ಅತಿಯಾದ ಆತ್ಮ ವಿಶ್ವಾಸದಿಂದ ಅಪಾಯ: ಶರತ್
Team Udayavani, Jun 13, 2018, 1:22 PM IST
ಸುಳ್ಯ : ಆತ್ಮವಿಶ್ವಾಸ ಇರಬೇಕು. ಆದರೆ ಅತಿಯಾದ ಆತ್ಮವಿಶ್ವಾಸ ಹೊಂದಿದ್ದಲ್ಲಿ ಅದರಿಂದ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ನಿವೃತ್ತ ಯೋಧ ಶರತ್ ಭಂಡಾರಿ ನುಡಿದರು. ಕೆವಿಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಸೋಮವಾರ ನಡೆದ ಬೀಳ್ಗೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ತವ್ಯಕ್ಕೆ ಪ್ರೀತಿ, ನಿಷ್ಠೆ ಇರಲಿ. ಅದು ನಿಮ್ಮನ್ನು ಉನ್ನತ್ತಿಗೆ ಕೊಂಡೊಯ್ಯುತ್ತದೆ ಎಂದ ಅವರು, ಸಮಯ ಪ್ರಜ್ಞೆ, ಪ್ರಾಮಾಣಿಕತೆ ಮುಖ್ಯ ಧ್ಯೇಯವಾಗಿದ್ದರೆ, ಯಶಸ್ಸು ನಿಮ್ಮದಾಗುತ್ತದೆ. ಅದರ ಜತೆಗೆ ದೇಶ ಪ್ರೀತಿ, ಪರಿಸರ ಪ್ರೇಮವು ಜತೆಗಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂದರ್ಭ ಅವರು ಕಾಲೇಜಿನ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕೆವಿಜಿ ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪಡ್ಡಂಬೈಲು ವೆಂಕಟರಮಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ| ಎನ್.ಎ. ಜ್ಞಾನೇಶ್, ಸುಧನ್ವಕೃಷ್ಣ, ಕಾಲೇಜು ಮ್ಯಾಗಜೀನ್ ಸಂಪಾದಕರಾದ ಡಾ| ಕೇಶವೇಣಿ ಎನ್. ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳಾದ ಹೇಮಂತ್ ಕುಮಾರ್ ಎಸ್.ಡಿ., ಸಿನಾನ್ ಎಸ್. ಎಂ., ಡೀನ್ ಪೌಲ್ ಥೋಮಸ್, ಅಜ್ಮಲ ಇಬ್ರಾಹಿಂ ಬಿ.ಎಂ., ಅನ್ವಿತಾ ಯು.ಎಂ. ಅವರನ್ನು ಅಭಿನಂದಿಸಲಾಯಿತು.
ಡಾ| ಲೇಖಾ ಬಿ.ಎಂ. ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಡಾ| ಎಸ್. ಗೋವಿಂದ ಭಟ್ ಸ್ವಾಗತಿಸಿದರು. ಡಾ| ಶ್ರೀಧರ ಕೆ. ವಂದಿಸಿದರು. ಸ್ಪರ್ಶ ಬಿ.ಪಿ. ಮತ್ತು ಶ್ರುತಿ ಪಿ.ಜೆ. ನಿರೂಪಿಸಿದರು.