ಅಭಿವೃದ್ಧಿ ಕಾಮಗಾರಿಗೆ ಮರಕ್ಕೆ ಕೊಡಲಿಯೇಟು
Team Udayavani, May 21, 2020, 5:42 AM IST
ಮಂಗಳೂರು: ನಗರದಲ್ಲಿ ನಾನಾ ರೀತಿಯ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಮರಗಳು ಧರಾಶಾಹಿಯಾಗುತ್ತಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಆರ್ಯ ಸಮಾಜ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯ ಬದಿಯಲ್ಲಿದ್ದ ಸುಮಾರು 100 ವರ್ಷದ ಹಲಸಿನ ಮರವನ್ನು ಬುಧವಾರ ಬೆಳಗ್ಗಿನ ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕಡಿದಿದ್ದಾರೆ. ಕೂಡಲೇ ಪರಿಸರವಾದಿಗಳು ಸಹಿತ ಸ್ಥಳೀಯರು ಸ್ಥಳಕ್ಕೆ ಆಗಮಿಸಿ, ಮರ ಕಡಿಯದಂತೆ ಮನವಿ ಮಾಡಿದ್ದರು. ಆದರೆ, ಅವರ ಮಾತಿಗೆ ಮನ್ನಣೆ ಕೊಡದ ಅಧಿಕಾರಿಗಳು ಮರಕ್ಕೆ ಕೊಡಲಿಯೇಟು ಹಾಕಿದ್ದಾರೆ.
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಪರಿಸರವಾದಿ ಜೀತ್ ಮಿಲನ್ ರೋಶ್ ಅವರು, “ಅಭಿವೃದ್ಧಿ ಹೆಸರಿನಲ್ಲಿ ನಗರದಲ್ಲಿ ಮರಗಳನ್ನು ಕಡಿದುರುಳಿಸಲಾಗುತ್ತಿದೆ. ಆರ್ಯ ಸಮಾಜ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಮರವನ್ನು ಉಳಿಸಿಕೊಂಡು ರಸ್ತೆ ಅಗಲ ಮಾಡಬಹುದಿತ್ತು. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಚಕಾರ ಎತ್ತುತ್ತಿಲ್ಲ’ ಎಂದು ದೂರಿದರು.