ರಾಜ್ಯ, ಕೇಂದ್ರ ಸರಕಾರದಿಂದ ಕಾರ್ಮಿಕರಿಗೆ ಸೌಲಭ್ಯ
Team Udayavani, Apr 26, 2022, 1:00 PM IST
ಕಾವೂರು: ಕರ್ನಾಟಕ ಮತ್ತೆ ಕೇಂದ್ರ ಸರಕಾರ ಕಾರ್ಮಿಕ ವರ್ಗಕ್ಕೆ ಹೆಚ್ಚಿನ ಸೌಲಭ್ಯ ಒದಗಿಸಲು ಆದ್ಯತೆ ನೀಡಿದೆ. ಕಾರ್ಮಿಕ ಕಾರ್ಡ್ನಿಂದ ಹಲವಾರು ಪ್ರಯೋಜನ ಸಿಗಲಿದೆ.ಇದರ ಸದುಪಯೋಗವನ್ನು ಕಾರ್ಮಿಕ ಕುಟುಂಬ ಪಡೆಯಬೇಕೆಂದು ಶಾಸಕ ಡಾ| ಭರತ್ ಶೆಟ್ಟಿ ವೈ. ನುಡಿದರು.
ಕರ್ನಾಟಕ ಸರಕಾರ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಬಿಜೆಪಿ ಕಾವೂರು ಮತ್ತು ಅಕಾಶಭವನ ಶಕ್ತಿ ಕೇಂದ್ರದ ಸಹಭಾಗಿತ್ವದಲ್ಲಿ ಸೋಮವಾರ ಅಕಾಶಭವನ ತ್ರಿವರ್ಣ ಫ್ರೆಂಡ್ಸ್ ಕ್ಲಬ್ ಎದುರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ವಿಶ್ವಸ್ಥ ಮಂಡಳಿಯ ವೇದಿಕೆಯಲ್ಲಿ ವಾರ್ಡ್ 18 ವ್ಯಾಪ್ತಿಯ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗಾಗಿ ನಡೆಯುವ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಂಚೆ ಇಲಾಖೆಯಲ್ಲಿ ಕಾರ್ಮಿಕರಿಗೆ ಸಿಗುವ ಕಾರ್ಮಿಕ ಕಾರ್ಡ್ನಿಂದ ಸೌಲಭ್ಯ ಪಡೆಯಬಹುದಾಗಿದೆ. ಸರಕಾರದ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸಾ ಸೌಲಭ್ಯ, ಮಕ್ಕಳಿಗೆ ವಿದ್ಯಾರ್ಥಿ ವೇತನ ಸಹಿತ ಸೌಲಭ್ಯಗಳು ಒಂದೇ ಕಾರ್ಡ್ನಲ್ಲಿ ಸಿಗಲಿದೆ. ಕಾರ್ಮಿಕ ಇಲಾಖೆಯಿಂದಲೂ ಕಾರ್ಮಿಕರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಜಾಗೃತಿ ಕಾರ್ಯಕ್ರಮ ಪ್ರತೀ ಕ್ಷೇತ್ರದಲ್ಲಿ ಹಮ್ಮಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಮನಪಾ ಸದಸ್ಯೆ ಗಾಯತ್ರಿ ಎ. ರಾವ್, ವಾರ್ಡ್ ಬಿಜೆಪಿ ಪ್ರಮುಖರು, ತ್ರಿವರ್ಣ ಫ್ರೆಂಡ್ಸ್ನ ಪ್ರಮುಖರು, ಗಣೇಶೋತ್ಸವ ಸಮಿತಿಯ ಪ್ರಮುಖರು, ಕಾರ್ಮಿಕ ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು, ಸ್ಥಳೀಯ ನಿವಾಸಿಗಳು, ಬಿಜೆಪಿ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.