ಹೆಚ್ಚುತ್ತಿದೆ ಸೋಂಕು ಸಂಕಟ: ಹಳೆಯಂಗಡಿ ಸ್ವಯಂ ಪ್ರೇರಿತ ಬಂದ್ ಗೆ ಮನವಿ
Team Udayavani, Jul 4, 2020, 11:23 AM IST
ಹಳೆಯಂಗಡಿ: ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿಯಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ವರ್ತಕರಿಗೆ ಮನವಿ ಮಾಡಲಾಗುತ್ತಿದೆ.
ಹಳೆಯಂಗಡಿ ಪರಿಸರದಲ್ಲಿ ಇತ್ತೀಚೆಗೆ ಎರಡು ಕೋವಿಡ್ ಪ್ರಕರಣಗಳು ಕಂಡುಬಂದಿದ್ದವು. ಈ ಇಬ್ಬರೂ ಸೋಂಕಿತರು ಹಳೆಯಂಗಡಿ ಪೇಟೆಗೆ ಭೇಟಿ ಇತ್ತೀಚೆಗೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪೇಟೆಯನ್ನು ಬಂದ್ ಮಾಡಲು ನಿರ್ಧಾರಿಸಲಾಗಿದೆ.
ಹಳೆಯಂಗಡಿಯಲ್ಲಿ ಜು.5 ಸೋಮವಾರದಿಂದ ಸ್ವಯಂ ಪ್ರೇರಿತವಾಗಿ ಪೇಟೆಯನ್ನು ಲಾಕ್ಡೌನ್ ಮಾಡಲು ತೀರ್ಮಾನಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರಿಗೆ ಮನವಿ ಮಾಡಲಾಗಿದೆ.
ಮೂಲ್ಕಿ ಕೆ ಎಸ್ ರಾವ್ ನಗರ ಸೀಲ್ ಡೌನ್: ಮೂಲ್ಕಿಯ ಕೆ ಎಸ್ ರಾವ್ ನಗರದ ಅಂಗಡಿ ಮಾಲೀಕರೊಬ್ಬರು ಪತ್ನಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಇದು ಜನವಸತಿ ಪ್ರದೇಶವಾದ ಕಾರಣ ಸೋಂಕಿತ ಮಹಿಳೆ ವಾಸವಿರುವ ಮನೆಯ ಸಂಪರ್ಕ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ವರದಿಯಾಗಿದೆ.