ರಾಜಕೀಯ ಇಚ್ಛಾಶಕ್ತಿಯೇ ಅಭಿವೃದ್ಧಿಗೆ ಶ್ರೀರಕ್ಷೆ: ನಳಿನ್
ಬೆಳ್ತಂಗಡಿ: ಪಿಎಂಜಿಎಸ್ವೈನಡಿ 52.61 ಕೋ.ರೂ. ರಸ್ತೆ ಕಾಮಗಾರಿಗೆ ಶಿಲಾನ್ಯಾಸ
Team Udayavani, Sep 14, 2020, 11:21 PM IST
ಬೆಳ್ತಂಗಡಿ: ಉಜಿರೆ-ಕುಪ್ಪೆಟ್ಟಿ ರಸ್ತೆಗೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ಬೆಳ್ತಂಗಡಿ: ಟೀಕೆಗಳು ರಾಜಕೀಯದಲ್ಲಿ ಸಹಜ. ಅವುಗಳನ್ನೆಲ್ಲ ಎದುರಿಸಿ ಯೋಜನೆಯ ಹಿಂದಿನ ಅಧ್ಯಯನ, ಇಚ್ಛಾಶಕ್ತಿಯ ರಾಜಕಾರಣ, ಅಭಿವೃದ್ಧಿ ಪರ ನಂಬಿಕೆಯ ಮೂಲಕ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ಕ್ಷೇತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅತೀ ಹೆಚ್ಚು ಅನುದಾನ ತಂದು ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಶ್ಲಾಘಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಾಲ್ಕು ರಸ್ತೆಗಳ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಬಳಿಕ ಉಜಿರೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯಸರಕಾರಕ್ಕೆ 2009ರಿಂದ 2014ರ ವರೆಗೆ ಯುಪಿಎ ಸರಕಾರದ ಅವಧಿಯಲ್ಲಿ ಒಂದೇ ಒಂದು ರೂಪಾಯಿ ಅನುದಾನವನ್ನು ಗ್ರಾಮಸಡಕ್ ಯೋಜನೆಯಡಿ ನೀಡಿಲ್ಲ. 2014ರ ಬಳಿಕ ನರೇಂದ್ರ ಮೋದಿ ಅವರು ಕೇಂದ್ರ ರಸ್ತೆ ನಿಧಿಯಡಿ ದ.ಕ.ಜಿಲ್ಲೆಗೆ 150 ಕೋಟಿ ರೂ. ಅನುದಾನ ಮಂಜೂರುಗೊಳಿಸಿದ್ದಾರೆ. ಅದರಲ್ಲಿ ಅತೀ ಹೆಚ್ಚು 52 ಕೋ.ರೂ. ಅನುದಾನ ಬೆಳ್ತಂಗಡಿ ತಾಲೂಕಿಗೆ ನೀಡಲಾಗಿದೆ ಎಂದರು.
ಅಂದಿನ ಸಂಸದ ಶ್ರೀಕಂಠಪ್ಪ ಅವರು ಬೆಳ್ತಂಗಡಿ ತಾಲೂಕಲ್ಲಿ ಅತೀ ಹೆಚ್ಚು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿದ್ದರು. ಅವರ ಹಾದಿಯಲ್ಲೇ ಶಾಸಕ ಹರೀಶ್ ಪೂಂಜ ಸಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತೀ ಗ್ರಾ.ಪಂ.ಗೆ, ನ.ಪಂ. ಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ, ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಗಾಗಿ 1 ಕೋಟಿ ರೂ.ನಂತೆ ನೇರ ಅನುದಾನ ಒದಗಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದರು.
ಅಭಿವೃದ್ಧಿಯೇ ಉತ್ತರ
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಪ್ರಧಾನ ಮಂತ್ರಿಗಳ ಅಭಿವೃದ್ಧಿಶೀಲ ಚಿಂತನಯಂತೆ ಬೆಳ್ತಂಗಡಿಗೆ ಅತೀಹೆಚ್ಚು 500ರಿಂದ 600 ಕೋಟಿ ರೂ. ಅನುದಾನ ಬಿಡುಗಡೆ ಗೊಳಿಸುವಲ್ಲಿ ಸಂಸದ ನಳಿನ್ ಕುಮಾರ್ ಅವರ ಪ್ರೋತ್ಸಾಹ ಅಮೂಲ್ಯ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರತೀ ಬೂತ್ಗೆ 10 ಲಕ್ಷ ರೂ.ಗಳ ವಿಶೇಷ ಅನುದಾನ ಒದಗಿಸಲಾಗಿದೆ. ಈ ಮೂಲಕ ಟೀಕಾಕಾರರ ಅಪಪ್ರಚಾರಕ್ಕೆ ಅಭಿವೃದ್ಧಿಯಿಂದಲೇ ಉತ್ತರ ನೀಡಿದ್ದೇವೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ಸೌಮ್ಯಲತಾ ಜಯಂತ ಗೌಡ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಧರ್ ಎಂ. ಕಲ್ಮಂಜ, ತಾ.ಪಂ. ಸದಸ್ಯರಾದ ಜೋಯೆಲ್ ಮೆಂಡೋನ್ಸಾ, ಸುಧೀರ್ ಸುವರ್ಣ, ಕೊರಗಪ್ಪ ಗೌಡ, ಕೃಷ್ಣಯ್ಯ ಆಚಾರ್ಯ, ವಸಂತಿ, ಅನಿತಾ ಕುಶಾಲಪ್ಪ ಗೌಡ, ಸುಶೀಲಾ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಉಪಸ್ಥಿತರಿದ್ದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಭಾಕರ್ ಸ್ವಾಗತಿಸಿ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ ವಂದಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.
ಕಾಮಗಾರಿ ವಿವರ
ರಸ್ತೆ ಮೊತ್ತ
ಪರಪ್ಪು³-ಆದೂರು ಪೆರಾಲ್ 5.20 ಕೋಟಿ ರೂ.
ಲಾೖಲ-ಕೋಟಿಕಟ್ಟೆ 7.93 ಕೋ.ರೂ.
ಬೀಜತ್ತಡಿ-ಪಾರ್ಪಿಕಲ್ಲು 10.52 ಕೋ.ರೂ.
ಉಜಿರೆ-ಕುಪ್ಪೆಟ್ಟಿ 28.96ಕೋ.ರೂ.
ಒಟ್ಟು: 47.71 ಕಿ.ಮೀ.; 52.61 ಕೋಟಿ ರೂ.
ಶೀಘ್ರ ಪುಂಜಾಲಕಟ್ಟೆ-ಚಾರ್ಮಾಡಿ ಚತುಷ್ಪಥ
ಈಗಾಗಲೇ ಬಿ.ಸಿ.ರೋಡ್- ಪುಂಜಾಲಕಟ್ಟೆ ಚತುಷ್ಪಥ ರಸ್ತೆ ಕಾಮಗಾರಿ ಕೊನೆಯ ಹಂತದಲ್ಲಿದೆ. ಶೀಘ್ರವಾಗಿ ಎರಡನೇ ಹಂತದಲ್ಲಿ ಪುಂಜಾಲಕಟ್ಟೆಯಿಂದ -ಚಾರ್ಮಾಡಿ ವರೆಗೆ ಚತುಷ್ಪಥವಾಗಿಸಲಾಗುವುದು. ರಸ್ತೆ ಅಭಿವೃದ್ಧಿಗೆ ಸ್ವಯಂ ಪ್ರೇರಿತಾಗಿ ಅಗತ್ಯ ನಿವೇಶನ ಬಿಟ್ಟುಕೊಡುವ ಮೂಲಕ ಗ್ರಾಮದ ಅಭಿವೃದ್ಧಿಯಲ್ಲಿ ಜನತೆ ಕೈಜೋಡಿಸಬೇಕು.
– ನಳಿನ್ ಕುಮಾರ್ ಕಟೀಲು, ದಕ್ಷಿಣ ಕನ್ನಡ ಸಂಸದ