“ಪ್ರತಿಯೊಬ್ಬ ದೇಶಾಭಿಮಾನಿಯೂ ಸಂಭ್ರಮಿಸಿದ್ದಾರೆ’
ಸಂವಿಧಾನದ 370ನೇ ವಿಧಿ ರದ್ದು: ಜನಜಾಗೃತಿ ಕಾರ್ಯಕ್ರಮ
Team Udayavani, Sep 25, 2019, 5:00 AM IST
ಬಂಟ್ವಾಳ: ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ 370ನೇ ಹಾಗೂ 35ಎ ವಿಧಿಯ ರದ್ದತಿ ನಿರ್ಧಾರಕ್ಕೆ ದೇಶದ ಕುರಿತು ಗೌರವ ಭಾವನೆ ಇರುವ ಪ್ರತಿಯೊಬ್ಬರೂ ಸಂಭ್ರಮಿಸಿದ್ದು, ದೇಶವೇ ಕೇಂದ್ರ ಸರಕಾರದ ಜತೆ ನಿಂತಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಂಗಳವಾರ ಬಿ.ಸಿ. ರೋಡ್ನ ರಂಗೋಲಿ ಸಭಾಂಗಣದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಆಯೋಜಿಸಿದ್ದ ಸಂವಿಧಾನದ 370ನೇ ವಿಧಿ ರದ್ಧತಿಯ ರಾಷ್ಟ್ರೀಯ ಏಕತಾ ಅಭಿಯಾನದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು. ಹಿಂದೆ ಬಿಜೆಪಿಯು ಕಾಶ್ಮೀರದಲ್ಲಿ ಸಮಿಶ್ರ ಸರಕಾರ ರಚಿಸಿದಾಗ ಅಧಿಕಾರ ಕ್ಕಾಗಿ ಮತೀಯ ಪಕ್ಷವೊಂದರ ಜತೆ ಸೇರಿದೆ ಎಂಬ ಆರೋಪ ಕೇಳಿಬಂತು. ಆದರೆ 370ನೇ ವಿಧಿಯ ರದ್ದತಿಗಾಗಿ ಸಕಾಲದಲ್ಲಿ ಬೆಂಬಲ ವಾಪಸು ಪಡೆ ಯುವ ನಿಟ್ಟಿನಲ್ಲೇ ಬಿಜೆಪಿ ಅಲ್ಲಿನ ಪಕ್ಷಕ್ಕೆ ಬೆಂಬಲ ನೀಡುವ ನಿರ್ಧಾರವನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕೈಕೊಂಡಿದ್ದರು ಎಂದರು.
ನಿವೃತ್ತ ಸೇನಾನಿ ರಾಮಯ್ಯ ಶೆಟ್ಟಿ ಸಂಪಿಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿ, ಬಿಜೆಪಿ ಈಗ ತನ್ನ ಉದ್ದೇಶವನ್ನು ಈಡೇರಿಸಿ, ಭಾರತ ಮಾತೆಯ ಮುಕುಟವನ್ನು ಉಳಿಸಿದೆ. ಅಮೆರಿಕಾದಂತಹ ರಾಷ್ಟ್ರವೇ ಮೋದಿ ನಾಯ ಕತ್ವವನ್ನು ಒಪ್ಪಿಕೊಂಡಿರುವುದು ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಸಾಬೀ ತಾಗಿದೆ. ಮುಂದಿನ ದಿನಗಳಲ್ಲಿ ಸುಂದರ ಬಂಟ್ವಾಳ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ರಾಷ್ಟ್ರೀಯ ಏಕತಾ ಅಭಿಯಾನದ ಸಂಚಾಲಕ ಸತೀಶ್ ಕುಂಪಲ, ಸಹಸಂಚಾಲಕಿ ಪೂಜಾ ಪೈ ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಬಂಟ್ವಾಳಕ್ಕೆ ಮೊದಲ ಬಾರಿಗೆ ಆಗಮಿಸಿದ ಸಚಿವರನ್ನು ಗೌರವಿಸಲಾಯಿತು. ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಜಿ.ಕೆ. ಭಟ್ ಉಪಸ್ಥಿತರಿದ್ದರು. 370ನೇ ವಿಧಿ ರದ್ದತಿಯ ವಿಚಾರದಲ್ಲಿ ಬಂದ ಪ್ರಶಂಸಾ ಪತ್ರವನ್ನು ಲಕ್ಷ್ಮೀನಾರಾಯಣ್ ಅವರಿಗೆ ನೀಡಲಾಯಿತು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ್ ಬಂಟ್ವಾಳ ನಿರೂಪಿಸಿದರು.
ಮನೆ ಭೇಟಿ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ 370ನೇ ವಿಧಿ ರದ್ದತಿ ವಿಚಾರವಾಗಿ ಸಚಿವರು ಮನೆ ಭೇಟಿ ಕಾರ್ಯಕ್ರಮ ನಡೆಸಿದರು. ಬಿ.ಸಿ. ರೋಡ್ನ ಗುರುದತ್ತ್ ಶೆಣೈ ಹಾಗೂ ಬಂಟ್ವಾಳ ಕೆಳಗಿನಪೇಟೆಯ ಖಲೀಲುಲ್ಲಾ ಅವರ ಮನೆಗೆ ಭೇಟಿ ನೀಡಿ, 370ನೇ ವಿಧಿ ರದ್ಧತಿಯ ಕುರಿತು ಮಾತನಾಡಿದರು. ಶಾಸಕ ರಾಜೇಶ್ ನಾೖಕ್ ಮತ್ತಿತರರಿದ್ದರು.
ಮೆಚ್ಚುಗೆ ಮಾತು
ವಿಶೇಷ ಸ್ಥಾನಮಾನ ರದ್ದತಿ ಕುರಿತು ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಮೆಚ್ಚುಗೆ ಮಾತುಗಳು ಕೇಳಿಬರುತ್ತಿದ್ದು, ತಾನು ಚೆನ್ನವೀರ ಕಣವಿ, ಷಡಕ್ಷರಿ, ಪಂಚಾಕ್ಷರಿ, ಸುಧಾಮೂರ್ತಿ ಮೊದಲಾದವರನ್ನು ಭೇಟಿಯಾದಾಗ ಅವರು ಮೋದಿ, ಶಾ ನಿರ್ಧಾರ ಕುರಿತು ಗೌರವದ ಮಾತುಗಳನ್ನಾಡಿದ್ದರು.
– ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು