ್ಟು 68 ಮಂದಿ, ಇಎಸ್ಐ ಆಸ್ಪತ್ರೆಯಲ್ಲಿ 40 ಮಂದಿ ಕ್ವಾರಂಟೈನ್ನಲ್ಲಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳು, ಪತ್ರಕರ್ತರು ಸಹಿತ 113 ಮಂದಿಗೆ ಎ. 29, 30ರಂದು ಕೋವಿಡ್-19 ಪರೀಕ್ಷೆ ನಡೆಸಿತ್ತು. ಇದೀಗ ಕೋವಿಡ್-19 ಆರೋಗ್ಯ ತಪಾಸಣೆ ವರದಿ ನೆಗೆಟಿವ್ ಬಂದಿದೆ.
ಹೋಂ ಕ್ವಾರಂಟೈನ್ಗೆ
ಬಂಟ್ವಾಳದ ಕಸಬ ಗ್ರಾಮದಲ್ಲಿ ಪ್ರಥಮ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎನ್ಐಟಿಕೆಯಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದ ಬಂಟ್ವಾಳ ಮೂಲದ 49 ಮಂದಿಯ ಪೈಕಿ 29 ಮಂದಿಯ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಂಡಿದ್ದು, ಅವರ ಗಂಟಲ ದ್ರವ ಮಾದರಿ ವರದಿ ನೆಗೆಟಿವ್ ಬಂದಿದೆ.
ಇದೇ ಕಾರಣಕ್ಕೆ ಅವರನ್ನು ತಮ್ಮ ಮನೆಗಳಿಗೆ ಕಳುಹಿಸಲಾಗಿದ್ದು, ಹೋಂ ಕ್ವಾರಂಟೈನ್ನಲ್ಲಿ ರುವಂತೆ ಸೂಚಿಸಲಾಗಿದೆ. ಬಂಟ್ವಾಳದ ಮಹಿಳೆಗೆ ಔಷಧ ನೀಡಿದ ಖಾಸಗಿ ವೈದ್ಯನ ವರದಿ ಕೂಡ ನೆಗೆಟಿವ್ ಬಂದಿದೆ. ಇನ್ನು, ಉಡುಪಿ ಮೂಲದ 4 ಮಂದಿಯ ವರದಿ ಕೂಡ ನೆಗೆಟಿವ್ ಬಂದಿದ್ದು, ಅವರನ್ನು ಎನ್ಐ ಟಿಕೆಯಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಹಳೆ ಬಂದರಿಗೆ ಬಂದ ಖರ್ಜೂರ ಲಾರಿ: 12 ಮಂದಿಗೆ ಕ್ವಾರಂಟೈನ್
ಮುಂಬಯಿಯಿಂದ ಮಂಡ್ಯಕ್ಕೆ ಲಾರಿಯಲ್ಲಿ ಕೋವಿಡ್-19 ಸೋಂಕಿತ ಪ್ರಯಾಣಿಸಿದ್ದು, ಈ ಲಾರಿ ಮಂಗಳೂರಿನ ಬಂದರಿಗೆ ಬಂದಿತ್ತು ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಈ ಮಾಹಿತಿ ತಿಳಿದ ಆರೋಗ್ಯ ಇಲಾಖೆ 12 ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಿದೆ. ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷೆಯಲ್ಲಿದ್ದೇವೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯಾರಿ ತಿಳಿಸಿದ್ದಾರೆ.