ಶಾಶ್ವತ ಕಿಂಡಿ ಅಣೆಕಟ್ಟಿಗೆ ರೈತರ ಆಗ್ರಹ
ನಾವೂರು ಗ್ರಾಮದ ರೈತರ ಪೊಯ್ಲೋಡಿ ಪ್ರದೇಶ
Team Udayavani, Apr 13, 2022, 9:19 AM IST
ಬಂಟ್ವಾಳ: ಸರಕಾರವು ಸಣ್ಣ ನೀರಾವರಿ ಇಲಾಖೆಯ ಮೂಲಕ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಹೆಚ್ಚಿನ ಪ್ರಮಾಣದ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುತ್ತಿದ್ದು, ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಶೈಲಿಯಲ್ಲಿ ತೋಡಿಗೆ ಕಟ್ಟ ಹಾಕುತ್ತಿರುವ ನಾವೂರು ಗ್ರಾಮದ ಪೊಲೋಡಿಯಲ್ಲಿ ಶಾಶ್ವತ ಕಿಂಡಿ ಅಣೆಕಟ್ಟಿನ ಬೇಡಿಕೆ ಕೇಳಿಬಂದಿದೆ.
ಈ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಸ್ಥಳೀಯ ರೈತರೇ ಸೇರಿಕೊಂಡು ಪ್ರತಿವರ್ಷವೂ ತಾತ್ಕಾಲಿಕ ಕಟ್ಟ ನಿರ್ಮಿಸಿ ತಮ್ಮ ತೋಟಕ್ಕೆ ನೀರನ್ನು ಬಳಸಿಕೊಳ್ಳುತ್ತಿದ್ದಾರೆ. ಇಂತಹ ಕಟ್ಟಗಳು ಒಂದೇ ವರ್ಷಕ್ಕೆ ಸೀಮಿತವಾಗಿದ್ದು, ಒಮ್ಮೆ ಮಳೆ ಬಂದು ತೋಡಿನಲ್ಲಿ ನೀರು ಹರಿದರೆ ಕಟ್ಟ ಸಂಪೂರ್ಣ ಕೊಚ್ಚಿ ಹೋಗುವ ಸ್ಥಿತಿ. ಹೀಗಾಗಿ ಕಿಂಡಿ ಅಣೆಕಟ್ಟು ನಿರ್ಮಾಣ ಗೊಂಡಲ್ಲಿ ಸ್ಥಳೀಯ ರೈತರ ನೀರಿನ ಬೇಡಿಕೆಗೆ ಪರಿಹಾರ ಸಿಕ್ಕಂತಾಗುತ್ತದೆ.
ಸಾಂಪ್ರದಾಯಿಕ ಕಟ್ಟಗಳು ಕಣ್ಮರೆ
ಹಲವು ದಶಕಗಳ ಹಿಂದೆ ರೈತರೇ ಸೇರಿಕೊಂಡು ತಮ್ಮ ತೋಟದ ಬದಿಯಲ್ಲಿ ಹರಿಯುವ ತೋಡಿಗೆ ಮರ, ಮಣ್ಣು, ಮರಳು ಬಳಿಸಿ ಸಾಂಪ್ರದಾಯಿಕ ಕಟ್ಟ ನಿರ್ಮಿಸಿ ಅಲ್ಲಿ ಸಂಗ್ರಹಗೊಂಡ ನೀರನ್ನು ತೋಟಕ್ಕೆ ಬಳಸುತ್ತಿದ್ದರು. ಆದರೆ ವಿದ್ಯುತ್ ಪಂಪ್ಗಳು, ಕೊಳವೆಬಾವಿಗಳು ಬಂದ ಬಳಿಕ ಕಟ್ಟಗಳು ದೂರವಾದವು. ಸಾಕಷ್ಟು ಕಡೆಗಳಲ್ಲಿ ಈಗಲೇ ತೋಡಿನ ನೀರನ್ನೇ ಬಳಸಲಾಗುತ್ತಿದ್ದು, ಸಾಂಪ್ರದಾಯಿಕ ಕಟ್ಟಗಳ ಬದಲಾಗಿ ಕಿಂಡಿ ಅಣೆಕಟ್ಟುಗಳು ನಿರ್ಮಾಣಗೊಂಡಿದೆ.
ಮಳೆಗಾಲ ದೂರವಾಗಿ ಒಂದೆರಡು ತಿಂಗಳಲ್ಲೇ ನೀರು ನಿಲ್ಲಿಸಲಾಗುತ್ತಿದ್ದು, ಮತ್ತೆ ಮಳೆ ಆರಂಭದವರೆಗೂ ತೋಡಿನಲ್ಲಿ ನೀರಿರುತ್ತದೆ. ಇಂತಹ ಕಿಂಡಿ ಅಣೆಕಟ್ಟುಗಳಿಂದ ಹೆಚ್ಚಿನ ಕಡೆ ನೇರವಾಗಿ ನೀರು ತೆಗೆದು ತೋಟಕ್ಕೆ ಬಳಸಿದರೆ, ಸಾಕಷ್ಟು ಕಡೆಗಳಲ್ಲಿ ಈ ರೀತಿ ನೀರು ನಿಲ್ಲುರುವುದರಿಂದ ಪ್ರತ್ಯೇಕವಾಗಿ ನೀರು ಹಾಕಬೇಕಾದ ಸ್ಥಿತಿ ಇರುವುದಿಲ್ಲ. ಹೀಗಾಗಿ ರೈತರು ಕಿಂಡಿ ಅಣೆಕಟ್ಟುಗಳ ಕುರಿತು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.
ರೈತರು ಸೇರಿ ನಿರ್ಮಾಣ
ಬಿ.ಸಿ.ರೋಡ್-ಧರ್ಮಸ್ಥಳ ಹೆದ್ದಾರಿ ಯಲ್ಲಿ ಸಾಗುವ ವೇಳೆ ನಾವೂರು ಗ್ರಾಮದ ಹಳೆಗೇಟು, ಹಂಚಿಕಟ್ಟೆ ಪ್ರದೇಶದಲ್ಲಿ ಹೆದ್ದಾರಿ ಬದಿ ತೋಡೊಂದು ಹರಿಯುತ್ತಿದ್ದು ಇದೇ ತೋಡಿಗೆ ಪೊಲೋಡಿ ಪ್ರದೇಶದಲ್ಲಿ ಕಟ್ಟ ನಿರ್ಮಿಸಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ 10ಕ್ಕೂ ಅಧಿಕ ರೈತರು ಸೇರಿ ಇಲ್ಲಿ ಕಟ್ಟ ನಿರ್ಮಿಸುತ್ತಿದ್ದು, ಪ್ರಸ್ತುತ ಹೆಕ್ಕೊಟ್ಟು ನಿವಾಸಿ ಪ್ಲಾಸಿಡ್ ಡಿ’ಸೋಜಾ ಅವರು ತಮ್ಮ ಸ್ವಂತ ಖರ್ಚಿನಿಂದ ಕಟ್ಟ ನಿರ್ಮಿಸಿರುತ್ತಾರೆ. ಇದರಿಂದ ಇತರ ತೋಟಗಳಿಗೂ ಪ್ರಯೋಜನವಾಗುತ್ತಿದೆ. ಗೋಣಿ ಚೀಲಕ್ಕೆ ತೋಡಿನ ಚರಳು(ಮರಳು)ನ್ನು ಬಳಸಿ ಗೋಡೆಯ ರೀತಿ ಜೋಡಿಸಲಾಗುತ್ತದೆ. ಬಳಿಕ ಅದರ ಮಧ್ಯಕ್ಕೆ ಮಣ್ಣನ್ನು ಹಾಕಿ ನೀರು ಹೊರಗೆ ಹರಿಯದಂತೆ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಸುಮಾರು ಒಂದು ಕಿ.ಮೀ. ಅಂದರೆ ಬಡಗುಂಡಿವರೆಗೂ ನೀರು ನಿಲ್ಲುತ್ತದೆ. ಆದರೆ ಕಟ್ಟವನ್ನು ಹೆಚ್ಚು ಎತ್ತರಕ್ಕೆ ಮಾಡಲು ಸಾಧ್ಯವಾಗದೇ ಇರುವುದರಿಂದ ಹೆಚ್ಚಿನ ಪ್ರಮಾಣದ ನೀರು ನಿಲ್ಲಿಸಲು ಅಸಾಧ್ಯವಾಗಿದೆ.
ಶಾಸಕರ ಮೂಲಕ ಅನುದಾನ
ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಶಾಸಕರ ಪ್ರಸ್ತಾವನೆಯಂತೆ ಅನುದಾನ ಬಿಡುಗಡೆ ಗೊಳ್ಳುತ್ತಿರು ವುದರಿಂದ ಸ್ಥಳೀಯ ರೈತರು ಶಾಸಕರಿಗೆ ಮನವಿ ನೀಡಬೇಕಾಗುತ್ತದೆ. ಅದರ ಸೂಚನೆಯಂತೆ ಸಂಬಂಧಪಟ್ಟ ಎಂಜಿನಿಯರ್ ಪರಿಶೀಲನೆ ನಡೆಸಿ ಯೋಜನ ವರದಿ ಸಿದ್ಧಪಡಿಸುತ್ತಾರೆ. ಇಲಾಖೆಯಿಂದ ಕ್ರಿಯಾಯೋಜನೆ ಸಿದ್ಧ ಮಾಡಿಕೊಂಡು ಸಣ್ಣ ನೀರಾವರಿ ಇಲಾಖೆಗೆ ಕಳುಹಿಸಲಾಗುತ್ತದೆ. –ಶಿವಪ್ರಸನ್ನ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ ಬಂಟ್ವಾಳ
ಕಿಂಡಿ ಅಣೆಕಟ್ಟಿಗೆ ಮನವಿ
ಪ್ರತಿವರ್ಷವೂ ಪೊçಲೋಡಿ ಭಾಗದಲ್ಲಿ ಕಟ್ಟ ನಿರ್ಮಿಸಿ ನೀರನ್ನು ಸಂಗ್ರಹಿಸಲಾಗುತ್ತಿದ್ದು, ಹೀಗಾಗಿ ಸ್ಥಳೀಯ ರೈತರೆಲ್ಲರೂ ಸೇರಿ ಶಾಶ್ವತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದೇವೆ. ಹಿಂದೆ ಗ್ರಾ.ಪಂ.ಗೆ ಮನವಿಯನ್ನೂ ನೀಡಿದ್ದೆವು. ಮುಂದೆಯೂ ಮನವಿ ಮಾಡಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆಗ್ರಹಿಸುತ್ತೇವೆ. –ಮ್ಯಾಕ್ಸಿಂ ಸಿಕ್ವೇರ, ಸ್ಥಳೀಯ ಕೃಷಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ