ಉಪ್ಪಿನಂಗಡಿ: ವಿದ್ಯಾರ್ಥಿ ತಂಡಗಳ ಹೊಡೆದಾಟ ತಡೆದ ಪೊಲೀಸರು
Team Udayavani, Sep 24, 2022, 12:42 AM IST
ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆಸಿದ್ದ ವಿದ್ಯಾರ್ಥಿಗಳ ಎರಡು ತಂಡಗಳು ಸಂಘರ್ಷಕ್ಕೆ ಸಿದ್ಧವಾಗಿ ಅನಪೇಕ್ಷಿತ ಘಟನಾವಳಿಗೆ ಕಾರಣವಾಗುವ ಸಾಧ್ಯತೆಯನ್ನು ಪೊಲೀಸರ ಸಕಾಲಿಕ ಮಧ್ಯೆ ಪ್ರವೇಶದಿಂದಾಗಿ ತಡೆಗಟ್ಟಿದ ಘಟನೆ ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ.
ಗುರುವಾರ ಸಂಜೆ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಯೋರ್ವ ದ್ವಿತೀಯ ಪಿಯು ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆಗೆ ಸಂಬಂಧಿಸಿ ಶುಕ್ರವಾರ ಉಭಯ ವಿದ್ಯಾರ್ಥಿಗಳ ಬೆಂಬಲಿಗರು ಜಮಾಯಿಸಿ ಹೊಡೆದಾಟಕ್ಕೆ ಸಿದ್ಧರಾಗಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಎಸ್ಸೆ„ ರಾಜೇಶ್ ಕೆ.ವಿ. ಹೆಚ್ಚುವರಿ ಪೊಲೀಸ್ ಪಡೆಯೊಂದಿಗೆ ಕಾಲೇಜಿಗೆ ಧಾವಿಸಿ ಸಂಘರ್ಷಕ್ಕೆ ಉತ್ಸುಕರಾಗಿದ್ದ ವಿದ್ಯಾರ್ಥಿಗಳನ್ನು ಚದುರಿಸಿ ಸಂಘರ್ಷ ನಿರತ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ಬಳಿಕ ಹತ್ತಕ್ಕೂ ಮಿಗಿಲಾದ ವಿದ್ಯಾರ್ಥಿಗಳಿಗೆ ಅವರವರ ಹೆತ್ತವರೊಂದಿಗೆ ಪ್ರಾಂಶುಪಾಲರನ್ನು ಭೇಟಿ ಮಾಡಲು ಸೂಚಿಸಿ ಮುಚ್ಚಳಿಕೆ ಪತ್ರ ಬರೆದ ಬಳಿಕವೇ ತರಗತಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು. ಮತೀಯ ಸಂಘರ್ಷಕ್ಕೆ ಕಾರಣವಾಗಬಹುದಾದ ವಿದ್ಯಾರ್ಥಿಗಳ ಈ ಅವಿವೇಕಿತನದ ವರ್ತನೆ ಪೊಲೀಸರ ಸಕಾಲಿಕ ಕ್ರಮದಿಂದ ನಿಯಂತ್ರಿಸಲ್ಪಟ್ಟಂತಾಗಿದೆ.