ಸಮಾಜಮುಖಿ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿದಾಗ ಯಶಸ್ಸು: ವಂ| ಹೆರಾಲ್ಡ್
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ
Team Udayavani, Aug 5, 2019, 5:32 AM IST
ಮಹಾನಗರ: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಜರಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 35ನೇ ಶ್ರಮದಾನವನ್ನು ಮಾರ್ನಮಿಕಟ್ಟೆ ಪರಿಸರದಲ್ಲಿ ಆಯೋಜಿಸಲಾಗಿತ್ತು.
ಕಾಸ್ಸಿಯಾ ಚರ್ಚ್ನ ಧರ್ಮಗುರು ವಂ| ಹೆರಾಲ್ಡ್ ಮಸ್ಕರೇನ್ಹಸ್ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಸ್ವಚ್ಛ ಮಂಗಳೂರು ಅಭಿಯಾನದಡಿ ಮೋರ್ಗನ್ಸ್ಗೇಟ್ ರಸ್ತೆ ಮಾರ್ನಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಮಾಜಿ ಶಾಸಕ ಜೆ.ಆರ್. ಲೋಬೋ ಲೋಕಾರ್ಪಣಗೊಳಿಸಿದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ, ಸತೀಶ್ ಭಟ್, ಪ್ರವೀಣ ಶೆಟ್ಟಿ, ಸಚಿನ್ ಕಾಮತ್, ಕರಣಜಿ, ಶಿವರಾಂ ಆಡೂರ್, ರಾಮಕೃಷ್ಣ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.
ವಂ| ಹೆರಾಲ್ಡ್ ಮಸ್ಕರೇನ್ಹಸ್ ಮಾತನಾಡಿ, ಸಮಾಜಮುಖೀ ಕಾರ್ಯಗಳನ್ನು ಮಾಡುವಾಗ ತಾನು ಮಾಡುವುದರ ಜತೆಗೆ ಎಲ್ಲರನ್ನೂ ಜೋಡಿಸಿಕೊಂಡು ಮುನ್ನಡೆದಾಗ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಸ್ವಚ್ಛ ಮಂಗಳೂರು ನನಸಿಗಾಗಿ ಶ್ರಮಪಡುತ್ತಿರುವ ರಾಮಕೃಷ್ಣ ಮಿಷನ್ ಈ ನಿಟ್ಟಿನಲ್ಲಿ ಸಮಾಜದ ಸಕಲರನ್ನು ಒಗ್ಗೂಡಿಸಿಕೊಂಡು ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸ್ವಚ್ಛತೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುಂದುವರಿಸಿಕೊಂಡು ಹೋಗಬೇಕು. ಹಾಗಾದಾಗ ಮಾತ್ರ ನಮ್ಮ ನಗರ ಸ್ವಚ್ಛ ಸುಂದರವಾಗಿ ಕಾಣುತ್ತದೆ ಎಂದರು.
ಜೆ.ಆರ್. ಲೋಬೋ ಮಾತನಾಡಿ, ನಗರದ ಸ್ವಚ್ಛತೆಯಲ್ಲಿ ಅತಿಪ್ರಮುಖ ಪಾತ್ರವಹಿಸಿದಂತಹ ರಾಮಕೃಷ್ಣ ಮಿಷನ್ ಕಾರ್ಯ ದೇಶಕ್ಕೆ ಮಾದರಿಯಾಗಿದೆ. ಹೊರ ಊರಿಗೆ ಹೋಗಿ ಬಂದಾಗ ನಮ್ಮೂರಿನ ಸ್ವಚ್ಛತೆಯ ನೈಜ ಅರಿವು ನಮಗೆ ಮೂಡುತ್ತದೆ. ಇತ್ತೀಚಿಗೆ ಜನರಲ್ಲಿ ನಿಧಾನವಾಗಿ ಜಾಗೃತಿ ಮೂಡಿಬರುವುದು ಕಂಡುಬರುತ್ತಿದೆ. ಇದು ಮುಂದುವರಿದು ನಮ್ಮ ನಗರ ಎಲ್ಲ ನಗರಗಳಿಗೆ ಮಾದರಿಯಾಗಬೇಕು; ಅಂತಹ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ ಮುಂದುವರಿಯೋಣ ಎಂದು ತಿಳಿಸಿದರು.
ಶ್ರಮದಾನ
ಸ್ವಚ್ಛತಾ ಅಭಿಯಾನದ ಪ್ರಧಾನ ಸಂಯೋಜಕ ಉಮಾನಾಥ್ ಕೋಟೆಕಾರ್ ನೇತೃತ್ವದಲ್ಲಿ ಮಾರ್ನಮಿಕಟ್ಟೆ ವೃತ್ತದಿಂದ ಮೋರ್ಗನ್ಸ್ ಗೇಟ್ ರಸ್ತೆಯಲ್ಲಿ ಸ್ವಚ್ಛತೆ ಮಾಡಲಾಯಿತು. ಕಾರ್ಯಕರ್ತರು ರೈಲ್ವೇ ಮೇಲ್ಸೇತುವೆ ಬಳಿಯಿದ್ದ ಅಪಾರ ಪ್ರಮಾಣದ ಹಸಿತ್ಯಾಜ್ಯ ಹಾಗೂ ಹಲವು ವರ್ಷಗಳಿಂದ ಬಿದ್ದಿದ್ದ ತ್ಯಾಜ್ಯವನ್ನು ತೆರವು ಮಾಡಿದರು. ಬಳಿಕ ಅಲ್ಲಿದ್ದ ತೊಟ್ಟಿಯನ್ನು ತೆಗೆದು ಹಸನು ಮಾಡಿದರು. ಅಲ್ಲಿ ಹೂಗಿಡಗಳನ್ನಿಟ್ಟು ಆ ಜಾಗವನ್ನು ಅಂದಗೊಳಿಸಲಾಗಿದೆ.
ಮತ್ತೂಂದು ತಂಡ ಮೇಲ್ಸೇತುವೆಯ ಮೇಲ್ಭಾಗದಲ್ಲಿದ್ದ ಹುಲ್ಲನ್ನು ಕತ್ತರಿಸಿ, ಅಲ್ಲಿದ್ದ ಮಣ್ಣು ಸಹಿತ ಕಸವನ್ನು ತೆಗೆದು ಸ್ವಚ್ಛಗೊಳಿಸಿತು. ಹರೀಶ್ ಪ್ರಭು, ಉಮಾಕಾಂತ ಸುವರ್ಣ ಹಾಗೂ ಕಾರ್ಯಕರ್ತರು ನೂತನ ತಂಗುದಾಣದ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛಗೊಳಿಸಿದರು.
ಮುಖೇಶ್ ಆಳ್ವ ಮಾರ್ಗದರ್ಶನದಲ್ಲಿ ಕಳೆಕೊಚ್ಚುವ ಯಂತ್ರದ ಸಹಾಯದಿಂದ ಅಲ್ಲಲ್ಲಿ ಬೆಳೆದಿದ್ದ ಹುಲ್ಲು, ಕಳೆಯನ್ನು ತೆಗೆದು ಸ್ವಚ್ಛ ಮಾಡಲಾಯಿತು. ಮೂರು ಮಾರ್ಗಸೂಚಕ ಫಲಕಗಳನ್ನು ಸ್ವಚ್ಛಗೊಳಿಸಿ, ನವೀಕರಿಸಲಾಯಿತು.
ರಾಮಕೃಷ್ಣ ಮಿಷನ್ ವತಿಯಿಂದ ನಗರದಲ್ಲಿ ಪ್ರಯಾಣಿಕರ ತಂಗುದಾಣವನ್ನು ಮೋರ್ಗನ್ಸ್ಗೇಟ್ ರಸ್ತೆ, ಮಾರ್ನಮಿಕಟ್ಟೆಯಲ್ಲಿ ನಿರ್ಮಿಸಲಾಗಿದೆ. ಪ್ರತಿನಿತ್ಯ ನೂರಾರು ಜನ ಉಪಯೋಗಿಸುತ್ತಿದ್ದ ಪಾಳುಬಿದ್ದ ಸ್ಥಿತಿಯಲ್ಲಿದ್ದ ಹಳೆಯ ತಂಗುದಾಣವನ್ನು ತೆರವು ಮಾಡಿ, ಇದೀಗ ಅಲ್ಲಿ ನೂತನ ತಂಗುದಾಣವನ್ನು ನಿರ್ಮಿಸಲಾಗಿದೆ. ಕುಳಿತುಕೊಳ್ಳುವ ಸ್ವತಂತ್ರ ಆಸನಗಳು, ಮೇಲ್ಛಾವಣಿ, ಉತ್ತಮ ನೆಲಹಾಸು ಹೊಂದಿದ ಈ ತಂಗುದಾಣದ ನಿರ್ಮಾಣವನ್ನು ದ.ಕ. ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಇದು ಸ್ವಚ್ಛ ಮಂಗಳೂರು ಅಭಿಯಾನದಡಿ ನಿರ್ಮಿಸಲಾದ ಪ್ರಯಾಣಿಕರ 7ನೇ ತಂಗುದಾಣವಾಗಿದೆ. ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಈ ಎಲ್ಲ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ