ಸಿಎಂ ಬೊಮ್ಮಾಯಿ ಪ್ರಯಾಣಿಸಬೇಕಿದ್ದ ವಿಮಾನಕ್ಕೆ ಪೈಲೆಟ್ ಗೈರು!
ಬೆಳಿಗ್ಗೆ 10.20 ಕ್ಕೆ ಮಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
Team Udayavani, Apr 28, 2022, 9:10 AM IST
ಬೆಂಗಳೂರು: ಪೈಲೆಟ್ ಅನುಪಸ್ಥಿತಿಯಿಂದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿದ ಬೆಳವಣಿಗೆ ಬುಧವಾರ ನಡೆದಿದೆ. ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. “ಮಧ್ಯಾಹ್ನ ಮಂಗಳೂರಿಗೆ ತೆರಳಬೇಕಿತ್ತು. ಆದರೆ, ಪೈಲೆಟ್ ಒಬ್ಬರು ಬಾರದ ಕಾರಣ ವಿಮಾನ ಮೇಲೇರಲಿಲ್ಲ’ ಎಂದು ಮೂಡುಬಿದಿರೆ ಕಾರ್ಯಕ್ರಮದಲ್ಲಿ ಸಿಎಂ ಹೇಳಿದರು.
ಆದರೆ ಅಧಿಕಾರಿಗಳ ಮೂಲದ ಪ್ರಕಾರ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ವಿಮಾನ ಮೇಲೇರದೆ ಸಿಎಂ ನಂತರ ಪ್ರತ್ಯೇಕ ಹೆಲಿಕ್ಯಾಪ್ಟರ್ ಮೂಲಕ ಮೂಡುಬಿದಿರೆಗೆ ತೆರಳುವಂತಾಯಿತು ಎನ್ನಲಾಗಿದೆ.
ಬುಧವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೊಮ್ಮಾಯಿ ಅವರು, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10.20 ಕ್ಕೆ ಮಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳಿದ್ದರು.
ಆದರೆ, ರನ್ ವೆಯಲ್ಲಿ ವಿಮಾನ ತೆರಳುವುದು ತಡವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದ್ದರಿಂದ ಮುಖ್ಯಮಂತ್ರಿಗಳು ಮಧ್ಯಾಹ್ನ 12 ಗಂಟೆಗೆ ಪ್ರಧಾನಿಗಳ ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ವಾಪಸ್ ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿ ಸಂವಾದದಲ್ಲಿ ಪಾಲ್ಗೊಂಡರು. ನಂತರ ಎಚ್ಎಎಲ್ ವಿಮಾನ ನಿಲ್ದಾಣದ ಮೂಲಕ ವಿಶೇಷ ಹೆಲಿಕ್ಯಾಪ್ಟರ್ನಲ್ಲಿ ಮೂಡುಬಿದಿರೆಗೆ ತೆರಳಿದರು.