ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ: ರಮಾನಾಥ ರೈ ಆಕ್ರೋಶ
Team Udayavani, Feb 14, 2020, 1:30 PM IST
ಮಂಗಳೂರು: ಏಕಾಏಕಿ ಅಡುಗೆ ಅನಿಲ ದರ ಇಷ್ಟು ದರ ಏರಿಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಸರಕಾರ ಇದ್ದಾಗ ಸ್ವಲ್ಪ ಹೆಚ್ಚಳ ಮಾಡಿದರೂ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಡುಗೆ ಅನಿಲ ದರ ಏರಿಕೆ ಸಾಮಾನ್ಯ ಜನರ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಡುಗೆ ಅನಿಲ ದರ ಹೆಚ್ಚಳ ವಿಚಾರವಾಗಿ ಅವರು ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ಬಿಜೆಪಿ ಬಂದ ಬಳಿಕ ರಾಜ್ಯದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಪ್ರಕೃತಿ ವಿಕೋಪದ ಹಣ ಯಾವ ಜಿಲ್ಲೆಗೂ ಬಿಡುಗಡೆ ಆಗಿಲ್ಲ. ಶಾಸಕರ ನಿಧಿಗೆ ಹಣ ಬಿಡುಗಡೆ ಆಗಿಲ್ಲ. 2800 ಕೋಟಿ ಹಣ ರಾಜ್ಯಕ್ಕೆ ಬಾಕಿ ಇದೆ, ಪಂಚಾಯತ್ ನಲ್ಲಿ ಆಗುತ್ತಿದ್ದ ಸ್ವಲ್ಪ ಕೆಲಸ ಕೂಡ ಆಗುತ್ತಿಲ್ಲ ಎಂದರು.
ಸರಕಾರ ಅಕ್ಕಿ ಕೊಡುವ ಬಗ್ಗೆ ಕೂಡ ಯೋಚನೆ ಮಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲದಲ್ಲಿ ಯಾವುದೇ ಹಣಕಾಸಿನ ಕೊರತೆ ಆಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವರಿಗೆ ಅವರ ರಾಜಕೀಯ ಅನುಭವದಷ್ಟೇ ವಯಸ್ಸಾಗಿದೆ. ನಮ್ಮ ಜಿಲ್ಲೆಯ ಪರಿಶಿಷ್ಟ ಜಾತಿಯವರನ್ನು ಮಂತ್ರಿ ಮಾಡುವ ಯೋಗ್ಯತೆ ಅವರಿಗಿಲ್ಲ ಎಂದು ಅವರು ಆರೋಪಿಸಿದರು.