ಚರಂಡಿಗೆ ವಾಲಿದ ಕಂಟೈನರ್ ವಾಹನ: 3 ತಾಸು ಸಂಚಾರ ತಡೆ
Team Udayavani, May 23, 2022, 11:58 PM IST
ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರದಿಂದಾಗಿ ಕರ್ವೇಲ್ ಎಂಬಲ್ಲಿ 2 ಬೃಹತ್ ಕಂಟೈನರ್ ವಾಹನ ಇಕ್ಕಡೆಯಲ್ಲಿ ಚರಂಡಿಗೆ ಮಗುಚಿ ಬಿದ್ದ ಪರಿಣಾಮ ಸುಮಾರು 3 ತಾಸಿಗೂ ಅಧಿಕ ಹೊತ್ತು ಹೆದ್ದಾರಿ ಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು, ವಾಹನ ಚಾಲಕರು, ಶಾಲಾ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿರುವ ಬಗ್ಗೆ ವರದಿಯಾಗಿದೆ.
ಕರ್ವೇಲ್ ಎಂಬಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುವವರು ರಸ್ತೆ ಬದಿಯಲ್ಲಿ ಅಗೆದು ಹಾಕಿದ್ದಾರೆ. ಇದರ ಮಣ್ಣು ರಸ್ತೆ ಬದಿಯ ಚರಂಡಿಗೆ ಹಾಕಿದ್ದು, ಚರಂಡಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ.
ಹೀಗಾಗಿ ವಾಹನ ಚಾಲಕರು ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ ರಸ್ತೆಗೆ ಅಂಚಿಗೆ ಹೋದಾಗ ವಾಹನಗಳು ನೇರವಾಗಿ ಚರಂಡಿಯಲ್ಲಿ ಹೂತು ಹೋಗುವುದು, ಮಗುಚಿ ಬೀಳುವುದು ನಿರಂತರವಾಗಿ ನಡೆಯುತ್ತಿದ್ದು, ಮೇ 23ರಂದು 2 ಕಂಟೈನರ್ ಲಾರಿ ರಸ್ತೆ ಬದಿಯಲ್ಲಿ ಮುಗುಚಿ ಬಿದ್ದು, ಈ ಅವಘಡ ಸಂಭವಿಸಿದೆ. ಬಳಿಕ ಕ್ರೇನ್ ತರಿಸಲಾಗಿ ಕಂಟೈನರ್ ಅನ್ನು ಎಳೆದು ಬದಿಗೆ ಸರಿಸಲಾಗಿ ಬಳಿಕ ವಾಹನಗಳನ್ನು ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಲಾಯಿತು.
ಮೊದಲ ಕಂಟೈನರ್ ಮಗುಚಿ ಬಿದ್ದ ಸ್ವಲ್ಪ ಹೊತ್ತಿನ ಅನಂತರ ಬಂದ ಇನ್ನೊಂದು ಕಂಟೈನರ್ ಹೋಗುವಾಗ ಇನ್ನೊಂದು ಬದಿಯಲ್ಲಿ ಚರಂಡಿಯಲ್ಲಿ ಹೂತು ಹೋಗಿ ಸ್ಥಗಿತಗೊಂಡಿತ್ತು.