ನೀರಾ ಘಟಕ ಕಾರ್ಯಾಚರಣೆ: ಮೂರ್ತೆ ತರಬೇತಿಗೆ ಶಾಸಕರ ಸೂಚನೆ
ಬಂಟ್ವಾಳ ತಾಲೂಕು ಪಂಚಾಯತ್ ಕೆಡಿಪಿ ಸಭೆ
Team Udayavani, Oct 28, 2020, 9:53 PM IST
ಬಿ.ಸಿ.ರೋಡ್ಎಸ್ಜಿಎಸ್ವೈ ಸಭಾಂಗಣದಲ್ಲಿ ಬಂಟ್ವಾಳ ತಾ.ಪಂ.ಕೆಡಿಪಿ ಸಭೆ ನಡೆಯಿತು.
ಬಂಟ್ವಾಳ: ತುಂಬೆಯಲ್ಲಿ ಹಾಲಿ ಸ್ಥಗಿತಗೊಂಡಿರುವ ತೋಟಗಾರಿಕೆ ಇಲಾಖೆಯ ನೀರಾ ಘಟಕದಲ್ಲಿ ಈಗ ಇರುವ ಯಂತ್ರೋಪಕರಣಗಳು ಹಳೆಯದಾಗಿದ್ದು, ಅದನ್ನು ಮರು ಆರಂಭಿಸು ವುದಕ್ಕಿಂತಲೂ ಮುಖ್ಯವಾಗಿ ತೆಂಗಿನ ಮರ ಹತ್ತಿ ಮೂರ್ತೆ ಮಾಡುವ ಕುರಿತು ಯುವಕರಿಗೆ ತರಬೇತಿ ನೀಡುವ ಕಾರ್ಯವನ್ನು ಇಲಾಖೆ ಮಾಡಬೇಕಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸೂಚಿಸಿದರು.
ಅವರು ಬುಧವಾರ ಬಿ.ಸಿ.ರೋಡ್ನಲ್ಲಿರುವ ಬಂಟ್ವಾಳ ತಾ.ಪಂ.ನ ಎಸ್ಜಿಎಸ್ವೈ ಸಭಾಂಗಣದಲ್ಲಿ ನಡೆದ ತಾ.ಪಂ. ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜಾ ನೀರಾ ಘಟಕವನ್ನು ಖಾಸಗಿ ಯವರಿಗೆ ನೀಡಲು ಟೆಂಡರ್ ಡ್ರಾಫ್ಟ್ ಅನ್ನು ಅನುಮತಿಗೆ ಕಳುಹಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಹಾಲಿ ತುಂಬೆಯಲ್ಲಿರುವ ಎಲ್ಲ ಯಂತ್ರ ಗಳು ಹಳೆಯದಾಗಿದ್ದು, ಇನ್ನು ಯಾರಿಗೆ ನೀಡಿದರೂ ಹೊಸ ಯಂತ್ರೋಪಕರಣಗಳು ಬೇಕಾಗುತ್ತವೆ. ಮೂರ್ತೆ ಮಾಡುವವರೇ ಇಲ್ಲವಾದರೆ ಯಾರಿಗೆ ನೀಡಿದರೂ ಪ್ರಯೋಜನವಿಲ್ಲ. ಹೀಗಾಗಿ ಇಲಾಖೆ ಯುವಕರಿಗೆ ಮೂರ್ತೆ ಮಾಡುವ ತರಬೇತಿ ನೀಡಿದರೆ ಪ್ರಯೋಜನ ವಾದೀತು ಎಂದು ಸಲಹೆ ನೀಡಿದರು. ನೀರಾ ಘಟಕ ಸ್ಥಗಿತ ಗೊಂಡಿರುವ ಕುರಿತು ಜಿ.ಪಂ. ಸದಸ್ಯರಾದ ತುಂಗಪ್ಪ ಬಂಗೇರ ಹಾಗೂ ಎಂ.ಎಸ್.ಮಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.
ಅನುದಾನ ಬಂದಂತೆ ವಿಲೇವಾರಿ
ತಾಲೂಕಿನಲ್ಲಿ ಮಾಸಾಶನ ಹಾಗೂ ಅಂತ್ಯ ಸಂಸ್ಕಾರದ ಸಹಾಯಧನ ಸಮರ್ಪಕ ವಾಗಿ ಬಾರದೇ ಇರುವ ಕುರಿತು ಜಿ.ಪಂ.ಸದಸ್ಯೆ ಮಂಜುಳಾ ಮಾವೆ ಅವರು ಸಭೆಗೆ ತಿಳಿಸಿದರು. ಈ ವೇಳೆ ತಹಶೀಲ್ದಾರ್ ರಶ್ಮಿ ಎಸ್.ಆರ್. ಮಾತನಾಡಿ, ಪ್ರಸ್ತುತ ಮಾಸಾಶನಗಳು ಬಹುತೇಕ ಮಂದಿಗೆ ಸಮರ್ಪಕವಾಗಿ ಬರುತ್ತಿದೆ. ಅಂತ್ಯ ಸಂಸ್ಕಾರದ ಸಹಾಯಧನಕ್ಕೆ ಅನುದಾನ ಬಂದಂತೆ ಕ್ರಮವಾಗಿ ಅರ್ಜಿ ವಿಲೇವಾರಿ ಮಾಡುತ್ತಿದ್ದು, ಮುಂದೆ ಅನುದಾನ ಬಂದಾಗ ವಿಲೇವಾರಿ ಮಾಡುವುದಾಗಿ ತಿಳಿಸಿದರು.
ಕೊಳ್ನಾಡಿನ ಸುರಿಬೈಲು ಶಾಲೆ ಕಟ್ಟಡಕ್ಕೆ ಟೆಂಡರ್ ಆಗಿ 5 ವರ್ಷಗಳು ಕಳೆದರೂ ಅನುದಾನ ಬಾರದೆ ಇರುವ ಕುರಿತು ಜಿ.ಪಂ. ಸದಸ್ಯ ಎಂ.ಎಸ್.ಮಹಮ್ಮದ್ ಅವರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ರಾಜ್ ಎಇಇ ತಾರಾನಾಥ್ ಸಾಲ್ಯಾನ್, ಪ್ರಸ್ತುತ ಅದರ ಟೆಂಡರ್ ಕ್ಯಾನ್ಸಲ್ ಆಗಿದೆ. ಅದು 1.50 ಕೋ.ರೂ.ಗಳ ಕಾಮಗಾರಿಯಾಗಿದ್ದು, ಕೆಲಸ ಆರಂಭಿಸಬೇಕಾದರೆ ಮೂರನೇ ಒಂದಂಶ ಅನುದಾನ ಇರಬೇಕಾಗುತ್ತದೆ. ಆ ವರ್ಷದಿಂದ ಆರ್ಎಸ್ಎಂಎ ಅನುದಾನ ನಿಂತಿದ್ದು, ಹೀಗಾಗಿ ಕಾಮಗಾರಿ ನಡೆದಿಲ್ಲ ಎಂದು ತಿಳಿಸಿದರು.
ಕೊರೊನಾ ಪಾಸಿಟಿವ್ ಇಳಿಮುಖ
ಅಕ್ಟೋಬರ್ ತಿಂಗಳಲ್ಲಿ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಇಳಿಕೆ ಯಾಗಿವೆ. ಪ್ರಸ್ತುತ 509 ಸಕ್ರಿಯ ಪ್ರಕರಣಗಳಿದ್ದು, 44 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ ಜನವರಿಯಿಂದ ಮೂರು ಮಾತ್ರ ಮಲೇರಿಯಾ ಪ್ರಕರಣಗಳು ದಾಖ ಲಾಗಿವೆ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ| ದೀಪಾ ಪ್ರಭು ತಿಳಿಸಿದರು.
ಮುಳುಗಡೆ ಪ್ರದೇಶದ ಮಾಹಿತಿ ನೀಡಿ
ತಾಲೂಕಿನಲ್ಲಿ ಬೇಸಾಯ ಮಾಡದೆ ಹಡಿಲು ಬಿದ್ದಿರುವ ಭೂಮಿಯ ವಿವರ ಸಂಗ್ರಹ ಮಾಡಿ ವರದಿ ನೀಡುವಂತೆ ಶಾಸಕರು ಕೃಷಿ ಇಲಾಖೆ ಅಧಿಕಾರಿಯವರಿಗೆ ಸೂಚಿಸಿದರು. ಎಎಂಆರ್ ಡ್ಯಾಂ ನಿಂದ ಮುಳುಗಡೆ ಆಗಿರುವ ಭೂಮಿಯ ವಿವರ ನೀಡುವಂತೆ ಸರ್ವೇ ಇಲಾಖೆ ಅಧಿಕಾರಿಗೆ ಶಾಸಕರು ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಕುರಿತು ನಿರ್ಣಯ ತೆಗೆದುಕೊಳ್ಳಬೇಕು ಎಂದು ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಆಗ್ರಹಿಸಿದರು. ಈ ಕುರಿತು ಈಗಾಗಲೇ ಸಿಎಂಗೆ ಮನವಿ ನೀಡಲಾಗಿದ್ದು, ಜಿಲ್ಲೆಗೆ ಮೆಡಿಕಲ್ ಕಾಲೇಜು ಬಂದರೆ ಅದನ್ನು ಬಂಟ್ವಾಳದಲ್ಲೇ ಮಾಡುವ ಕುರಿತು ಈಗಾಗಲೇ ಜಾಗವನ್ನೂ ಗುರುತಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.
ತಾಲೂಕಿನ ಪಶು ಸಂಗೋಪನೆ ಇಲಾಖೆ ಯಲ್ಲಿ ವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇರುವ ಕುರಿತು ಮಂಜುಳಾ ಮಾವೆ ಸಭೆಗೆ ತಿಳಿಸಿದ್ದು, 89 ಮಂಜೂರು ಹುದ್ದೆಗಳಲ್ಲಿ ಕೇವಲ 19 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಸಾಮಾನ್ಯ ಅನುದಾನಕ್ಕೆ ಆಗ್ರಹ
ಜಿ.ಪಂ.ಸದಸ್ಯರ ಸಾಮಾನ್ಯ ಅನುದಾನ ನೀಡುವಂತೆ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಒತ್ತಡ ಹೇರಲು ಜಿ.ಪಂ. ಸದಸ್ಯ ಎಂ.ಎಸ್.ಮಹಮ್ಮದ್ ಮನವಿ ಮಾಡಿದರು. ಉದ್ಯೋಗ ಖಾತರಿ ಅನುದಾನ ಸಮರ್ಪಕ ಗೊಳಿಸುವಂತೆ ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ತಿಳಿಸಿದರು.
ಬಂಟ್ವಾಳ ಮಿನಿ ವಿಧಾನಸೌಧ ಸೋರು ತ್ತಿರುವ ಕುರಿತು ತುಂಗಪ್ಪ ಬಂಗೇರ ಸಭೆಯ ಗಮನಕ್ಕೆ ತಂದು, ಕಾಮಗಾರಿಯ ತನಿಖೆಗೆ ಆಗ್ರಹಿಸಿದರು. ಅಕ್ಷರ ದಾಸೋಹದ ಅಕ್ಕಿ, ಬೇಳೆ, ಗೋಧಿ ಗೋದಾಮಿನಲ್ಲಿ ಸಂಗ್ರಹ ಮಾಡಿರುವ ಕುರಿತು ಜಿ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇಲಾಖೆಯ ನಿರ್ದೇಶಕರ ಜತೆ ಮಾತನಾಡುವುದಾಗಿ ಶಾಸಕರು ಭರವಸೆ ನೀಡಿದರು.
ಜಿ.ಪಂ. ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಆನಂದ ಎ.ಶಂಭೂರು, ಚಂದ್ರಶೇಖರ ಶೆಟ್ಟಿ, ಯಶವಂತ ನಾಯ್ಕ, ಭಾರತಿ ಚೌಟ ಉಪ ಸ್ಥಿತರಿದ್ದರು. ತಾ.ಪಂ.ಕಾರ್ಯ ನಿರ್ವಹಣಾ ಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.
ಮೆಸ್ಕಾಂ ಪ್ಯಾಕೇಜ್ ಬಾಕಿ
ಬಂಟ್ವಾಳ ಮೆಸ್ಕಾಂ ವ್ಯಾಪ್ತಿಯಲ್ಲಿ ಹಿಂದಿನ 50 ಕೋ.ರೂ.ಗಳ ಪ್ಯಾಕೇಜ್ ಬಾಕಿ ಇರುವುದರಿಂದ ಹೊಸ ಅನುದಾನ ಸಿಗುತ್ತಿಲ್ಲ. ಹಿಂದಿನ ಪ್ಯಾಕೇಜ್ ಯಾಕೆ ಬಾಕಿ ಉಳಿದಿದೆ ಎಂದು ಶಾಸಕರು ಪ್ರಶ್ನಿಸಿದರು. ಇದಕ್ಕೆ ಕೆಡಿಪಿ ನಾಮನಿರ್ದೇಶಿತ ಸದಸ್ಯ ಜೋಕಿಂ ಮಿನೇಜಸ್ ಧ್ವನಿಗೂಡಿಸಿದರು. ಉತ್ತರಿಸಿದ ಮೆಸ್ಕಾಂ ಎಇಇ ನಾರಾಯಣ ಭಟ್, ಸುಮಾರು 30 ಕೋ.ರೂ.ಗಳ ಪ್ಯಾಕೇಜ್ ಪೆಂಡಿಂಗ್ ಆಗಿದ್ದು, ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದರು.
ಅದಾಲತ್ ಆಯೋಜಿಸಿ
ಪುತ್ತೂರು ಹಾಗೂ ಮಂಗಳೂರಿನ ಕೆಎಸ್ಆರ್ಟಿಸಿ ಡಿಸಿಗಳ ಉಪ ಸ್ಥಿತಿಯಲ್ಲಿ ಶೀಘ್ರ ಅದಾಲತ್ ಆಯೋಜಿಸುವ ಕುರಿತು ಡಿಪೋ ಮ್ಯಾನೇಜರ್ಗೆ ಸೂಚಿಸಿದರು. ಕಾರ್ಮಿಕರ ಕಾರ್ಡ್ ಮಾಡುವ ಕುರಿತು ಅದಾಲತ್ ನಡೆಸಲು ಶಾಸಕರು ತಿಳಿಸಿದರು. ಪ್ರಸ್ತುತ ಪುರಸಭಾ ವ್ಯಾಪ್ತಿಯ ಒಣ ಕಸವನ್ನು ತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡುವ ಕುರಿತು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸಭೆಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ