ಶ್ರೀಮತಿ ಶೆಟ್ಟಿ ಹತ್ಯೆ ಆರೋಪಿಯೊಂದಿಗೆ ಪೊಲೀಸರ ಸ್ಥಳ ಮಹಜರು
Team Udayavani, May 18, 2019, 3:29 PM IST
ಮಂಗಳೂರು: ಶ್ರೀಮತಿ ಶೆಟ್ಟಿ ಅವರ ಭೀಕರ ಕೊಲೆ ಆರೋಪಿಯೊಂದಿಗೆ ಪೊಲೀಸರು ಮಂಗಳೂರು ನಗರದ ವಿವಿಧೆಡೆ ಶನಿವಾರ ಸ್ಥಳ ಮಹಜರು ನಡೆಸಿದರು.
ಆರೋಪಿ ಜೋನಸ್ ಜೂಲಿನ್ ಸ್ಯಾಮ್ಸನ್ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಬಿಗಿ ಭದ್ರತೆಯೊಂದಿಗೆ ಪೊಲೀಸರ ತಂಡ ನಗರದ ವಿವಿಧೆಡೆ ಪರಿಶೀಲನೆಗಾಗಿ ಕರೆದೊಯ್ದು ತನಿಖೆ ನಡೆಸಿದ್ದಾರೆ.
ದೇಹದ ಭಾಗಗಳನ್ನು ಎಸೆಯಲಾಗಿದ್ದ ನಂದಿಗುಡ್ಡೆ, ಕಾಲನ್ನು ಎಸೆಯಲಾಗಿದ್ದ ಪದುವಪಾರ್ಕ್,ತಲೆ ಎಸೆಯಲಾಗಿದ್ದ ಕದ್ರಿ ಪಾರ್ಕ್ ಮತ್ತು ಸ್ಕೂಟರ್ ಬಿಡಲಾಗಿದ್ದ ನಾಗೋರಿಗೆ ಸ್ಯಾಮ್ಸನ್ನನ್ನು ಕರೆದೊಯ್ದು ತನಿಖೆ ನಡೆಸಲಾಗಿದೆ. ಈ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದತಜ್ಞರು ಹಾಜರಿದ್ದರು.
ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಅವರ ದೇಹವನ್ನು ತುಂಡರಿಸಿ 3 ಕಡೆ ಎಸೆಯಲಾಗಿತ್ತು.
ಪೈಶಾಚಿಕ ಕೃತ್ಯವನ್ನು ಮಂಗಳೂರು ಪೊಲೀಸರು ಭೇದಿಸಿ ಆರೋಪಿ ದಂಪತಿಗಳಾದ ಜೋನಸ್ ಜೂಲಿನ್ ಸ್ಯಾಮ್ಸನ್ (36) ಮತ್ತು ಪತ್ನಿ ವಿಕ್ಟೋರಿಯಾ ಮಥಾಯಿಸ್ (46) ರನ್ನು ಬಂಧಿಸಿದ್ದರು.
ಶ್ರೀಮತಿ ಅವರಿಂದ ಆರೋಪಿಗಳು ಒಂದು ಲಕ್ಷ ರೂ. ಸಾಲ ಪಡೆದಿದ್ದು, 40 ಸಾವಿರ ರೂ.ಗಳನ್ನು ಮರಳಿಸಿದ್ದರು. ಬಾಕಿ 60,000 ರೂ.ಗಳನ್ನು ಕೊಡುವಂತೆ ಕೇಳಲೆಂದು ಮೇ 11ರಂದು ಬೆಳಗ್ಗೆ ಶ್ರೀಮತಿ ಅವರು ಸ್ಯಾಮ್ಸನ್ ಮನೆಗೆ ಹೋಗಿದ್ದರು. ಈ ಸಂದರ್ಭ ವಾಗ್ವಾದ ನಡೆದು ಆಕೆಯನ್ನು ದಂಪತಿ ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ .