ಪುತ್ತೂರು: ಮಹಿಳೆಗೆ ಲೈಂಗಿಕ ಕಿರುಕುಳ: ಯುವಕನ ಬಂಧನ
Team Udayavani, Sep 15, 2022, 7:15 PM IST
ಪುತ್ತೂರು: ತಿಂಗಳಾಡಿಯ ಅಂಗಡಿಯೊಂದರಲ್ಲಿ ಸಿಹಿ ತಿಂಡಿ ಖರೀದಿಸುತ್ತಿದ್ದ ಹಿಂದೂ ಮಹಿಳೆಗೆ ಅನ್ಯ ಧರ್ಮದ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ತಡರಾತ್ರಿಯೇ ಸಂಪ್ಯ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸರ್ವೆ ಗ್ರಾಮದ ಸೊರಕೆ ನಿವಾಸಿ ಬದ್ರುದ್ದಿನ್ ಬಂಧಿತ ಆರೋಪಿ. ಮಹಿಳೆಯು ಬುಧವಾರ ಸಂಜೆ ತಿಂಗಳಾಡಿಯಲ್ಲಿರುವ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ನಿಂದ ಸಾಮಗ್ರಿ ಖರೀದಿಸಲು ಬಂದಿದ್ದರು. ಅಂಗಡಿಯಲ್ಲಿ ಸ್ವೀಟ್ ಖರೀದಿಸಿ ಮಾಲಕನಿಗೆ ಹಣವನ್ನು ನೀಡುತ್ತಿರುವಾಗ ಅಂಗಡಿಯೊಳಗೆ ಬಂದ ಆರೋಪಿಯು ಏಕಾಏಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಕಿರುಚಾಡುತ್ತಾ ಆತನನ್ನು ದೂರ ತಳ್ಳಲು ಯತ್ನಿಸಿದಾಗ ಆರೋಪಿ ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದ. ಈ ವಿಚಾರ ತಿಳಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಆರೋಪಿ ಬಂಧನಕ್ಕೆ ಆಗ್ರಹಿಸಿದ್ದರು. ಸೆ.15 ರ ಬೆಳಗ್ಗೆ 8 ಗಂಟೆಯ ಒಳಗೆ ಬಂಧಿಸದಿದ್ದರೆ ತಿಂಗಳಾಡಿ ಪೇಟೆ ಬಂದ್ ಮಾಡುವ ಎಚ್ಚರಿಕೆ ನೀಡಿದ್ದರು.
ಈ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಸಂಪ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.