ಮಂಜುನಾಥನಗರ-ಅಂಕತ್ತಡ್ಕ ರಸ್ತೆ ಗ್ರಾಮಸ್ಥರಿಂದಲೇ ದುರಸ್ತಿ
Team Udayavani, Jul 31, 2018, 3:28 PM IST
ಸವಣೂರು: ಪಾಲ್ತಾಡಿ ಗ್ರಾಮದ ಮಂಜುನಾಥನಗರ-ಅಂಕತ್ತಡ್ಕ ಸಂಪರ್ಕಿಸುವ ಜಿ.ಪಂ. ರಸ್ತೆಯು ಇಂಗುಗುಂಡಿ ಯಂತಹ ಹೊಂಡಗಳಿಂದ ಆವೃತ್ತವಾಗಿದ್ದು, ಸುಗಮ ಸಂಚಾರಕ್ಕೆ ಅಡಚಣೆಯೊಡ್ಡಿದೆ. ಏಳು ಕಿ.ಮೀ. ಉದ್ದದ ಈ ರಸ್ತೆ ಬೆಳ್ಳಾರೆ, ಮಾಡಾವು, ಕುಂಬ್ರ ಪೇಟೆಯನ್ನು ಸಂಪರ್ಕಿಸುತ್ತದೆ. ಆದರೆ, ಮಧ್ಯದ 1.5 ಕಿ.ಮೀ. ರಸ್ತೆ ಮಳೆ ಯಿಂದಾಗಿ ಕೆಸರುಮಯವಾಗಿದೆ. ಇದನ್ನು ಸ್ಥಳೀಯರೇ ದುರಸ್ತಿ ಮಾಡಿದ್ದಾರೆ.
ಕುಂಜಾಡಿಯಿಂದ ನಾಡೋಳಿ ನಡುವಿನ ರಸ್ತೆಯ ಹೊಂಡದಲ್ಲಿ ನೀರು ತುಂಬಿಕೊಂಡು ಗದ್ದೆಯಂತಾಗಿದ್ದು, ಪಾದಚಾರಿಗಳು ಈ ರಸ್ತೆ ಮೂಲಕ ನಡೆದು ಹೋಗುವುದೂ ಕಷ್ಟ. ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು. ಸವಾರಿ ಸವಾಲಿನದಾಗಿದೆ.
ತಾತ್ಕಾಲಿಕ ದುರಸ್ತಿ
ವಿಪರೀತ ಮಳೆಗೆ ರಸ್ತೆ ಅಲ್ಲಲ್ಲಿ ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವುದನ್ನು ಮನಗಂಡ ಇಲ್ಲಿನ ಪ್ರಮುಖರಾದ ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ., ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಗ್ರಾ.ಪಂ. ಸದಸ್ಯ ಸತೀಶ್ ಅಂಗಡಿಮೂಲೆ, ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ. ರಮೇಶ್, ಗ್ರಾಮ ವಿಕಾಸ ಸಮಿತಿ ಕಾರ್ಯದರ್ಶಿ ಉದಯ ಬಿ.ಆರ್. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಕೆಂಪು ಕಲ್ಲು, ದಪ್ಪ ಮರಳು ತಂದು ಹೊಂಡ ಮುಚ್ಚಿಸಿ, ರಸ್ತೆ ದುರಸ್ತಿಪಡಿಸುವ ಮೂಲಕ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು ಅವರು ಸಿಆರ್ಎಫ್ ನಿಧಿಯಿಂದ 2 ಕೋಟಿ ರೂ. ಅನುದಾನ ಈ ರಸ್ತೆ ಅಭಿವೃದ್ಧಿಗೆ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಟೆಂಡರ್ ಆದ ಬಳಿಕ ಕಾಮಗಾರಿ ನಡೆಸಲು ಚಾಲನೆ ಸಿಗಲಿದೆ. ಅಲ್ಲಿಯವರೆಗೆ ಈ ರಸ್ತೆಯ ದುಸ್ಥಿತಿಯ ಸುಧಾರಣೆ ಕಷ್ಟ ಸಾಧ್ಯವಾದ್ದರಿಂದ ಊರಿನ ಪ್ರಮುಖರೇ ಸೇರಿಕೊಂಡು ಸಮಸ್ಯೆ ಪರಿಹಾರಕ್ಕೆ ಮುನ್ನುಡಿ ಬರೆದಿದ್ದಾರೆ.