ಬೆಳ್ಳಂಬೆಳಗ್ಗೆ ಹರಿಯಿತು ನೆತ್ತರಕೋಡಿ: ಸಿನಿಮೀಯ ರೀತಿಯಲ್ಲಿ ಮನೆಯೊಳಗೆ ನುಗ್ಗಿ ಗುಂಡಿನ ದಾಳಿ
ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಕಳಗಿ ಬಾಲಚಂದ್ರ ಕೊಲೆ ಆರೋಪಿ ಸಂಪತ್
Team Udayavani, Oct 8, 2020, 10:30 AM IST
ಸುಳ್ಯ: ಜನರೆಲ್ಲಾ ಆಗ ತಾನೇ ಮೈಮುರಿದುಕೊಂಡು ಏಳುತ್ತಿದ್ದರು. ಬೆಳಗಿನ ಚುಮುಚುಮು ಚಳಿಗೆ ಕೆಲವರು ವಾಕಿಂಗ್ ಹೋಗುತ್ತಿದ್ದರೆ, ಇನ್ನು ಹಲವರು ಬೆಳಗಿನ ಉಪಹಾರದ ಅಂದಾಜಿನಲ್ಲಿದ್ದರು. ಅಷ್ಟರಲ್ಲಿ ಕೇಳಿಸಿತ್ತು ಅದೊಂದು ಸದ್ದು, ಗುಂಡಿನ ಸದ್ದು. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳಯದ ಶಾಂತಿನಗರದಲ್ಲಿ ಗುರುವಾರ ಬೆಳ್ಳಂಬೆಳಗ್ಗೆ ನೆತ್ತರ ಕೋಡಿ ಹರಿದಿತ್ತು, ಕೊಲೆ ಆರೋಪಿಯೊಬ್ಬನ ಕೊಲೆಯಾಗಿತ್ತು!
ಸಂಪಾಜೆಯ ಜನನಾಯಕ ಕಳಗಿ ಬಾಲಚಂದ್ರರನ್ನು ಅಪಘಾತ ನಡೆಸಿ ಕೊಲೆ ಮಾಡಿದ ಆರೋಪಿಗಳಲ್ಲಿ ಒಬ್ಬನಾಗಿದ್ದ ಸಂಪಾಜೆ ಕಲ್ಲುಗುಂಡಿಯ ಸಂಪತ್ ಎಂಬಾತನನ್ನು ಸುಳ್ಯದ ಶಾಂತಿ ನಗರದಲ್ಲಿ ಇಂದು ಮುಂಜಾನೆ ಮುಸುಕುಧಾರಿಗಳು ಗುಂಡಿಟ್ಟು ಕೊಲೆಗೈದಿದ್ದಾರೆ.
ಕಳಗಿ ಬಾಲಚಂದ್ರ ಹತ್ಯೆಯ ಆರೋಪಿ ಸಂಪತ್ ಕೆಲ ತಿಂಗಳ ಹಿಂದಕ್ಕೆ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರ ಬಂದಿದ್ದ. ಕಲ್ಲು ಮತ್ತು ಮರಳು ವ್ಯಾಪಾರಸ್ಥರಾಗಿದ್ದ ಆತ ಎಂದಿನಂತೆ ತನ್ನ ವ್ಯವಹಾರದಲ್ಲಿ ತೊಡಗಿಕೊಂಡಿದ್ದ. ಕೆಲವೊಮ್ಮೆ ಆತ ಸುಳ್ಯದ ಶಾಂತಿ ನಗರದಲ್ಲಿರುವ ರಾಮಕೃಷ್ಣ ಎಂಬವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದ ಎನ್ನಲಾಗಿದೆ. ನಿನ್ನೆಯೂ ಆತ ಶಾಂತಿನಗರದಲ್ಲಿ ಉಳಿದುಕೊಂಡಿದ್ದ. ಅ.8ರಂದು ಮುಂಜಾನೆ 6.30 ಕ್ಕೆ ಆತ ತನ್ನ ಕಾರಲ್ಲಿ ಹೊರಟು ಹೋಗುತ್ತಿದ್ದಾಗ ಐದಾರು ಮಂದಿ ಮುಸುಕುಧಾರಿಗಳು ಆತನ ಕಾರನ್ನು ಅಡ್ಡಗಟ್ಟಿ ಕನ್ನಡಿಗೆ ಹೊಡೆದು ನಿಲ್ಲಿಸಿದರು. ಅಪಾಯವನ್ನು ಅರಿತ ಸಂಪತ್ ಕಾರಿನಿಂದಿಳಿದು ತನ್ನ ಮನೆ ಕಡೆಗೆ ಓಡಿದ. ಆ ವೇಳೆಗೆ ಮುಸುಕುಧಾರಿಗಳು ಕೋವಿಯಿಂದ ಆತನ ಬೆನ್ನಿಗೆ ಗುಂಡಿಕ್ಕಿದ್ದರೆಂದು ಹೇಳಲಾಗಿದೆ.
ಇದನ್ನೂ ಓದಿ:ಸುಳ್ಯವನ್ನು ಬೆಚ್ಚಿ ಬೀಳಿಸಿದ ಗುಂಡಿನ ದಾಳಿ: ಅಪರಿಚಿತರಿಂದ ಬೆಳ್ಳಂಬೆಳ್ಳಗ್ಗೆ ಶೂಟೌಟ್
ಗುಂಡೇಟು ತಿಂದ ಆತ ತಾನಿರುವ ಮನೆಗೆ ಹೋಗದೆ ಪಕ್ಕದಲ್ಲಿರುವ ಇನ್ನೊಂದು ಮನೆಗೆ ಹೊಕ್ಕಿದ್ದ. ಅಲ್ಲಿಗೂ ಅಟ್ಟಾಡಿಸಿಕೊಂಡು ಬಂದ ಮುಸುಕುಧಾರಿಗಳು ಮನೆಯೊಳಗೆ ಹೊಕ್ಕು ಮತ್ತೆ ಗುಂಡಿಕ್ಕಿದರಲ್ಲದೆ ಕೋವಿಯಿಂದ ಆತನ ತಲೆಗೆ ಹೊಡೆದರೆಂದು ತಿಳಿದು ಬಂದಿದೆ.
ಈ ಘಟನೆ ನಡೆಯುವಾಗ ಮನೆಯವರು ಬೆದರಿ ಹೊರಗೋಡಿ ಬಂದರು. ಮನೆಯಲ್ಲಿದ್ದ ತಿಮ್ಮಪ್ಪ ಎಂಬುವರು ಮುಸುಕುಧಾರಿಗಳನ್ನು ತಡೆಯಲು ಯತ್ನಿಸಿದಾಗ ಅವರು ತಿಮ್ಮಪ್ಪರ ಕೈಗೆ ಕಡಿದಿದ್ದಾರೆ.
ಗುಂಡೇಟಿನಿಂದ ತೀವ್ರ ಜಖಂಗೊಂಡ ಸಂಪತ್ ಮನೆಯೊಳಗಡೆ ಬಿದ್ದು ಮೃತಪಟ್ಟರು. ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ಚಂದ್ರ ಜೋಗಿ, ಎಸ್.ಐ. ಹರೀಶ್ ಎಂ.ಆರ್. ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಬಂದೋಬಸ್ತ್ ಏರ್ಪಡಿಸಿದ್ದಾರೆ. ನೂರಾರು ಮಂದಿ ಕುತೂಹಲಿಗರು ಘಟನಾ ಸ್ಥಳದಲ್ಲಿ ಸೇರಿದ್ದಾರೆ