ರಾಜಕಾಲುವೆಯಿಂದ ತೆಗೆದ ಹೂಳು ಮತ್ತೆ ಕಾಲುವೆಗೆ!
Team Udayavani, Apr 26, 2022, 11:44 AM IST
ಮಹಾನಗರ: ನಗರದ ರಾಜ ಕಾಲುವೆಯ ಹೂಳೆತ್ತುವ ಕಾಮಗಾರಿ ಬಹುತೇಕ ಪೂರ್ಣವಾಗಿದ್ದರೂ ಕಾಲುವೆ ಯಿಂದ ತೆಗೆದ ಹೂಳನ್ನು ಅಲ್ಲೇ ಬದಿಯಲ್ಲಿ ಪೇರಿಸಿಟ್ಟ ಪರಿಣಾಮ ನಗರದ ಕೆಲವೆಡೆ ಹೂಳು ಮತ್ತೆ ತೋಡು ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ!
ಮಳೆಗಾಲದ ಪೂರ್ವ ಭಾವಿಯಾಗಿ ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ವಾಗುವ ನಿಟ್ಟಿನಲ್ಲಿ ರಾಜಕಾಲುವೆಯ ಹೂಳೆತ್ತುವ ಕಾಮಗಾರಿ ನಗರದ ವಿವಿಧ ಕಡೆಗಳಲ್ಲಿ ಭರದಿಂದ ಸಾಗುತ್ತಿದೆ. ಜತೆಗೆ ಸಣ್ಣ ಪುಟ್ಟ ಚರಂಡಿ, ತೋಡಿನ ಹೂಳು ಕೂಡ ಅಲ್ಲಲ್ಲಿ ತೆಗೆಯಲಾಗುತ್ತಿದೆ. ಆದರೆ ತೆಗೆದ ಹೂಳನ್ನು ಕೆಲವು ಕಡೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎಂಬುದು ಸದ್ಯ ಎದುರಾದ ಆರೋಪ.
ನಿಯಮ ಪ್ರಕಾರ ತೋಡಿನಿಂದ ಹೂಳನ್ನು ಜೆಸಿಬಿ ಮುಖೇನ ತೆಗೆದು ಅದನ್ನು ಸೂಕ್ತ ಸ್ಥಳಕ್ಕೆ ಕೊಂಡೊಯ್ದು ವಿಲೇವಾರಿ ಮಾಡಬೇಕು. ಆದರೆ ವಿಲೇವಾರಿ ಬಗ್ಗೆ ಗಮನ ನೀಡದ ಗುತ್ತಿಗೆದಾರರು ತೋಡಿನ ಬದಿಯಲ್ಲಿಯೇ ಹೂಳನ್ನು ಪೇರಿಸಿಟ್ಟು ಕೈ ತೊಳೆಯುವ ಪರಿಸ್ಥಿತಿ ನಗರದ ಕೆಲವು ಕಡೆ ಆಗಿದೆ. ತೋಡಿನಿಂದ ಹೂಳು ತೆಗೆಯುವುದು ಮಾತ್ರ ಕಾಮಗಾರಿ ಎಂದಷ್ಟೇ ಭಾವಿಸಿದ ಗುತ್ತಿಗೆದಾರರು ಹೂಳು ವಿಲೇವಾರಿ ಬಗ್ಗೆ ಹೆಚ್ಚು ಗಮನ ನೀಡಿದಂತಿಲ್ಲ.
ಮಳೆಗೆ ಮತ್ತೆ ತೋಡಿಗೆ!
ಮಳೆ ನೀರು ಸರಾಗವಾಗಿ ಹರಿಯ ಬೇಕು ಎಂಬ ಕಾರಣದಿಂದ ಹೂಳು ತೆಗೆಯಲಾಗುತ್ತದೆ. ಆದರೆ ತೆಗೆದ ಹೂಳನ್ನು ರಾಜಕಾಲುವೆಯ ಬದಿಯಲ್ಲಿ ಇಟ್ಟರೆ ಮಳೆ ಬಂದು ಮತ್ತೆ ಹೂಳು ಕಾಲುವೆ ಸೇರುವಂತಾಗುತ್ತದೆ. ಜತೆಗೆ ತೆಗೆದ ಹೂಳು ರಸ್ತೆಗೆ ಬಿದ್ದು ವಾಹನ ಸವಾರರಿಗೂ ಸಮಸ್ಯೆ ಆಗುವ ಸಾಧ್ಯತೆಯಿದೆ.
ರಾಜಕಾಲುವೆಗೆ ತಡೆಗೋಡೆ ಭದ್ರತೆ
ನಗರದ ವಿವಿಧ ಕಡೆಗಳಲ್ಲಿ ರಾಜಕಾಲು ವೆಯ ಬದಿಯ ರಕ್ಷಣೆಗಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರ ಕಾಮಗಾರಿ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ. ಇದು ಈ ಮಳೆಗಾಲದ ಮುನ್ನ ಪೂರ್ಣಗೊಂಡರೆ ನಗರದ ವಿವಿಧ ಕಡೆಗಳ ನೆರೆ ನೀರಿನ ಸಮಸ್ಯೆ ಪರಿಹಾರವಾಗಬಹುದು.
ವಿಲೇವಾರಿಗೆ ಕ್ರಮ
ನಗರದ ಬಹುತೇಕ ರಾಜಕಾಲುವೆಯ ಹೂಳೆತ್ತುವ ಕಾಮಗಾರಿ ಈಗಾಗಲೇ ನಡೆದಿದ್ದು, ಉಳಿದ ಕಡೆಯಲ್ಲಿ ಕಾಮಗಾರಿ ಈಗಲೂ ನಡೆಯುತ್ತಿದೆ. ಆದರೆ ತೆಗೆದ ಹೂಳಿನ ನೀರಿನ ಅಂಶ, ವಾಸನೆ ಹೋಗಲಿ ಎಂಬ ಕಾರಣಕ್ಕೆ ಒಂದೆರಡು ದಿನ ಹಾಗೆಯೇ ಇಟ್ಟಿರುತ್ತಾರೆ. ಬಳಿಕ ವಿಲೇವಾರಿ ಮಾಡಲಾಗುತ್ತದೆ. ಒಂದು ವೇಳೆ ತೋಡಿನ ಬದಿಯ ಹೂಳು ತೆಗೆಯದಿದ್ದರೆ ಅದರ ವಿಲೇವಾರಿಗೆ ಸೂಚಿಸಲಾಗುವುದು. –ಪ್ರೇಮಾನಂದ ಶೆಟ್ಟಿ, ಮೇಯರ್, ಮಹಾನಗರ ಪಾಲಿಕೆ