ದಕ್ಷಿಣ ಕನ್ನಡ ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ನಿಧನ
Team Udayavani, Mar 13, 2021, 1:47 PM IST
ಬಂಟ್ವಾಳ: ದಕ್ಷಿಣ ಕನ್ನಡ ಜಿ.ಪಂ.ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಸದಾನಂದ ಪೂಂಜ (80) ಅವರು ಮಾ.13ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಸಜೀಪಮೂಡ ಗ್ರಾಮದ ಅಭಿವೃದ್ಧಿಯ ರೂವಾರಿಗಳಾಗಿ ಗುರುತಿಸಿಕೊಂಡಿದ್ದ ಅವರು, ಸಜೀಪಮಾಗಣೆಯ ಆಡಳಿತದಾರರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದು, ದ.ಕ.ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಸುಭಾಷ್ನಗರ ಶಾರದೋತ್ಸವ ಸಮಿತಿ, ಸುಭಾಷ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಸಜೀಪಮೂಡದಲ್ಲಿ ಸರಕಾರಿ ಪ.ಪೂ.ಕಾಲೇಜು ಸ್ಥಾಪನೆಗೆ ಪ್ರಮುಖ ಕಾರಣರಾಗಿದ್ದರು.
ಇದನ್ನೂ ಓದಿ:ಓಂಕಾರೇಶ್ವರ ರಥೋತ್ಸವ, ಕಲ್ಲೂರಪ್ಪನ ಬೆಟ್ಟದಲ್ಲಿ ಕೊಂಡೋತ್ಸವ ಸಂಭ್ರಮ
ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಸದಸ್ಯರಾಗಿ, ಮಂಡಲ ಹಾಗೂ ಗ್ರಾ.ಪಂ.ಅಧ್ಯಕ್ಷರಾಗಿ, ಈಶ್ವರಮಂಗಲ ದೇವಸ್ಥಾನದ ಅಭಿವೃದ್ಧಿಯ ರೂವಾರಿಗಳಾಗಿ ಹೀಗೆ ಹತ್ತು ಹಲವು ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು.
ಇಂದು ಸಂಜೆ (ಮಾ. 13) ಸಜೀಪಮೂಡ ಸುಭಾಷ್ನಗರದಲ್ಲಿರುವ ಅವರ ಮನೆ ಶಾಂತಿ ನಿಕೇತನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ದೇವಿಪ್ರಸಾದ್ ಪೂಂಜ ತಿಳಿಸಿದ್ದಾರೆ.