ಶಾಲೆಗಳಲ್ಲಿ ಶೇ.40ರಷ್ಟು ಹಾಜರಾತಿ: ಅಧಿಕಾರಿ ಮಾಹಿತಿ
Team Udayavani, Jan 13, 2021, 3:40 AM IST
ಪುತ್ತೂರು: ಕೋವಿಡ್ ಬಳಿಕ ವಿದ್ಯಾ ಗಮ ದಡಿಯಲ್ಲಿ ಶಾಲೆ ಪುನರಾರಂಭಗೊಂಡಿದ್ದು, ಶೇ.40 ರಷ್ಟು ಮಂದಿ ತರಗತಿಗಳಿಗೆ ಹಾಜರಾಗಿದ್ದಾರೆ. ಉಳಿದವರಿಗೆ ಆನ್ಲೈನ್ ಮೂಲಕ ಪಠ್ಯ ಬೋಧನೆ ಮಾಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ತಾ.ಪಂ. ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ತ್ತೈಮಾಸಿಕ ಕೆಡಿಪಿ ಸಭೆಯು ಶಾಸಕ ಸಂಜೀವ ಮಠಂದೂರು ಅವರು ಅಧ್ಯಕ್ಷತೆಯಲ್ಲಿ ಜ.12ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ತಾಲೂಕಿನ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಶಾಸಕರು ಇಲಾಖಾಧಿಕಾರಿಗಳಲ್ಲಿ ಮಾಹಿತಿ ಕೇಳಿದ ಸಂದರ್ಭ ದಲ್ಲಿ ಅಧಿಕಾರಿ ಮೇಲಿನಂತೆ ಉತ್ತರಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಮಕ್ಕಳು ಶಾಲೆಗೆ ಹಾಜರಾಗಲು ಶಿಕ್ಷಕರಿಗೆ ಜವಾಬ್ದಾರಿ ನೀಡಲಾಗಿದೆ. ತಾಲೂಕಿನಲ್ಲಿ ಈಗಾಗಲೇ ಒಟ್ಟು 99.15 ಶೇ. ದಾಖಲಾತಿ ಆಗಿದೆ ಎಂದರು.
ಹೊಸಬರಿಗೆ ಪ್ರವೇಶ ಇಲ್ಲ :
ನಗರದ ಹಾರಾಡಿ ಹಾಸ್ಟೆಲ್ನಲ್ಲಿ 21 ಮಂದಿ ಮಕ್ಕಳು ದಾಖಲಾತಿ ಮಾಡಿಕೊಂಡಿದ್ದಾರೆ. ಉಳಿದ ವರಿಗೆ ಕೋವಿಡ್ ಟೆಸ್ಟ್ ಆಗಬೇಕಿದೆ. ಹೊಸದಾಗಿ ಬಂದವರನ್ನು ಸೇರ್ಪಡೆಗೊಳಿಸಬಾರದು ಎಂಬ ಸುತ್ತೋಲೆ ಬಂದಿದೆ ಎಂದು ಹಾಸ್ಟೆಲ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಹಕ್ಕಿಜ್ವರ ಹಿನ್ನೆಲೆ ಚೆಕ್ಪೋಸ್ಟ್ ಸ್ಥಾಪನೆ :
ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬರುವ ಕೋಳಿ ಸಾಗಾಟವನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಜಾಲೂÕರು, ಉಕ್ಕುಡ, ಸಾರಡ್ಕಗಳ ಚೆಕ್ಪೋಸ್ಟ್ಗಳಲ್ಲಿ ಕೋಳಿ ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ತಾಲೂಕಿನ ಪ್ರತೀ ಕೋಳಿ ಫಾರ್ಮ್ಗಳಿಗೆ ಭೇಟಿ ನೀಡಿ ಈ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಕೋಳಿಗಳ ಅಸಹಜ ಸಾವು ಕಂಡು ಬಂದರೆ ಮಾಹಿತಿ ನೀಡುವಂತೆ ಫಾರ್ಮ್ ಮಾಲಕರಿಗೆ ತಿಳಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಭೆಗೆ ಕರೆಸಿ :
ಅಲ್ಪಸಂಖ್ಯಾಕ ಇಲಾಖೆಯಿಂದ ಕಳೆದ ಮೂರು ವರ್ಷಗಳಿಂದ ಯಾವುದೇ ಕೆಲಸ ಆಗುತ್ತಿಲ್ಲ. ಅಲ್ಲಿ ಅವ್ಯವಹಾರ ನಡೆಯುತ್ತಿದೆ. ಈ ವಿಚಾರದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಮುಂದಿನ ಸಭೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಭೆಗೆ ಕರೆಸಬೇಕು ಎಂದು ಕಾರ್ಯ ನಿರ್ವಹಣಾ ಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಸಾಲ ಮನ್ನಾ ಹಣ ಬಾಕಿ ಇರುವುದನ್ನು ತತ್ ಕ್ಷಣ ಪಾವತಿಸುವಂತೆ ಶಾಸಕರು ಸೂಚಿಸಿದರು. ತಾಲೂಕಿನಲ್ಲಿ ಅಪಾಯಕಾರಿ ಮರಗಳನ್ನು ತೆರವು ಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಗ್ರಾ.ಪಂ. ಪಿಡಿಒಗಳ ಚರ್ಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಹಶೀಲ್ದಾರ್ ರಮೇಶ್ ಬಾಬು, ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು.
ಕೊಳವೆಬಾವಿ ಬಾಕಿ: ಶಾಸಕ ಗರಂ : ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುವ ಬೋರ್ವೆಲ್ ಕಾಮಗಾರಿಗಳ ಪೈಕಿ ಆರ್ಥಿಕ ವರ್ಷದಲ್ಲಿ ಯಾವುದೇ ಗುರಿ ತಲುಪಿಲ್ಲ ಎಂದು ಶಾಸಕರು ಪ್ರಸ್ತಾವಿಸಿದಾಗ, ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿ ಕಾಮಗಾರಿಗಳ ಕಡತ ರಾಜ್ಯಮಟ್ಟದಲ್ಲೇ ಬಾಕಿ ಆಗಿದೆ. ಪರಿಣಾಮ ಕಾಮಗಾರಿ ನಡೆಯುತ್ತಿಲ್ಲ ಎಂದರು. ಸಮಸ್ಯೆ ಬಗ್ಗೆ ಹೇಳಿ ಸುಮ್ಮನಿರುವುದು ಸರಿಯಲ್ಲ. ಮಾಡಿ ತೋರಿಸಬೇಕು. ತಳಮಟ್ಟದಲ್ಲಿ ಯೋಜನೆಯನ್ನು ತಲುಪಿಸುವುದು ನಿಮ್ಮ ಕರ್ತವ್ಯ. ಅದು ಆಗದಿದ್ದರೆ ನೀವು ಇಲಾಖೆಯಲ್ಲಿ ಇರುವುದು ಯಾಕೆ. ಸಭೆ ಮಾಡುವುದು ಸಮಸ್ಯೆ ಪರಿಹರಿಸಲು, ಸಮಸ್ಯೆಯನ್ನು ಇನ್ನೊಬ್ಬರ ಬೆನ್ನಿಗೆ ಕಟ್ಟುವುದು ಅಲ್ಲ ಎಂದು ಹೇಳುತ್ತಾ ಶಾಸಕರು ಅಧಿಕಾರಿ ವಿರುದ್ಧ ಗರಂ ಆದ ಘಟನೆಯು ನಡೆಯಿತು.
ಸಬ್ಸಿಡಿ ಸಿಗುತ್ತಿಲ್ಲ :
ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗೆ ಅನುದಾನ ನೀಡಲಾಗುತ್ತಿದ್ದು, ಇದರ ಸಬ್ಸಿಡಿ ಹಣ ಸರಿಯಾಗಿ ಬರುತ್ತಿಲ್ಲ. ಜತೆಗೆ ಅರ್ಜಿ ಸಲ್ಲಿಸಿದವರಿಗೆ ಸೌಲಭ್ಯ ಸಿಗುತ್ತಿಲ್ಲ. ಈ ಕುರಿತು ದೂರುಗಳು ಬಂದಿವೆೆ. ರೈತರು ಇಲಾಖೆ ಹಾಗೂ ಸರಕಾರವನ್ನು ದೂಷಿಸುವಂತಾಗಿದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಎಚ್ಚರಿಕೆ ನೀಡಿದ ಶಾಸಕರು, ಪ್ರತೀ ವರ್ಷ ಯಾರ್ಯಾರು ಯಾವ ಬೆಳೆಗಳನ್ನು ಬೆಳೆಸುತ್ತಿದ್ದಾರೆ ಎಂಬ ಕುರಿತು ಸಮೀಕ್ಷೆ ಮಾಡಿ ವರದಿ ನೀಡಬೇಕು ಎಂದು ತೋಟಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಹಿತಿ ನೀಡಿ :
ಯಂತ್ರೋಪಕರಣದ ಮಾಹಿತಿಯ ಬಗ್ಗೆ ರೈತರನ್ನು ಸತಾಯಿಸಬಾರದು. ಅವರಿಗೆ ಸರಿಯಾದ ಮಾಹಿತಿ ನೀಡಬೇಕು. ಫಸಲ್ ಭೀಮಾ ಯೋಜನೆಯಲ್ಲಿ ಎಷ್ಟು ಹೆಕ್ಟೇರ್ ಭತ್ತ ಕೃಷಿ ಹೆಚ್ಚಾಗಿದೆ. ಎಷ್ಟು ಜನರು ಭತ್ತದ ಬೆಳೆಗೆ ಪ್ರೋತ್ಸಾಹ ನೀಡಿದ್ದಾರೆ ಎಂಬ ಬಗ್ಗೆ ಅಂಕಿ ಅಂಶಗಳನ್ನು ಮುಂದಿನ ಒಂದು ವಾರದೊಳಗೆ ನೀಡಬೇಕು ಎಂದು ಶಾಸಕ ಸಂಜೀವ ಮಠಂದೂರು ಅವರು ಸೂಚಿಸಿದರು.