ಕೋವಿಡ್ ಭ್ರಷ್ಟಾಚಾರ ಆರೋಪ ; ತನಿಖಾ ಆಯೋಗ ರಚನೆಗೆ ಡಿಕೆ ಶಿವಕುಮಾರ್ ಆಗ್ರಹ
Team Udayavani, Aug 1, 2020, 9:54 AM IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಬಂಟ್ವಾಳದ ಅವರ ನಿವಾಸದಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು.
ಮಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳ ಖರೀದಿ ಹಾಗೂ ಇತರ ವಿಷಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮತ್ತೆ ಪುನರುಚ್ಚರಿಸಿದ್ದು, ಈ ಬಗ್ಗೆ ರಾಜ್ಯ ಹೈಕೋರ್ಟ್ನ ಹಾಲಿ ನ್ಯಾಯಾಧೀಶರೊಬ್ಬರಿಂದ ತನಿಖೆ ನಡೆಸಲು ತನಿಖಾ ಆಯೋಗ ರಚಿಸಬೇಕೆಂದು ಆಗ್ರಹಿಸಿದ್ದಾರೆ.
ಕೋವಿಡ್ ಕುರಿತಂತೆ ಸರಕಾರದ ವಿವಿಧ ಇಲಾಖೆಗಳು 4,000 ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿವೆ ಎಂಬುದಾಗಿ ಸರಕಾರ ಲೆಕ್ಕ ಕೊಟ್ಟಿದ್ದು, ಇದರಲ್ಲಿ 2,000 ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ಸಚಿವರು ಮತ್ತು ಅಧಿಕಾರಿಗಳು ತಮ್ಮ ಜೇಬಿಗಿಳಿಸಿದ್ದಾರೆ ಎಂದವರು ಶನಿವಾರ ಮಂಗಳೂರಿನ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಆರೋಪಕ್ಕೆ ರಾಜ್ಯದ ಸಚಿವರು ಪ್ರತ್ಯಾರೋಪದ ರೂಪದಲ್ಲಿ ಹಿಂದಿನ ಸರಕಾರಗಳ ಅವಧಿಯಲ್ಲಿಯೂ ದುಬಾರಿ ಬೆಲೆಗೆ ಉಪಕರಣಗಳನ್ನು ಖರೀದಿಸಿದ ಉದಾಹರಣೆಗಳಿವೆ ಎಂದು ಹೇಳಿಕೆ ನೀಡಿದ್ದು, ಅಂತಹ ಪ್ರಕರಣಗಳಿದ್ದರೆ ಅದನ್ನು ಕೂಡ ತನಿಖಾ ಆಯೋಗದ ವ್ಯಾಪ್ತಿಗೆ ತರಲಿ ಎಂದು ಡಿಕೆಶಿ ಅವರು ಆಗ್ರಹಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಕೈಗೊಳ್ಳುತ್ತಿರುವ ಎಲ್ಲ ಕ್ರಮಗಳಿಗೆ ಕಾಂಗ್ರೆಸ್ ಪಕ್ಷ ಸಹಕಾರ ನೀಡುತ್ತಿದೆ. ಕೇವಲ 4 ಗಂಟೆಗಳಲ್ಲಿ ಲಾಕ್ಡೌನ್ ಘೋಷಿಸಿದ್ದರೂ ಸಹಕಾರ ನೀಡಿದ್ದೇವೆ. ಆದರೆ ಸರಕಾರದ ಭ್ರಷ್ಟಾಚಾರಕ್ಕೆ ಬೆಂಬಲ ನಿಡುವುದಿಲ್ಲ ಎಂದರು.
ಕಾಂಗ್ರೆಸ್ನಿಂದ “ಆರೋಗ್ಯ ಹಸ್ತ’
ಕೊರೊನಾಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು “ಆರೋಗ್ಯ ಹಸ್ತ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದೆ. ಜನ ಸಾಮಾನ್ಯರ ಆರೋಗ್ಯ ತಪಾಸಣೆಗೆ ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಿ, ರಾಜ್ಯದ ಪ್ರತಿಯೊಂದು ಗ್ರಾ. ಪಂ. ಹಾಗೂ ಪಟ್ಟಣ/ ನಗರದ ವಾರ್ಡ್ಗಳಲ್ಲಿ ಕೊರೊನಾ ರೋಗ ಲಕ್ಷಣ ಇರುವವರನ್ನು ಗುರುತಿಸಿ ಅರೋಗ್ಯ ಇಲಾಖೆಗೆ ಮಾಹಿತಿ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಡಿಕೆಶಿ ವಿವರಿಸಿದರು.
ಕೋವಿಡ್ ಗೆ ಸಂಬಂಧಿತ ಉಪಕರಣಗಳನ್ನು ಮಾರುಕಟ್ಟೆ ಬೆಲೆಗಿಂತ ಅಧಿಕ ಬೆಲೆ ನೀಡಿ ಖರೀದಿ ಮಾಡುವ ಮೂಲಕ ಭ್ರಷ್ಟಾಚಾರ ನಡೆಸಲಾಗಿದೆ. ವಿವಿಧ ಇಲಾಖೆಗಳ ಸಹಿತ ಕೇಂದ್ರ ಸರಕಾರ ಖರೀದಿಸಿ ಸರಬರಾಜು ಮಾಡಿರುವ ಉಪಕರಣಗಳ ಮೌಲ್ಯ 50 ಕೋಟಿ ರೂ. ಸೇರಿದಂತೆ ಒಟ್ಟು 4,167 ಕೋಟಿ ರೂ. ಕೊರೊನಾಗೆ ಸಂಬಂಧಿಸಿ ವೆಚ್ಚ ಮಾಡಲಾಗಿದೆ ಎಂಬುದಾಗಿ ಅಧಿಕೃತ ಮಾಹಿತಿ ನೀಡಲಾಗಿದೆ. ಆದರೆ ಈ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ ಎಂದರಲ್ಲದೇ “ಕೊರೊನಾದಲ್ಲೂ ಭ್ರಷ್ಟಾಚಾರ, ಬಿಜೆಪಿ ಸರಕಾರದ “ಸಂಸ್ಕಾರ’ ಎಂಬ ಕಿರು ಪುಸ್ತಕವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಸರಕಾರ ಪಾರದರ್ಶಕವಾಗಿದೆ ಎಂದು ಮುಖ್ಯಮಂತ್ರಿ ಮತ್ತು ಸಚಿವರು ಹೇಳುತ್ತಿದ್ದಾರೆ. ಪಾರ ದರ್ಶಕವಾಗಿ ಇದ್ದರೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಸಭೆ ನಡೆಸಲು ಬಿಡುತ್ತಿಲ್ಲ ಏಕೆ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರಶ್ನಿಸಿದರು.
ನಾವು ಮಾಡುತ್ತಿರುವ ಆರೋಪ ಗಳಿಗೆ ದಾಖಲೆಗಳಿವೆ ಎಂದ ಅವರು ಸರಕಾರ ನನ್ನ ಮೇಲೆ ಕೇಸ್ ಹಾಕಲಿ, ಮಾನನಷ್ಟ ಮೊಕದ್ದಮೆ ಹೂಡಲಿ ಅಥವಾ ಬೇಕಾದರೆ ಬಂಧಿಸಲಿ. ಆದರೆ ಹಗರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಉಚಿತ ಚಿಕಿತ್ಸೆ ನೀಡಲಿ ಕೋವಿಡ್ ಸೋಂಕಿತರಿಗೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಒದಗಿ ಸುವ ವ್ಯವಸ್ಥೆ ಆಗಬೇಕೆಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಶಾಸಕ ಯು.ಟಿ. ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಮತ್ತು ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ.ಆರ್. ಲೋಬೊ,. ಶಕುಂತಳಾ ಶೆಟ್ಟಿ, ಐವನ್ ಡಿ’ಸೋಜಾ, ಬಿ.ಎಂ. ಮೊದಿನ್ ಬಾವಾ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತಿತರರು ಉಪಸ್ಥಿತರಿದ್ದರು.
ವೀಡಿಯೋ ಬ್ಲ್ಯಾಕ್ಮೇಲ್
ವೈದ್ಯಕೀಯ ಉಪಕರಣ ಖರೀದಿಯಲ್ಲಿ ಬಿಜೆಪಿ ಸರಕಾರ ಲೂಟಿ ಮಾಡಿರುವ ಬಗ್ಗೆ ಕಾಂಗ್ರೆಸ್ ಜನರ ಮುಂದೆ ಹೇಳಿಕೆ ನೀಡುತ್ತಿದ್ದಂತೆ ಭ್ರಮ ನಿರಸನಗೊಂಡ ಬಿಜೆಪಿ ಪಕ್ಷವು ವೀಡಿಯೋ ಬ್ಲ್ಯಾಕ್ಮೇಲ್ಗೆ ಮುಂದಾಗಿದೆ ಎಂದು ಡಿಕೆಶಿ ಆರೋಪಿಸಿದ್ದಾರೆ. ಜನರ ಹಾದಿ ತಪ್ಪಿಸಲು ಬಿಜೆಪಿ ಇದೀಗ ವೀಡಿಯೋ ಬಿಡುಗಡೆ ಮಾಡುತ್ತೇವೆ ಎಂಬ ಬೆದರಿಕೆ ತಂತ್ರ ಉಪಯೋಗಿಸುತ್ತಿದ್ದಾರೆ. ವೀಡಿಯೋ ಇದ್ದರೆ ತತ್ಕ್ಷಣ ಬಿಡುಗಡೆ ಮಾಡಲಿ ಎಂದವರು ಬೆಳ್ತಂಗಡಿಯಲ್ಲಿ ತಿಳಿಸಿದರು.
ಡಿಕೆಶಿ ಮಿಂಚಿನ ಸಂಚಾರ
ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರು ದಾರಿ ಮಧ್ಯೆ ಪದವಿನಂಗಡಿಯಲ್ಲಿರುವ ರಾಜ್ಯಸಭೆ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮನೆಗೆ, ಅಲ್ಲಿಂದ ಬಿಷಪ್ಸ್ ಹೌಸ್, ಜಿಲ್ಲಾ ಕಾಂಗ್ರೆಸ್ ಭವನ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಭೋಜನ ಸ್ವೀಕರಿಸಿದರು. ಆಬಳಿಕ ಮುಡಿಪು, ಬಂಟ್ವಾಳದಲ್ಲಿ ಬಿ. ಜನಾರ್ದನ ಪೂಜಾರಿ ಭೇಟಿ ಮಾಡಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು.
ನಮ್ಮ ಗುರಿ ಪಕ್ಷ ಸಂಘಟನೆ
ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿಕೆಶಿ, 15 ಮಂದಿ ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲ 224 ಮಂದಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ ಅವರು ಕೇವಲ 15 ಮಂದಿ ಶಾಸಕರನ್ನು ಮಾತ್ರ ಯಾಕೆ ಹೇಳುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಎಷ್ಟು ಶಾಸಕರನ್ನಾದರೂ ತಮ್ಮ ಬಳಿ ಸೇರಿಸಿಕೊಳ್ಳಲಿ, ನಮ್ಮ ಗುರಿ ಪಕ್ಷ ಸಂಘಟನೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
UV Fusion: ಇಂಡಿ ಪಂಪ್ ಮಟ..
Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ