ಬಾಣಂತಿ-ಮಗು ಪರಾರಿ ಪ್ರಕರಣ: ರಾತ್ರಿಯೇ ಮತ್ತೆ ಆಸ್ಪತ್ರೆಗೆ ದಾಖಲು
Team Udayavani, Jul 18, 2020, 11:15 AM IST
ಸಾಂದರ್ಭಿಕ ಚಿತ್ರ
ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಜು. 15ರ ರಾತ್ರಿ ಹೆರಿಗೆಯಾದ ಮಹಿಳೆಯೋರ್ವಳು ತನಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ ಎಂಬ ಭಯದಿಂದ ಪತಿಯೊಂದಿಗೆ ಜು. 16ರ ರಾತ್ರಿ ಆಸ್ಪತ್ರೆ ಗೇಟಿನ ಬೀಗ ಮುರಿದು ಪರಾರಿಯಾದ ಘಟನೆಗೆ ಸಂಬಂಧಿಸಿ ಬಾಣಂತಿ ಹಾಗೂ ಮಗುವನ್ನು ಪತ್ತೆಹಚ್ಚಿರುವ ಬೆಳ್ತಂಗಡಿ ಪೊಲೀಸರು ಮತ್ತೆ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜು. 12ರಂದು ನಾವೂರಿನ ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲ ದ್ರವ ಪರೀಕ್ಷೆ ಗೊಳಪಡಿಸಲಾಗಿತ್ತು. ಜು. 15ರಂದು ಹೆರಿಗೆಯಾಗಿದೆ. ಜು. 16ರ ಸಂಜೆ ಕೋವಿಡ್ ಪರೀಕ್ಷೆ ವರದಿ ಪಾಸಿಟಿವ್ ಬಂದಿತ್ತು. ಬಾಣಂತಿಗೆ ಹಾಗೂ ಆಕೆಯ ಮನೆಮಂದಿಗೆ ಮಾಹಿತಿ ನೀಡಿ ಬಾಣಂತಿ ಹಾಗೂ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಸಿದ್ಧತೆ ನಡೆಸಿದ್ದರು.
ಈ ನಡುವೆ ರಾತ್ರಿ ಕಾರಲ್ಲಿ ಆಸ್ಪತ್ರೆಗೆ ಬಂದ ಆಕೆಯ ಪತಿ ಸಿಬಂದಿಯ ಸೂಚನೆಗಳನ್ನೂ ಧಿಕ್ಕರಿಸಿ ಬಾಣಂತಿ ಪತ್ನಿ ಹಾಗೂ ಹಸುಗೂಸನ್ನು ಬಲಾತ್ಕಾರವಾಗಿ ಮನೆಗೆ ಕರೆದೊಯ್ದಿದ್ದರು. ಮಾಹಿತಿ ತಿಳಿದ ಬೆಳ್ತಂಗಡಿ ಎಸ್ಐ ನಂದ ಕುಮಾರ್ ಹಾಗೂ ಪೊಲೀಸರ ತಂಡ ಬಾಣಂತಿ-ಮಗುವನ್ನು ಮನೆಯಿಂದ ಕರೆತಂದು ಮತ್ತೆ ಆಸ್ಪತ್ರೆಗೆ ದಾಖಲಿಸಿತು. ಶುಕ್ರವಾರ ಅವರನ್ನು ಲೇಡಿಗೋಶನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇನ್ನೋರ್ವ ಬಾಣಂತಿಗೂ ಪಾಸಿಟಿವ್
ಮತ್ತೂಂದೆಡೆ ಜು. 15ರಂದು ಹೆರಿಗೆಯಾದ ಮಡಂತ್ಯಾರಿನ ಮಹಿಳೆಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಆಕೆಯೂ ಗೊಂದಲಕ್ಕೊಳಗಾಗಿ ಆಸ್ಪತ್ರೆ
ಗೇಟ್ ಬಳಿ ನಿಂತಿದ್ದು, ಆಸ್ಪತ್ರೆ ಸಿಬಂದಿ ತಂಡ ವೈದ್ಯರ ಸಕಾಲಿಕ ಕ್ರಮದಿಂದ ಮನೆಗೆ ತೆರಳುವುದನ್ನು ತಪ್ಪಿಸಲಾಗಿದೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾದ ಮೂವರು ಗರ್ಭಿಣಿಯರನ್ನು ಮಂಗಳೂರು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಹೆರಿಗೆ ವಾರ್ಡನ್ನು ಸೀಲ್ಡೌನ್ ಮಾಡಲಾಗಿದೆ.