ಶಿಕ್ಷಣಕ್ಕಾಗಿ ಹೋರಾಡುವ ಸೈನಿಕರಾಗೋಣ: ಅಂಚನ್
Team Udayavani, Aug 27, 2018, 3:31 PM IST
ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಗುಣಮಟ್ಟ, ಸಂಸ್ಕಾರಯುತ ಶಿಕ್ಷಣ ಸರಕಾರಿ ಶಾಲೆಗಳಲ್ಲೇ ಸಿಗುತ್ತಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ರಾಜಕೀಯ ಮರೆತು ಹೋರಾಟ ನಡೆಸಬೇಕು. ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುವ ಸೈನಿಕರು ನಾವಾಗಬೇಕು ಎಂದು ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ಅಧ್ಯಕ್ಷ ಪ್ರಕಾಶ್ ಅಂಚನ್ ಹೇಳಿದರು.
ಸರಕಾರಿ ಶಾಲೆಗಳ ಉಳಿವಿಗಾಗಿ ಏಕ ರೂಪ ಶಿಕ್ಷಣ ನೀತಿ ಆಗ್ರಹಿಸಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಸೆ. 8ರಂದು ಬೆಂಗಳೂರಿನಲ್ಲಿ ನಡೆಯುವ ಕಾಲ್ನಡಿಗೆ ಜಾಥಾವನ್ನು ಬೆಂಬಲಿಸಿ ಆಲಡ್ಕ ಹಿಂದೂ ಯುವಶಕ್ತಿ ಹಾಗೂ ಬೆಳ್ತಂಗಡಿ ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ರವಿವಾರ ಪುಂಜಾಲಕಟ್ಟೆಯಿಂದ ಬೆಳ್ತಂಗಡಿ ವರೆಗೆ ನಡೆದ ಬೃಹತ್ ವಾಹನ ಜಾಥಾದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಬಂಟ್ವಾಳ ದಡ್ಡಲಕಾಡು ಶಾಲೆಯನ್ನು ಮಾದರಿಯನ್ನಾಗಿ ರೂಪಿಸಿ ನಾವು ಈ ಹೋರಾಟಕ್ಕೆ ಇಳಿದಿದ್ದೇವೆ.
ಪೂರ್ಣ ಬೆಂಬಲ
ದಡ್ಡಲಕಾಡು ಶಾಲೆಯಂತೆಯೇ ಬೆಳ್ತಂಗಡಿ ತಾಲೂಕಿನಲ್ಲೂ ಮೂರು ಸರಕಾರಿ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿ ರೂಪಿಸುವ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ಪ್ರಕಾಶ್ ಅಂಚನ್ ಅವರ ಮಾರ್ಗದರ್ಶನದಲ್ಲಿ ಅದನ್ನು ಅನುಷ್ಠಾನಗೊಳಿಸಲಾಗುವುದು. ಜತೆಗೆ ಇವರ ಹೋರಾಟಕ್ಕೆ ಶಾಸಕನಾಗಿ ತಾನು ಸಂಪೂರ್ಣ ಬೆಂಬಲ ನೀಡುವೆ.
- ಹರೀಶ್ ಪೂಂಜ
ಶಾಸಕರು