ಮಂಗಳ ಕ್ರೀಡಾಂಗಣಕ್ಕೆ ಸಚಿವ ಯು.ಟಿ. ಖಾದರ್ ಭೇಟಿ
Team Udayavani, Aug 6, 2018, 12:17 PM IST
ಮಹಾನಗರ: ಮಂಗಳ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಸೂಚನೆ ನೀಡಿದರು. ರವಿವಾರ ಮಂಗಳ ಕ್ರೀಡಾಂಗಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಭೇಟಿ ನೀಡಿದ್ದು, ಕ್ರೀಡಾಂಗಣದ ಸಮಸ್ಯೆಗಳ ಬಗ್ಗೆ ಕ್ರೀಡಾಂಗಣ ಸಮಿತಿಯ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು. ಮಂಗಳ ಕ್ರೀಡಾಂಗಣದ ಅಭಿವೃದ್ಧಿಗೆ ಸಂಪನ್ಮೂಲ ಕ್ರೋಡೀಕರಿಸಲು ಮಳಿಗೆಗಳ ವಾಣಿಜ್ಯೀಕರಣಗೊಳಿಸುವ ಬಗ್ಗೆಯೂ ಈ ಸಂದರ್ಭ ಚರ್ಚಿಸಲಾಯಿತು.
ಸ್ಥಳೀಯವಾಗಿ ಎಂಆರ್ಪಿಎಲ್ ಮತ್ತು ಬ್ಯಾಂಕ್ಗಳ ನೆರವನ್ನು ಪಡೆಯುವಂತೆ ಸಚಿವರು ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು. ಕ್ರೀಡಾಂಗಣಕ್ಕೆ ನೀರು, ವಿದ್ಯುತ್ ಒದಗಿಸುವ ಬಗ್ಗೆಯೂ ಸಚಿವರು ಭರವಸೆ ನೀಡಿದರು. ಇದೇ ಸಂದರ್ಭ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ, ಮೇಯರ್ ಭಾಸ್ಕರ್ ರೈ, ಅಪರ ಜಿಲ್ಲಾಧಿಕಾರಿ ಕುಮಾರ್, ಯುವಜನ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ’ಸೋಜಾ ಉಪಸ್ಥಿತರಿದ್ದರು.