ಸೂರ್ಯ ಸಂಪರ್ಕಿತ ಕಾಲುದಾರಿ ಕುಸಿತ: ಪರಿಶೀಲನೆ
Team Udayavani, Jul 14, 2018, 10:42 AM IST
ಇಡ್ಕಿದು : ಮಳೆಯಿಂದಾಗಿ ಇಡ್ಕಿದು ಗ್ರಾಮದ ಕೋಲ್ಪೆ- ವಡ್ಯರ್ಪೆಯಿಂದ ಸೂರ್ಯಕ್ಕೆ ಸಂಪರ್ಕಿತ ಕಾಲು ದಾರಿ ಕುಸಿದು ಬಿದ್ದಿದೆ. ಇದರಿಂದಾಗಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಕಾಲುದಾರಿ ಕುಸಿತದ ಅನಂತರದ ಚಿತ್ರೀಕರಣದೊಂದಿಗೆ ಮಾಹಿತಿಯನ್ನು ಸ್ಥಳೀಯ ಸಂಘಟನೆಯ ಕಾರ್ಯಕರ್ತ ಅಬ್ದುಲ್ ಲತೀಫ್ ದಲ್ಕಾಜೆ ಅವರು ಇಡ್ಕಿದು ಗ್ರಾ.ಪಂ. ಪಿಡಿಒ, ವಿ.ಎ. ಹಾಗೂ ಸದಸ್ಯರ ಗಮನಕ್ಕೆ ತಂದಿದ್ದಾರೆ.
ಗ್ರಾ.ಪಂ. ಪಿಡಿಒ ಗೋಕುಲ್ದಾಸ್ ಭಕ್ತ, ಸದಸ್ಯ ಸತೀಶ್, ಸಾಮಾಜಿಕ ಮುಂದಾಳು ನಾರ್ಸಿ ಕೋಲ್ಪೆ ಘಟನಾ ಸ್ಥಳಕ್ಕೆ
ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಪಂದಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಕೋಲ್ಪೆ ಜಂಕ್ಷನ್ನಿಂದ ಮಸೀದಿಗೆ ಹಾದು ಹೋಗುವ ದಾರಿ ಮಧ್ಯೆ ಇರುವ ಮೋರಿಯ ದುರಸ್ತಿ ಕುರಿತೂ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ತುರ್ತು ಕಾಮಗಾರಿ ನಡೆಸುವ ಭರವಸೆ ನೀಡಿದ್ದಾರೆ ಎಂದು ಅಬ್ದುಲ್ ಲತೀಫ್ ದಲ್ಕಾಜೆ ತಿಳಿಸಿದ್ದಾರೆ.