ಕೆಸರು ಗದ್ದೆಯಲ್ಲಿ ಆಟ, ಕೃಷಿ ಪಾಠ
Team Udayavani, Jul 19, 2019, 5:00 AM IST
ಉಳುಮೆ ಮಾಡಿರುವ ಬಾಳಿಲ ಶಾಲೆಯ ಗದ್ದೆಯಲ್ಲಿ ಮಕ್ಕಳ ಆಟದ ಖುಷಿ.
ಬೆಳ್ಳಾರೆ: ತುಂತುರು ಮಳೆಯ ನಡುವೆ ಕೆಸರಿನ ಗದ್ದೆಯಲ್ಲಿ ಆಟವಾಡು ವುದೇ ಖುಷಿ. ಮಕ್ಕಳ ಈ ಸಂಭ್ರಮಕ್ಕೆ ಬಾಳಿಲ ಶಾಲೆ ಗದ್ದೆಯೇ ವೇದಿಕೆಯಾಗಿದೆ. ಮಕ್ಕಳಿಗೆ ಅನ್ನದ ಶ್ರಮ ತಿಳಿಸುವ ಪ್ರಯತ್ನವಾಗಿ ಬಾಳಿಲ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಆಟಕ್ಕೆ ಯೋಗ್ಯವಲ್ಲದ 3 ಸೆಂಟ್ಸ್ ಜಾಗದಲ್ಲಿ ಗದ್ದೆ ಬೇಸಾಯಕ್ಕೆ ಸಿದ್ಧತೆ ಆರಂಭಗೊಂಡಿದೆ. ಗದ್ದೆ ಉಳುಮೆಯಾಗಿ ನೇಜಿ ನಾಟಿಗೆ ಮೊದಲು ಬಿಡುವಿನ ವೇಳೆಯಲ್ಲಿ ಮಕ್ಕಳು ಕೆಸರು ಗದ್ದೆ ಆಟವಾಡಿ ಖುಷಿ ಪಡುತ್ತಿದ್ದಾರೆ.
ಬೇಸಾಯದ ಪಾಠ
ಶಾಲಾ ಅಂಗಳದ ಉಪಯೋಗವಿಲ್ಲದ ಮೂರು ಸೆಂಟ್ಸ್ ಜಾಗದಲ್ಲಿ ಬೇಸಾಯದ ಗದ್ದೆ ರೂಪಿಸಿ ಮಕ್ಕಳಿಗೆ ನೇಗಿಲ ಯೋಗಿಯ ಪಾಠ ಹೇಳಿ ಕೊಡುವ ವಿನೂತನ ಪ್ರಯೋಗ ಮಾಡಲಾಗಿತ್ತು. ಆದರೆ ಈ ವರ್ಷ ಮಳೆ ಕೈಕೊಟ್ಟ ಕಾರಣ ಸ್ವಲ್ಪ ತಡವಾಗಿ ಗದ್ದೆ ಬೇಸಾಯದ ಕಾರ್ಯ ಆರಂಭಿಸಲಾಗಿದೆ. ಮಳೆ ನೀರಿನ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಕಾಯಕವನ್ನು ಈ ಮೂಲಕ ಮಾಡಲಾಗಿದೆ. ಪಕ್ಕದ ಬಾವಿಯಲ್ಲಿದ್ದ ನೀರನ್ನು ಹಾಕಿ ಭತ್ತ ಬೆಳೆಸುವ ಪ್ರಯತ್ನ ನಡೆಸಲಾಗಿದೆ. ಬೇಸಾಯದ ಪಾಠಕ್ಕೆ ಶಾಲಾ ಅಂಗಳ ವೇದಿಕೆಯಾಗಿದೆ.
ಶಿಕ್ಷಕರು, ಹೆತ್ತವರ ಬೆಂಬಲ
ಶಾಲಾ ಅಂಗಳದ ಗದ್ದೆಯಲ್ಲಿ ಬೇಸಾಯದ ಮೂಲಕ ಮಕ್ಕಳಿಗೆ ಕೃಷಿ ಪಾಠ ಒಂದೆಡೆಯಾದರೆ ಭವಿಷ್ಯದ ಊಟದ ಸಿದ್ಧತೆಗೆ ಮಕ್ಕಳು ತಮ್ಮ ಶ್ರಮವನ್ನು ಧಾರೆ ಎರೆಯುತ್ತಾರೆ. ಇಲ್ಲಿನ ಮಕ್ಕಳ ಉತ್ಸಾಹದ ಫಲವಾಗಿ ಗದ್ದೆ ಬೇಸಾಯದ ಜತೆಗೆ ತರಕಾರಿ ಕೃಷಿಯೂ ಫಲ ನೀಡುತ್ತಿದೆ. ಶಾಲಾ ಗದ್ದೆಯಲ್ಲಿನ ಕೃಷಿ ಚಟುವಟಿಕೆಗೆ ಹೆತ್ತವರು ಹಾಗೂ ಶಿಕ್ಷಕರು ನಿರಂತರ ಪೋ›ತ್ಸಾಹ ನೀಡುತ್ತಿದ್ದಾರೆ.
ಕೆಸರುಗದ್ದೆಯಲ್ಲಿ ಆಟದ ಮಜಾ
ಉಳುಮೆಯಾಗಿರುವ ಕೆಸರು ಗದ್ದೆಯಲ್ಲಿ ಮಕ್ಕಳು ಬಿಡುವಿನ ವೇಳೆಯಲ್ಲಿ ಆಟದ ಮೂಲಕ ಖುಷಿ ಪಟ್ಟರು. ಮೈತುಂಬಾ ಕೆಸರು ಮಾಡಿಕೊಂಡು ನಿಜವಾದ ಮಣ್ಣಿನ ಮಕ್ಕಳಂತಾದರು. ಒಂದರಿಂದ ಏಳನೆ ತರಗತಿವರೆಗಿನ ಮಕ್ಕಳು ಹದ ಮಾಡಿದ ಗದ್ದೆಯಲ್ಲಿ ಕೆಸರಿನಾಟವಾಡಿ ಮತ್ತೂಮ್ಮೆ ಉಳುಮೆಗೆ ತಮ್ಮ ಕೊಡುಗೆಯನ್ನೂ ನೀಡಿದರು.
ಬೇಸಾಯದ ಖುಷಿಯೇ ಬೇರೆ
ಕೆಸರಿನಲ್ಲಿ ಆಡುವುದೇ ಖುಷಿ. ಕೆಸರಿನ ಗದ್ದೆಯಲ್ಲಿ ಆಟವಾಡಿ ಪುಳಕಿತರಾಗಿದ್ದೇವೆ. ಬೇಸಾಯದ ಮಹತ್ವ ಸಾರುವ ಪಾಠಗಳು ನಮಗೆ ಸಂತೋಷವನ್ನು ನೀಡುತ್ತಿವೆ.
– ಜನಕ, ವಿದ್ಯಾರ್ಥಿ
ಉಮೇಶ್ ಮಣಿಕ್ಕಾರ