ಸೇವಾಜೆ-ಕಜೆ ಸಂಚಾರವೇ ಪ್ರಯಾಣಿಕನಿಗೆ ಸಜೆ!
Team Udayavani, Feb 28, 2019, 6:46 AM IST
ಗುತ್ತಿಗಾರು : ಡಾಮರು ಹಾಕಿದ್ದಕ್ಕೆ ಕುರುಹೇ ಇಲ್ಲದ ಸ್ಥಿತಿ. ಸಂಚರಿಸಿದರೆ ಧೂಳಿನ ರಾಶಿ, ಅಲ್ಲಲ್ಲಿ ಸೃಷ್ಟಿಯಾಗಿರುವ ಬೃಹತ್ ಗುಂಡಿಗಳು, ಪ್ರಯಾಣಿಕರು ಗುರಿ ಮುಟ್ಟುವುದೇ ಇಲ್ಲಿ ಬಹು ದೊಡ್ಡ ಸವಾಲು. ಮಡಪ್ಪಾಡಿ- ಎಲಿಮಲೆ ನಡುವಿನ ರಸ್ತೆಯಲ್ಲಿ ಸೇವಾಜೆಯಿಂದ ಕಜೆ ತನಕ ತೆರಳುವುದೇ ಪ್ರಯಾಣಿಕರಿಗೆ ಸಜೆಯಾಗಿದೆ!
ಸೇವಾಜೆಯಿಂದ ಕಜೆ ವರೆಗಿನ 4 ಕಿ.ಮೀ. ಜಿ.ಪಂ. ರಸ್ತೆ ಡಾಮರು ಕಾಣದೆ ಹಲವು ವರ್ಷಗಳೇ ಕಳೆದಿವೆ. ದಿನ ನಿತ್ಯ ಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕಚೇರಿ ಕೆಲಸಗಳಿಗೆ, ದೂರದ ಊರಿಗೆ ಗ್ರಾಮಸ್ಥರು ಈ ರಸ್ತೆಯ ಮೂಲಕವೇ ಸಂಚರಿಸಬೇಕು. ಅವರಿಗೆ ಬೇರೆ ವ್ಯವಸ್ಥೆ ಇಲ್ಲ. ಇದರಲ್ಲಿ ಪ್ರಯಾಣಿಸುವ ಕಷ್ಟದ ಅರಿವಿದ್ದರೂ, ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಪ್ರಸ್ತಾವ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಸ್ಥಳೀಯರು ರಸ್ತೆ ದುರಸ್ತಿಯ ನಿರೀಕ್ಷೆಯನ್ನೇ ಕೈ ಬಿಟ್ಟಿದ್ದಾರೆ.
ಸಂಪರ್ಕ ರಸ್ತೆ
ಗ್ರಾಮೀಣ ಪ್ರದೇಶ ಮಡಪ್ಪಾಡಿಗೆ ಅತ್ಯಂತ ಹತ್ತಿರದ ಸಂಪರ್ಕ ರಸ್ತೆ ಇದಾಗಿದೆ. ಇದು ಹದೆಗೆಟ್ಟ ಕಾರಣ ಮಡಪ್ಪಾಡಿ ನಾಗರಿಕರು ಬದಲಿ ರಸ್ತೆಯನ್ನು ಬಳಸಿ ತಾಲೂಕು ಕೇಂದ್ರ ಸುಳ್ಯ ಸಹಿತ ವಿವಿಧೆಡೆಗೆ ಪ್ರಯಾಣಿಸುತ್ತಾರೆ. ಕಜೆಯಿಂದ ಬಲ್ಕಜೆ ತನಕ ಕಳೆದ ವರ್ಷ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 3 ಕಿ.ಮೀ.ನಷ್ಟು ರಸ್ತೆಗೆ ಡಾಮರು ಹಾಕಲಾಗಿದೆ. ಅದಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಮಾತ್ರ ನಿರ್ವಾಣ ಸ್ಥಿತಿಯಲ್ಲಿದೆ.
ಬೇರೆ ಅನುದಾನಕ್ಕೆ ಪ್ರಯತ್ನ
ಈ ಹಿಂದೆ ಸಡಕ್ ಯೋಜನೆಯಲ್ಲಿ ಅಭಿವೃದ್ಧಿಗೊಳಿಸಿ ಈ ರಸ್ತೆಯನ್ನು ಜಿ.ಪಂ. ಹಸ್ತಾಂತರಿಸಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿಗೆ ಜಿ.ಪಂ.ನಲ್ಲಿ ಅನುದಾನದ ಕೊರತೆ ಇದೆ. ಹಾಗಾಗಿ ಶಾಸಕರ ಅನುದಾನದಲ್ಲಿ ರಸ್ತೆಗೆ
ಅನುದಾನ ಕಾದಿರಿಸಲು ಪ್ರಯತ್ನ ನಡೆಸಲಾಗುವುದು.
- ಆಶಾ ತಿಮ್ಮಪ್ಪ,
ಜಿ.ಪಂ. ಸದಸ್ಯೆ, ಗುತ್ತಿಗಾರು
ಮಳೆಗಾಲದಲ್ಲಿ ನರಕ
ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಸಂಚರಿಸಲು ಕಷ್ಟವಾಗುತ್ತಿದೆ. ಆದಷ್ಟು ಬೇಗ ಈ ರಸ್ತೆಗೆ ಅನುದಾನ ತರಿಸುವಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳು, ಇಲಾಖೆ ಕಾರ್ಯನ್ಮುಖವಾಗಬೇಕಿದೆ. ಮಳೆಗಾಲದಲ್ಲಿ ಇಲ್ಲಿ ಪ್ರಯಾಣ ನರಕಸದೃಶವಾಗಲಿದೆ.
– ಶುಭಕರ ಎನ್.ಎಂ.,
ರಸ್ತೆ ಫಲಾನುಭವಿ
ವಿಶೇಷ ವರದಿ