5.06 ಲಕ್ಷ ರೂ. ಪರಿಹಾರ ವಿತರಣೆ
ಬಂಟ್ವಾಳ ತಾ|: ಪ್ರಾಕೃತಿಕ ವಿಕೋಪ ಹಾನಿ
Team Udayavani, Jul 24, 2019, 5:00 AM IST
ಬಂಟ್ವಾಳ: ಮಳೆಗಾಲ ಪ್ರಾಕೃತಿಕ ವಿಕೋಪದಿಂದಾಗಿ ನಷ್ಟ ಉಂಟಾದ ಫಲಾನುಭವಿಗಳಿಗೆ ಸರಕಾರ ನಿರ್ದಿಷ್ಟ ಮೊತ್ತದ ಪರಿಹಾರ ಧನವನ್ನು ನೀಡುತ್ತಿದೆ. ಪ್ರಸ್ತುತ ಈ ವರ್ಷದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಒಟ್ಟು 91 ಪ್ರಕರಣಗಳಿಗೆ 5.06 ಲಕ್ಷ ರೂ.ಗಳ ಪರಿಹಾರ ಧನವನ್ನು ವಿತರಿಸಲಾಗಿದೆ.
ಈ ವರ್ಷ ಮಳೆ ವಿಳಂಬವಾಗಿದ್ದು, ಹಾನಿಯ ಪ್ರಕರಣಗಳೂ ಕಡಿಮೆಯೇ ಇದ್ದವು ಕಳೆದ ಕೆಲವು ದಿನಗಳ ಹಿಂದಿನ ಹಾನಿಯ ಪ್ರಕರಣಗಳನ್ನು ಹೊರತು ಪಡಿಸಿದರೆ ಈವರೆಗೆ ತಾಲೂಕು ಆಡಳಿತಕ್ಕೆ ಪರಿಹಾರ ವಿತರಣೆಗೆ ಸಿಕ್ಕಿದ್ದು 5.06 ಲಕ್ಷ ರೂ. ಮಾತ್ರ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯ ುತ್ತಿರುವ ಧಾರಾಕಾರ ಮಳೆಗೆ ಒಂದಷ್ಟು ಹಾನಿ ಸಂಭವಿಸಿದ್ದು, ಅದರ ಪರಿಹಾರ ವಿತರಣೆ ಇನ್ನಷ್ಟೇ ನಡೆಯಬೇಕಿದೆ.
ಒಟ್ಟು 21.57 ಲಕ್ಷ ರೂ.
2019ರ ಎಪ್ರಿಲ್ ತಿಂಗಳ ಆರಂಭ ದಲ್ಲಿ ತಾ|ನ ಪ್ರಾಕೃತಿಕ ವಿಕೋಪ ಹಾನಿಯ ಪರಿಹಾರ ಧನದ ಖಾತೆಯಲ್ಲಿ 21,57,354 ರೂ.ಗಳಿತ್ತು. ಈ ಮೊತ್ತದಲ್ಲಿ ಜೂನ್ ತಿಂಗಳವರೆಗೆ ಒಟ್ಟು 91 ಪ್ರಕರಣಗಳಿಗೆ ಸಂಬಂಧಿಸಿ 5,06,065 ರೂ.ಗಳನ್ನು ವಿತರಿಸಲಾಗಿದ್ದು, ಪ್ರಸ್ತುತ 16,51,289 ರೂ. ಉಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹಾನಿಗೆ ಸಂಬಂಧಿಸಿ ಈ ಮೊತ್ತದಿಂದ ಪರಿಹಾರ ಧನ ವಿತರಣೆ ಕಾರ್ಯ ನಡೆಯಲಿದೆ.
ವಿತರಣೆ
ತಾಲೂಕು ಆಡಳಿತವು ಬೇರೆ ಬೇರೆ ರೀತಿಯ ಹಾನಿಗೆ ಸಂಬಂಧಿಸಿ ನಿರ್ದಿಷ್ಟ ಮೊತ್ತದ ಪರಿ ಹಾರ ವಿತರಣೆ ಕಾರ್ಯ ನಡೆಸುತ್ತದೆ. ತಾಲೂಕಿನಲ್ಲಿ ಈ ತನಕ ಜೀವಹಾನಿ, ಗಾಯಗೊಂಡವರು, ಪಕ್ಕಾ ಮನೆ ಹಾನಿ, ಗುಡಿಸಲು ಹಾನಿ, ಬೆಂಕಿಯಿಂದ ಹಾನಿ, ಕೊಟ್ಟಿಗೆ ಹಾನಿ ವಿಭಾಗಗಳಲ್ಲಿ ಯಾವುದೇ ಪರಿಹಾರ ಧನ ವಿತರಣೆಯಾಗಿಲ್ಲ. ಜಾನುವಾರು ಹಾನಿಗೆ ಸಂಬಂ ಧಿಸಿ ಒಂದು ಪ್ರಕರಣದಲ್ಲಿ 30 ಸಾವಿರ ರೂ. ವಿತರಿಸಲಾಗಿದೆ. ಕೃಷಿ ಬೆಳೆ ಹಾನಿಗೆ ಸಂಬಂಧಿಸಿದ ಒಂದು ಪ್ರಕರಣಕ್ಕೆ 1,360 ರೂ., ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದ 5 ಪ್ರಕರಣಗಳಿಗೆ 3,453 ರೂ., ವಾಸ್ತವ್ಯದ ಕಚ್ಚಾ ಮನೆ ಹಾನಿಗೆ ಸಂಬಂಧಿಸಿ ಓರ್ವ ಫಲಾನುಭವಿಗೆ 45,939 ರೂ. ವಿತರಣೆಯಾ ಗಿದೆ.
ವಾಸ್ತವ್ಯದ ಮನೆ ತೀವ್ರ ಹಾನಿಗೆ ಸಂಬಂಧಿಸಿ 1 ಕಚ್ಚಾ ಮನೆಗೆ 52,113 ರೂ. ವಿತರಣೆಯಾಗಿದೆ. ಪಕ್ಕಾ ಮನೆ ಭಾಗಶಃ ಹಾನಿಗೆ ಸಂಬಂಧಿಸಿ 59 ಪ್ರಕರಣಗಳಿಗೆ 2,97,800 ರೂ.ಗಳ ವಿತರಣೆಯಾಗಿದೆ. ಕಚ್ಚಾ ಮನೆಯ ಭಾಗಶಃ ಹಾನಿಗೆ ಸಂಬಂಧಿಸಿ 23 ಪ್ರಕರಣಗಳಿಗೆ 75,400 ರೂ.ಗಳ ಪರಿಹಾರ ವಿತರಣೆ ನಡೆದಿದೆ.
ಎರಡು ದಿನಗಳಲ್ಲಿ ಹೆಚ್ಚಿನ ಹಾನಿ
ಪ್ರಾರಂಭದಲ್ಲಿ ಮಳೆ ಕಡಿಮೆಯಾಗಿದ್ದರೂ ಕಳೆದ ಕೆಲವು ದಿನಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜತೆಗೆ ಹಾನಿಯೂ ಹೆಚ್ಚಾಗಿದೆ. ಜು. 22 ಹಾಗೂ 23ರಂದು ಹೆಚ್ಚಿನ ಹಾನಿಯ ಕುರಿತು ವರದಿಯಾಗಿದೆ. ಮನೆಯ ಛಾವಣಿ ಕುಸಿತ, ಕೃಷಿ ಜಮೀನಿಗೆ ನೀರು, ಆವರಣ ಗೋಡೆ ಕುಸಿತ, ಕೊಟ್ಟಿಗೆ ಕುಸಿತ ಮೊದಲಾದ ಹಾನಿಗಳು ಸಂಭವಿಸಿವೆ.
ಶೀಘ್ರ ವಿತರಣೆ
ಪ್ರಾಕೃತಿಕ ವಿಕೋಪ ಹಾನಿಗೆ ಸಂಬಂಧಿಸಿದಂತೆ ಶೀಘ್ರ ಪರಿಹಾರ ವಿತರಣೆ ಮಾಡುವ ಕಾರ್ಯ ಮಾಡಲಾಗುತ್ತಿದ್ದು, ಈಗಾಗಲೇ 5.06 ಲಕ್ಷ ರೂ. ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇತರ ಹಾನಿ ಪ್ರಕರಣಗಳಿಗೆ ಪರಿಹಾರ ಧನ ವಿತರಣೆ ಕಾರ್ಯ ಮಾಡಲಾಗುತ್ತದೆ.
– ರಶ್ಮಿ ಎಸ್.ಆರ್. ತಹಶೀಲ್ದಾರ್
- ಕಿರಣ್ ಸರಪಾಡಿ