ಧಾರ್ಮಿಕ ಕ್ಷೇತ್ರಗಳಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ: ಡಾ| ಹೆಗ್ಗಡೆ
ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ
Team Udayavani, Jan 27, 2022, 5:45 AM IST
ಮಂಗಳೂರು: ಮನುಷ್ಯನಲ್ಲಿ ಅನೇಕ ದೋಷಗಳು ಸೇರಿ ಕೊಳ್ಳುತ್ತವೆ. ಅದು ನಿವಾರಣೆ ಯಾ ದಾಗ ಆತನ ಸ್ಪಷ್ಟರೂಪ ಗೋಚರಿಸು ತ್ತದೆ. ದೋಷಗಳನ್ನು ನಿವಾರಿಸಿ ಸದ್ಗುಣ ಸಂಪನ್ನ ವ್ಯಕ್ತಿತ್ವ ನಿರ್ಮಾಣ ಕಾರ್ಯ ಧಾರ್ಮಿಕ ಕ್ಷೇತ್ರಗಳಿಂದ ಆಗುತ್ತವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನಗರದ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಲುವಾಗಿ ಜ. 26ರಂದು ಜರಗಿದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಅಪೂರ್ವ ಕಾಷ್ಠ ಶಿಲ್ಪ ಮತ್ತು ಶಿಲಾಶಿಲ್ಪದೊಂದಿಗೆ ಸುಂದರವಾಗಿ ಪುನರ್ ನಿರ್ಮಾಣಗೊಂಡಿದೆ ಎಂದವರು ಹೇಳಿದರು.
ಅನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಅವರು ಅಶೀರ್ವಚನ ನೀಡಿ ಎಲ್ಲರೂ ಶ್ರದ್ಧೆ, ನಿಸ್ವಾರ್ಥ ಸೇವೆ ಮಾಡಿದುದರಿಂದ ಕ್ಷೇತ್ರದ ಜೀರ್ಣೋ ದ್ಧಾರ ಹಾಗೂ ಬ್ರಹ್ಮಕಲಶೋತ್ಸವ ವ್ಯವಸ್ಥಿತವಾಗಿ ನಡೆದಿದೆ. ಇಂದು ನಡೆದ ಚಂಡಿಕಾ ಯಾಗದ ಫಲದಿಂದ ಕೊರೊನಾ ಲೋಕವನ್ನೇ ಬಿಟ್ಟು ತೊಲಗಲಿ ಎಂದರು.
ಶ್ರೀ ಕ್ಷೇತ್ರ ಕಟೀಲಿನ ಶ್ರೀಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಧರ್ಮ, ಸಂಸ್ಕೃತಿಯನ್ನು ಸಂರಕ್ಷಿಸಿಕೊಂಡು ಬಂದಾಗ ಶ್ರೇಯೋಭಿವೃದ್ಧಿ ಪ್ರಾಪ್ತಿಯಾಗುತ್ತದೆ ಎಂದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಧರ್ಮ ಮತ್ತು ಸೌಂದರ್ಯ ಪ್ರಜ್ಞೆ ಕಟ್ಟಿಕೊಟ್ಟಿರುವ ವಿಶ್ವಕರ್ಮ ಸಮಾಜ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.
ಇದನ್ನೂ ಓದಿ:ಯತ್ನಾಳ್ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ
ಕರ್ಣಾಟಕ ಬ್ಯಾಂಕ್
5 ಲಕ್ಷ ರೂ. ದೇಣಿಗೆ
ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಒ ಮಹಾ ಬಲೇಶ್ವರ ಎಂ.ಎಸ್. ಶುಭಾ ಶಂಸನೆ ಗೈದು ಬ್ಯಾಂಕಿನ ವತಿಯಿಂದ 5 ಲಕ್ಷ ರೂ. ದೇಣಿಗೆಯನ್ನು ನೀಡಿದರು.
ಧಾರ್ಮಿಕದತ್ತಿ ಇಲಾಖೆಯ ಮಾಜಿ ಸದಸ್ಯ, ವಿದ್ವಾನ್ ಪಂಜ ಭಾಸ್ಕರ ಭಟ್ ಅವರು ಶತಚಂಡಿಕಾ ಯಾಗದ ಮಹತ್ವ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ನವಿಮುಂಬಯಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಅಧ್ಯಕ್ಷ ಸಿಎ ಶ್ರೀಧರ ಆಚಾರ್ಯ, ಉದ್ಯಮಿ ಎಸ್.ಬಿ. ಅರುಣಾಚಲ ಮೈಸೂರು, ನಾಲ್ಕೂರು ಶ್ರೀ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ಆಚಾರ್ಯ ಅತಿಥಿಗಳಾಗಿದ್ದರು.
ಕ್ಷೇತ್ರದ 3ನೇ ಮೊಕ್ತೇಸರರಾದ ಎ. ಲೋಕೇಶ ಆಚಾರ್ಯ ಬಿಜೈ, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಕೈಂತಿಲ ಸದಾಶಿವ ಆಚಾರ್ಯ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಟಿ. ದಿನೇಶ್ ಶಕ್ತಿನಗರ ವೇದಿಕೆಯಲ್ಲಿದ್ದರು.
ಸಮ್ಮಾನ
ಕ್ಷೇತ್ರದ ವಾಸ್ತುಶಿಲ್ಪ ತಜ್ಞ ಜೋಕಟ್ಟೆ ಪ್ರಭಾಕರ ಆಚಾರ್ಯ, ಶಿಲಾಶಿಲ್ಪಿ ಕೆ. ಸತೀಶ್ ಆಚಾರ್ಯ ಕಾರ್ಕಳ, ಕಾಷ್ಠಶಿಲ್ಪಿಶಿವಪ್ರಸಾದ್ ಆಚಾರ್ಯ, ಕ್ಷೇತ್ರದ 2ನೇ ಮೊಕ್ತೇಸರರಾದ ಬೆಳುವಾಯಿ ಸುಂದರ ಆಚಾರ್ಯ (ಕ್ಷೇತ್ರದ ಜೀರ್ಣೋದ್ಧಾರದಲ್ಲಿ ಆಹ ರ್ನಿಶಿ ಸೇವೆ ಸಲ್ಲಿಸಿರುವುದಕ್ಕೆ) ಅವರನ್ನೂ, ದಾನಿ ಗಳನ್ನು ಸಮ್ಮಾನಿಸಲಾಯಿತು.
ದೇವಾಲಯದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ ವಂದಿಸಿದರು. ದಾಮೋದರ ಶರ್ಮ, ಡಾ| ಎಸ್.ಪಿ. ಗುರುರಾಜ್ ನಿರೂಪಿಸಿದರು. ಪಶುಪತಿ ಉಳ್ಳಾಲ ಪ್ರಸ್ತಾವನೆಗೈದರು.
ಕಲೆಗೆ ಮಹತ್ತರ ಕೊಡುಗೆ
ವಿಶ್ವಬ್ರಾಹ್ಮಣರಿಗೆ ಕಲೆ ರಕ್ತಗತ. ಅದು ಭಗವಂತನ ಅನುಗ್ರಹ. ಕಲೆಗೆ ಅವರ ಕೊಡುಗೆ ಅವಿಸ್ಮರಣೀಯ. ಪರಂಪರಾಗತ ವಿದ್ಯೆಯನ್ನು ಉಳಿಸಿ ಬೆಳೆಸುವಲ್ಲಿ ಸಮುದಾಯ ನಿರಂತರ ಪ್ರಯತ್ನಿಸಬೇಕಿದೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.