“ಕಲೆ, ಕಲಾವಿದರ ಉಳಿಸುವ ಶಿಕ್ಷಣ ಶ್ಲಾಘನೀಯ’
ಕುಸುಮಸಾರಂಗ ಘಟಕದ ರಂಗ ಶಿಕ್ಷಣ ಶಿಬಿರ ಉದ್ಘಾಟನೆ
Team Udayavani, May 20, 2019, 6:00 AM IST
ಸುಬ್ರಹ್ಮಣ್ಯ: ಆಧುನಿಕತೆಯ ಪ್ರಭಾವದ ನಡುವೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಂಸ್ಕೃತಿಕ ಪ್ರಜ್ಞೆ ಉಳಿದಿದೆ. ಕಲೆ ಮತ್ತು ಕಲಾವಿದರನ್ನು ಉಳಿಸಿಕೊಳ್ಳುವ ರಂಗಕಲೆಯ ತರಬೇತಿಗಳು ಕಾಲೇಜಿನಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿನ ಸಭಾಂಗಣದಲ್ಲಿ ರವಿವಾರ ಉದ್ಘಾಟನೆ ಗೊಂಡ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯದ ರಂಗ ಘಟಕ ಕುಸುಮ ಸಾರಂಗದ 27ನೇ ವರ್ಷದ ರಂಗ ಶಿಕ್ಷಣ ಶಿಬಿರ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾಲೇಜಿನ ಕುಸುಮಸಾರಂಗ ರಂಗ ಘಟಕವೂ ಏಳು-ಬೀಳುಗಳ ಮಧ್ಯೆಯೂ 27 ವರ್ಷಗಳ ಸುದೀರ್ಘ ಕಾಲ ಚಟುವಟಿಕೆ ನಡೆಸಿ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುತ್ತಿವೆ. ಕಲೆ ಉಳಿಸುವ ಇಂತಹ ಕಾರ್ಯಗಳಿಗೆ ದೇವಸ್ಥಾನದ ವತಿ ಯಿಂದ ಪೂರ್ಣ ಪ್ರೋತ್ಸಾಹ, ಸಹಕಾರ ನೀಡಲಾಗುವುದು ಎಂದರು.
ಮಂಗಳೂರು ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ| ವೇದವರಂಗ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದ ನಿರ್ದೇಶಕಿ ದಾಕ್ಷಾಯಿಣಿ ಭಟ್, ಕುಸುಮ ಸಾರಂಗದ ಪೂರ್ವ ನಿರ್ದೇಶಕ ತುಕಾರಾಮ ಯೇನೆಕಲ್ಲು, ರಂಗಕರ್ಮಿ ಜಯಪ್ರಕಾಶ ಬಿಳಿನೆಲೆ, ಪೂರ್ವ ವಿದ್ಯಾಥಿಗಳಾದ ರಾಮಚಂದ್ರ, ಮಮತಾ ಎ. ಉಪಸ್ಥಿತರಿದ್ದರು.
ಪ್ರಾಂಶುಪಾಲ ಪ್ರೊ| ಉದಯ ಕುಮಾರ್ ಕೆ. ಪ್ರಸ್ತಾವನೆಗೈದು ಸ್ವಾಗತಿಸಿ ದರು. ಕುಸುಮ ಸಾರಂಗ ರಂಗ ಘಟಕದ ಸಂಚಾಲಕ ಡಾ| ಗೋವಿಂದ ಎನ್.ಎಸ್. ರಂಗ ಶಿಕ್ಷಣದ ನಡೆದು ಬಂದ ಹಾದಿ ಕುರಿತು ಬೆಳಕು ಚೆಲ್ಲಿದರು. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ| ಸುಬ್ಬಪ್ಪ ಕೈಕಂಬ, ಪೂರ್ವ ವಿದ್ಯಾಥಿಗಳು, ನಾಟಕ ತರಬೇತಿ ಪಡೆಯಲಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಉಪನ್ಯಾಸಕ ವಿನ್ಯಾಸ್ ಎಚ್. ವಂದಿಸಿದರು. ವರ್ಷಾ ಪ್ರಾರ್ಥಿಸಿ, ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಪುಣ್ಯದ ಕೆಲಸ
ರಂಗಭೂಮಿಯಲ್ಲಿ ವರ್ತಮಾನಕ್ಕೆ ತಕ್ಕಂತೆ ಕಲೆಯನ್ನು ಕರಗತ ಮಾಡಿಕೊಳ್ಳುವುದು ಆವಶ್ಯಕ. ಇದೇ ಸಂಸ್ಥೆಯಲ್ಲಿ ಪೂರ್ವ ವಿದ್ಯಾರ್ಥಿಯಾಗಿದ್ದು, ರಂಗ ಕಲೆಯಲ್ಲಿ ತೊಡಗಿಸಿಕೊಂಡು ಇಂದು ಹೊರಗೆ ಪ್ರಾಧ್ಯಾಪಕನಾಗಿದ್ದರೂ ಕಲಿತ ಕಾಲೇಜಿನಲ್ಲಿ ಗುರು ಹಿರಿಯರ ಸಮ್ಮುಖ ರಂಗ ಶಿಕ್ಷಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತೋಷದಾಯಕ. ಕಲಿತ ಸಂಸ್ಥೆಯಲ್ಲಿ ಮತ್ತೆ ಓಡಾಡುವ, ಭಾಗವಹಿಸುವ ಅವಕಾಶ ಸಿಗುವುದು ಪುಣ್ಯದ ಕೆಲಸ ಎಂದು ಶಿಬಿರ ಉದ್ಘಾಟಿಸಿದ ಪ್ರೊ| ವೇದವರಂಗ ಹೇಳಿದರು.