ಕೊಡಗು ನೆರೆಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರು ಸಂಗ್ರಹ
Team Udayavani, Aug 30, 2018, 2:12 PM IST
ಕೈರಂಗಳ: ನೆರೆಸಂತ್ರಸ್ತರಿಗೆ ಕುಡಿಯುವ ನೀರಿನ ಆವಶ್ಯಕತೆ ಇದ್ದುದರ ಬಗ್ಗೆ ಅರಿತುಕೊಂಡು ಸ್ಥಳೀಯ ಅನೇಕ ಸಂಘಟನೆಗಳು ಒಟ್ಟು ಸೇರಿ ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸಿದ್ದು, ಶಾಲಾ ವಿದ್ಯಾರ್ಥಿಗಳ ಪರಿಶ್ರಮದಿಂದ ಕೊಡಗಿನ ಕಲ್ಲಗುಂಡಿ, ಸಂಪಾಜೆ, ಅರಂತೋಡು ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ. ರಾಜಾರಾಮ ಭಟ್ ತಿಳಿಸಿದರು.
ಕೈರಂಗಳ ಪುಣ್ಯಕೋಟಿ ನಗರದ ಶಾರದಾಗಣಪತಿ ವಿದ್ಯಾಕೇಂದ್ರ ಮತ್ತು ಸ್ಥಳೀಯ ಸಂಘಟನೆಗಳ ಸಹಕಾರದಿಂದ ಕೊಡಗು ನೆರೆಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರು ಕಳುಹಿಸಿಕೊಡಲಾಯಿತು. ಪ್ರಾಕೃತಿಕ ವಿಕೋಪಗಳು ನಡೆದಾಗ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಿದ್ದು, ಆ ನಿಟ್ಟಿನಲ್ಲಿ ಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರು ಸಂಜೀವಿನಿಯಾಗಲಿದೆ. ಸಮಾಜದ ಕಷ್ಟಗಳಿಗೆ ಎಂದಿಗೂ ಸ್ಪಂದಿಸಲು ನಾವುಗಳು ಸಿದ್ಧ ಎಂದರು.
ಸಂಸ್ಥೆಯ ಪ್ರಾಂಶುಪಾಲೆ ದಿವ್ಯದೀಪಾ, ಉಪನ್ಯಾಸಕರಾದ ಶ್ರೀಹರಿ, ಸೋಮಶೇಖರ್, ಯೋಗಿತಾ, ಸ್ಥಳೀಯ ಮುಖಂಡರಾದ ವಿಜೇಶ್ ನಾಯ್ಕ, ಜಯಂತ್ ಪಾದಲ್ಪಾಡಿ, ಉದಯ ಪಾದಲ್ಪಾಡಿ, ಸಂತೋಷ್, ಸುಖೇಶ್, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.