ಮಂಗಳೂರಿನ ಪುರಾತನ ‘ಮಹಾತ್ಮಾ ಗಾಂಧಿ ಮ್ಯೂಸಿಯಂ’ ಪುನಃಶ್ಚೇತನ
ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ವಸ್ತು ಸಂಗ್ರಹಾಲಯ
Team Udayavani, Jun 30, 2022, 4:34 PM IST
ಡೊಂಗರಕೇರಿ: ನಗರದ ಕೆನರಾ ಹೈಸ್ಕೂಲ್ನಲ್ಲಿ ಸ್ವಾತಂತ್ರ್ಯಾ ಪೂರ್ವದಲ್ಲಿ ಆರಂಭವಾಗಿದ್ದ ‘ಮಹಾತ್ಮಾಗಾಂಧಿ ಮ್ಯೂಸಿಯಂ’ ಹೊಸ ಸ್ವರೂಪದಲ್ಲಿ ಪುನಃಶ್ಚೇತನಗೊಳ್ಳಲು ಅಣಿಯಾಗಿದೆ.
ಶಾಲೆಯ ದಾಖಲೆಗಳ ಪ್ರಕಾರ 1919ರಲ್ಲಿ ಮ್ಯೂಸಿಯಂ ಅಸ್ತಿತ್ವಕ್ಕೆ ಬಂದಿತ್ತು. ಕೆನರಾ ಹೈಸ್ಕೂಲ್ ಮ್ಯೂಸಿಯಂ ಎಂದು ನಾಮಕರಣವಿತ್ತು. ಬಳಿಕ ಶಾಲೆಯ ಆವರಣದಲ್ಲಿರುವ ಸುಬ್ಬರಾವ್ ಪೈ ಸ್ಮಾರಕ ಭವನದ ಕಲಾತ್ಮಕ ಬಾಲ್ಕನಿಯಲ್ಲಿ ಮ್ಯೂಸಿಯಂ ನಡೆಯಿತು.
ಮಹಾತ್ಮಾ ಗಾಂಧೀಜಿ ಅವರ ಕೆನರಾ ಹೈಸ್ಕೂಲ್ ಭೇಟಿ ನೆನಪಿಗಾಗಿ 1939ರಲ್ಲಿ ಗಾಂಧೀಜಿಯವರ ಅನುಮತಿಯ ಮೇರೆಗೆ ಮ್ಯೂಸಿಯಂ ಹೆಸರು “ಮಹಾತ್ಮಾ ಗಾಂಧಿ ಮ್ಯೂಸಿಯಂ’ ಎಂದು ನಾಮಕರಣ ಮಾಡಲಾಗಿತ್ತು.
ಮಹಾತ್ಮಾ ಗಾಂಧೀಜಿಯವರು 1934 ಫೆ. 25ರಂದು ಸಾರ್ವಜನಿಕ ಕೃಷ್ಣಮಂದಿರಕ್ಕೆ ಶಿಲಾನ್ಯಾಸ ಮಾಡಲು ಕೆನರಾ ಶಾಲೆಗೆ ಭೇಟಿ ನೀಡಿದ್ದರು. ಶಾಲಾ ಕಾಂಪೌಂಡಿನಲ್ಲಿ ಅಂದು ಸಭೆ ನಡೆದಿತ್ತು.
ಸುದೀರ್ಘ ವರ್ಷದವರೆಗೂ ಮ್ಯೂಸಿಯಂ ಹಲವು ವಿಶೇಷತೆಗಳ ಜತೆಗೆ ಕಾರ್ಯನಿರ್ವಹಿಸುತ್ತಿತ್ತು. ದೇಶ- ವಿದೇಶದ ಮಂದಿ ಇಲ್ಲಿಗೆ ಬಂದು ಮ್ಯೂಸಿಯಂ ನೋಡಿದ್ದರು, ಪತ್ರದ ಮೂಲಕವೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಲಕ್ರಮೇಣ ಈ ಕೇಂದ್ರಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ನಿರ್ವಹಣೆಯೂ ಆಗಿರಲಿಲ್ಲ. ಇಂತಹ ಮ್ಯೂಸಿಯಂನ ಶ್ರೇಷ್ಠತೆಯನ್ನು ಸಮಾಜಕ್ಕೆ ತಿಳಿಯಪಡಿಸುವ ಸದುದ್ದೇಶದಿಂದ ಇದೀಗ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ವತಿಯಿಂದ ಮ್ಯೂಸಿಯಂ ಅನ್ನು ನವೀಕ ರಿಸಲು ನಿರ್ಧರಿಸಲಾಗಿದೆ. ಮೂಲ ಚೆಲುವಿಗೆ ಧಕ್ಕೆ ಆಗದಂತೆ ಹೊಸತನವನ್ನು ನೀಡಿ ಆಕರ್ಷಕ ಮ್ಯೂಸಿಯಂ ನಿರ್ಮಿಸುವುದು ಯೋಜನೆಯ ಉದ್ದೇಶ.
1935ರಲ್ಲಿ ಹೊಸ ಕಟ್ಟಡ ಉದ್ಘಾಟನೆ 1934 ಮಾ. 31ರಂದು ಇಲ್ಲಿನ ಕಟ್ಟಡದ ಭೂಮಿಪೂಜೆ ನಡೆದು, 1935 ಅ. 15ರಂದು ಉದ್ಘಾಟನೆ ಆಗಿತ್ತು. ಅಂದಿನ ಮದ್ರಾಸ್ ಗವರ್ನರ್ ಲಾರ್ಡ್ ಇರ್ಸ್ಕಿನ್ ಉದ್ಘಾಟಿಸಿದ್ದರು.
ಇದಕ್ಕೂ ಮುನ್ನ ಅವರಿಗೆ ಶಾಲಾಡಳಿತದಿಂದ ಕಳುಹಿಸಲಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಮ್ಯೂಸಿಯಂ ಬಗ್ಗೆ ಉಲ್ಲೇಖ ಮಾಡಲಾಗಿತ್ತು. “ಕಟ್ಟಡದ ಕೆಳ ಭಾಗದಲ್ಲಿ ಶಾಲೆಯ ಗ್ರಂಥಾಲಯ ಹಾಗೂ ಮೇಲ್ಭಾಗದಲ್ಲಿ ಮ್ಯೂಸಿಯಂ ಇದೆ. ಮಕ್ಕಳ ಬೌದ್ಧಿಕ ಆಸಕ್ತಿಗೆ ಉತ್ತೇಜ ನದಾಯಕ ಸಂಗತಿಗಳು ಇಲ್ಲಿವೆ. ಕಟ್ಟಡದ ಕೆಳ ಅಂತಸ್ತು 2,400 ಚ.ಅಡಿ ಇದ್ದು, ಮೇಲ್ಭಾಗದ ಬಾಲ್ಕನಿ 1520 ಚ.ಅಡಿ ಇದೆ. ಸುಮಾರು 10 ಸಾವಿರ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ಅಮೂಲ್ಯ ವಸ್ತುಗಳ ಸಂಗ್ರಹಗಾರ
ಮ್ಯೂಸಿಯಂನಲ್ಲಿ ವಿವಿಧ ರೀತಿಯ ಜಿಂಕೆಯ ಕೊಂಬುಗಳ ಸಹಿತ ಪ್ರಾಣಿಗಳ ಅಸ್ಥಿಪಂಜರಗಳು, ಆಮೆ ಚಿಪ್ಪುಗಳು, ಆಸ್ಟ್ರಿಚ್ ಮೊಟ್ಟೆಗಳು, ಚಿಪ್ಪುಗಳು, ಹವಳಗಳು, ಪ್ರಾಣಿಗಳ ಹಲ್ಲು, ಉಗುರುಗಳ ಸಂಗ್ರಹವಿತ್ತು. ಕರೆನ್ಸಿ, ಪ್ರತಿಮೆಗಳು, ಪಾತ್ರೆಗಳು, ಪುರಾತನ ಗ್ಯಾಜೆಟ್, ಹಳೆಯ ರೇಡಿಯೋ, ತಾಳೆ ಎಲೆಗಳ ಮೇಲೆ ಬರೆದ ಶಾಸನಗಳ ಸಹಿತ ಹಲವು ಅಮೂಲ್ಯ ವಸ್ತುಗಳು ಕೇಂದ್ರದಲ್ಲಿತ್ತು. ಮ್ಯೂಸಿಯಂ ಪುನಃಶ್ಚೇತನದ ಹಿನ್ನೆಲೆಯಲ್ಲಿ ಅಮೂಲ್ಯ ವಸ್ತುಗಳನ್ನು ಹೈಸ್ಕೂಲ್ನಲ್ಲಿ ಪ್ರತ್ಯೇಕವಾಗಿ ಜೋಡಿಸಿಡಲಾಗಿದೆ. ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳು ಅಮೂಲ್ಯ ವಸ್ತುಗಳು -ಆರ್ಥಿಕವಾಗಿ ನೆರವಾಗುತ್ತಿದ್ದಾರೆ.
ಹಳೆ ವಿದ್ಯಾರ್ಥಿಗಳಿಂದ ಸ್ಪಂದನೆ: ಕೆನರಾ ಶಿಕ್ಷಣ ಸಂಸ್ಥೆಯಲ್ಲಿರುವ ಮಹಾತ್ಮಾಗಾಂಧಿ ಮ್ಯೂಸಿಯಂನ ಮೂಲಸ್ವರೂಪವನ್ನು ಹಾಗೆಯೇ ಇರಿಸಿ ಪುನಃಶ್ಚೇತನ ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಹಳೆ ವಿದ್ಯಾರ್ಥಿಗಳು ತಮ್ಮ ಸಂಗ್ರಹದ ಹಳೆಯ ಕಾಲದ ಅಮೂಲ್ಯ ವಸ್ತುಗಳನ್ನು ನೀಡಬಹುದಾಗಿದೆ. ಕೆನರಾ ಸಂಸ್ಥೆ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನವಾದ ನ. 19ರಂದು ಇದರ ಲೋಕಾರ್ಪಣೆಗೊಳ್ಳಲಿದೆ. –ನರೇಶ್ ಶೆಣೈ, ಆಡಳಿತ ಮಂಡಳಿ ಸದಸ್ಯರು ಕೆನರಾ ಹೈಸ್ಕೂಲ್ ಅಸೋಸಿಯೇಶನ್-ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ