ಕೃಷಿ ಹೊಂಡ ನಿರ್ಮಿಸಲು ಸಹಾಯಧನ
Team Udayavani, Aug 22, 2018, 12:31 PM IST
ಮೂಡಬಿದಿರೆ: ಸರಕಾರ ಕೃಷಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡಿದ್ದು ಕಳೆದ ಬಾರಿ 2 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿದ್ದರೆ ಈ ಬಾರಿ ಈಗಾಗಲೇ 1,25,000 ಕೃಷಿ ಹೊಂಡಗಳನ್ನು ನಿರ್ಮಿಸಲು ಸಹಾಯಧನ ಒದಗಿಸಲಾಗಿದೆ. ಕೃಷಿಕರು ಸರಕಾರದ ಯೋಜನೆಗಳ ಫಲಾನುಭವಿಗಳಾಗಿ ಕೃಷಿ ಬದುಕಿನಲ್ಲಿ ಯಶಸ್ಸು ಗಳಿಸಲು ಪ್ರಯತ್ನಿಸಬೇಕು ಎಂದು ರಾಜ್ಯ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು.
ಅವರು ಮಂಗಳವಾರ ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಕಂಚಿಬೈಲು ಪಾಂಡುರಂಗ ಭಟ್ ಅವರ ಜಮೀನಿನಲ್ಲಿ ನಿರ್ಮಿಸಲಾಗಿರುವ ಕೃಷಿ ಹೊಂಡವನ್ನು ವೀಕ್ಷಿಸಿ ಅವರು ಮಾತನಾಡಿದರು. ಬಳಿಕ ಅವರು ಸಾವಿರ ಕಂಬ ಬಸದಿ, ಮೂಡಬಿದಿರೆ ಸ್ವರಾಜ್ಯ ಮೈದಾನದ ಬಳಿ ಇರುವ ಕೃಷಿ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಫಲಾನುಭವಿಗಳಿಗೆ ಕೃಷಿ ಉಪಕರಣ ವಿತರಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್. ಸಂಪತ್ ಸಾಮ್ರಾಜ್ಯ, ಕಡಂದಲೆ ಪರಾರಿ ಸಂತೋಷ್ಕುಮಾರ್ ಶೆಟ್ಟಿ, ವಾಸುದೇವ ನಾಯಕ್, ವಲೇರಿಯನ್ ಸಿಕ್ವೇರಾ ಮೊದಲಾದವರಿದ್ದರು.