ವೃದ್ಧ ಮಹಿಳೆಯ ಮನೆ ದುರಸ್ತಿಗೆ ಮಿಡಿದ ಮನ
Team Udayavani, May 4, 2022, 5:31 PM IST
ಬೆಳ್ತಂಗಡಿ: ಮುಂಡಾಜೆ ದುಂಬೆಟ್ಟು ಪ್ರದೇಶದಲ್ಲಿ ವಾಸವಾಗಿರುವ ಏಕಾಂಗಿ ವೃದ್ಧ ಮಹಿಳೆ ಜಿನ್ನಮ್ಮ ಅವರ ಶಿಥಿಲಾವಸ್ಥೆಗೆ ತಲುಪಿದ ಮನೆಯನ್ನು ಸ್ಥಳೀಯರು ಸೇರಿ ದುರಸ್ತಿಗೊಳಿಸಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಿನ್ನಮ್ಮ ಅವರ ಪುತ್ರ ಕಳೆದ ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ಆ ಬಳಿಕ ಅವರು ಏಕಾಂಗಿಯಾಗಿ ವಾಸವಾಗಿದ್ದಾರೆ. ಸ್ಥಳೀಯವಾಗಿ ಕೂಲಿ ಕೆಲಸ ನಿರ್ವಹಿಸುತ್ತಿರುವ ಇವರ ಮನೆಯು ಪೂರ್ಣ ಶಿಥಿಲಾವಸ್ಥೆಯನ್ನು ತಲುಪಿ ಅಪಾಯದ ಪರಿಸ್ಥಿತಿಯಲ್ಲಿತ್ತು.
ಇಲ್ಲಿನ ಕಾರ್ಗಿಲ್ ವನದ ರೂವಾರಿ ಸಚಿನ್ ಭಿಡೆ, ಬಾಲಕೃಷ್ಣ ಪಣಿಕ್ಕಲ್ಲು, ಶಿವಣ್ಣ ಪಿಲತಡ್ಕ, ಶಶಿ ಚಾರ್ಮಾಡಿ, ಆಸರೆ ಸೇವಾಹಸ್ತ ಹಾಗೂ ಊರ-ಪರವೂರ ಜನರ ಸಹಾಯ ಹಸ್ತದಿಂದ, ಸ್ಥಳೀಯರು ಸೇರಿ ಮನೆಯ ಛಾವಣಿಗೆ ಶ್ರಮದಾನದ ಮೂಲಕ ಹೊಸ ಅಡ್ಡ, ರೀಪು, ಪಕ್ಕಾಸುಗಳನ್ನು ಅಳವಡಿಸಿ, ಅಲ್ಲಲ್ಲಿ ಹಾಳಾಗಿದ್ದ ಗೋಡೆ ಭಾಗವನ್ನು ದುರಸ್ತಿಪಡಿಸಿ, ಸುಣ್ಣಬಣ್ಣಗಳನ್ನು ಕೊಟ್ಟು ವಾಸಕ್ಕೆ ಯೋಗ್ಯವಾಗಿ ಮಾಡಿ ಕೊಟ್ಟಿರುತ್ತಾರೆ. ಜತೆಗೆ ಬಚ್ಚಲುಮನೆ ಕೊಟ್ಟಿಗೆಗಳನ್ನು ಕೂಡ ದುರಸ್ತಿಪಡಿಸಲಾಗಿದೆ. ಮೇ 1ರಂದು ಫಲಾನುಭವಿಗೆ ಹಸ್ತಾಂತರಿಸಲಾಯಿತು.