ಸಬ್ಸಿಡಿ ನೀಡಲು ಲಂಚ ಬೇಡಿಕೆ ಇಬ್ಬರು ಎಸಿಬಿ ಬಲೆಗೆ
Team Udayavani, May 22, 2019, 1:09 PM IST
ಮಂಗಳೂರು: ಸರಕಾರದ ಸಹಾಯಧನ ನೀಡಲು ಉದ್ಯಮಿಯೋರ್ವರಿಂದ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಸಲ್ಲಿಸಿದಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಇಬ್ಬರನ್ನು ಭ್ರಷ್ಟಾಚಾರ ನಿಗ್ರಹದಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ ಭಂಡಾರಿ ಹಾಗೂ ಗುಮಾಸ್ತ ರಾಹಿಲ್ ಬಂಧಿತರು.
ಉದ್ಯಮಿಯು ಡೈರಿ ಉದ್ಯಮ ನಡೆಸಲು ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ಒಂದು ಲಕ್ಷ ರೂ. ಸಬ್ಸಿಡಿ ಹಣ ಮಂಜೂರುಗೊಂಡಿತ್ತು. ಸಹಾಯಧನದ ಚೆಕ್ ನೀಡಲು 10 ಸಾವಿರ ರೂ. ಲಂಚ ನೀಡಬೇಕು ಎಂದು ಶ್ರೀಧರ ಭಂಡಾರಿ ಬೇಡಿಕೆ ಇಟ್ಟಿದ್ದರು. ಇಷ್ಟು ಹಣ ನೀಡಲು ನನ್ನಿಂದ ಸಾಧ್ಯವಿಲ್ಲ ಎಂದು ಉದ್ಯಮಿ ಹೇಳಿದ್ದು ಕೊನೆಗೆ 7 ಸಾವಿರ ರೂ. ನೀಡಲು ಸಮ್ಮತಿಸಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಮಂಗಳವಾರ ಬೆಳಗ್ಗೆ ಕಚೇರಿಯಲ್ಲಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಶ್ರೀಧರ ಭಂಡಾರಿಯ ಟೇಬಲ್ ಡ್ರಾವರ್ನಲ್ಲಿ 7 ಸಾವಿರ ರೂ. ಲಂಚದ ಹಣ ಪತ್ತೆಯಾಗಿದೆ. ರಾಹಿಲ್ ಹಣ ಪಡೆಯಲು ಸಹಕಾರ ನೀಡಿದ್ದ. ಈತನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು 15 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.