ಬಂಟ್ವಾಳ: ಲಕ್ಷಾಂತರ ರೂ. ಮೌಲ್ಯದ ಬಂಗಾರ ಕದ್ದು ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Team Udayavani, Mar 14, 2022, 7:42 PM IST
ಬಂಟ್ವಾಳ: ಹಾಡು ಹಗಲು ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಬಂಗಾರ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅರಳ ಗ್ರಾಮದ ಶುಂಠಿಹಿತ್ಲು ನಿವಾಸಿ ಆಶ್ರಫ್ (42) ಬಂಧಿತ ಆರೋಪಿ.
ಖಚಿತ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಸೋರ್ನಡು ಎಂಬಲ್ಲಿ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜನವರಿ 31 ರಂದು ಅರಳ ಗ್ರಾಮದ ಪೋರ್ಕಳ ನಿವಾಸಿ ಅಬ್ದುಲ್ ರಹಮಾನ್ ಎಂಬವರ ಮನೆಯಿಂದ ಹಗಲು ಹೊತ್ತಿನಲ್ಲಿ ಕಳವು ನಡೆದಿತ್ತು.
ಮನೆಯವರು ಬೀಗ ಹಾಕಿ ಸಂಬಂಧಿಕರ ಮನೆಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ದಿನ ಮನೆಯೊಳಗೆ ನುಗ್ಗಿ ಕೋಣೆಯ ಲ್ಲಿದ್ದ ಗೊದ್ರೇಜಿನಿಂದ ಬೀಗ ಮುರಿದು 2 ಲಕ್ಷ ಮೌಲ್ಯದ 5.50 ಪವನ್ ನೆಕ್ಲೆಸ್ ಸರವನ್ನು ಕಳವು ಮಾಡಲಾಗಿತ್ತು.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಈ ಪ್ರಕರಣದ ಕಾರ್ಯಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸರು ಆರೋಪಿಯನ್ನು ಸೋರ್ನಾಡು ಎಂಬಲ್ಲಿ ಬಂಧಿಸಿದ್ದಾರೆ.
ಪೋಲೀಸ್ ಅಧೀಕ್ಷಕ ಹೃಷಿಕೇಶ್ ಸೋನಾವಣೆ, ಹೆಚ್ಚುವರಿ ಪೋಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಬಂಟ್ವಾಳ ಡಿ.ವೈಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ, ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರ ನೇತ್ರತ್ವದ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಅಪರಾಧ ವಿಭಾಗದ ಎಸ್.ಐ.ಸಂಜೀವ ಅವರ ತಂಡ ಕಾರ್ಯಚರಣೆ ನಡೆಸಿತ್ತು.
ಎ.ಎಸ್.ಐ.ಗಳಾದ ಗಿರೀಶ್, ಬಾಲಕೃಷ್ಣ ಸಿಬ್ಬಂದಿ ಗಳಾದ ಬಸವರಾಜ್,ರಾಧಾಕೃಷ್ಣ ಕಾರ್ಯಚರಣೆ ಯಲ್ಲಿ ಭಾಗವಹಿಸಿದ್ದರು.