ಮೇಗಿನಮನೆ-ನಲಿಕೆಮಜಲು ರಸ್ತೆ: ಕಳಪೆ ಕಾಮಗಾರಿ
ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಸೀಮ್ ಗಂಧದ ಸ್ಥಳ ಪರಿಶೀಲನೆ
Team Udayavani, May 20, 2019, 6:00 AM IST
ರಸ್ತೆ ದುರಸ್ತಿ ಕಳಪೆ ದೂರಿನ ಹಿನ್ನೆಲೆಯಲ್ಲಿ ಗ್ರಾ.ಪಂ. ಪಿಡಿಒ ಪರಿಶೀಲನೆ ನಡೆಸಿದರು.
ಬಡಗನ್ನೂರು: ಬಡಗನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಪಡುವನ್ನೂರು ಗ್ರಾಮದ ಮೇಗಿನಮನೆ-ನಲಿಕೆಮಜಲು ಗ್ರಾ.ಪಂ. ರಸ್ತೆ ದುರಸ್ತಿಗೆ 14ನೇ ಹಣಕಾಸು ಯೋಜನೆಯಲ್ಲಿ 1.18 ಲಕ್ಷ ರೂ. ಅನುದಾನ ಮಂಜೂರುಗೊಳಿಸಲಾಗಿದ್ದು, ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ರಸ್ತೆ ಕಾಮಗಾರಿ ತೀರಾ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿ¨ªಾರೆ.
ರಸ್ತೆ ಎತ್ತರ ತಗ್ಗಿಸಲು 94 ಸಾವಿರ ರೂ. ಹಾಗೂ ಚರಂಡಿ ದುರಸ್ತಿಗೆ 24 ಸಾವಿರ ರೂ. ಒಟ್ಟು 1.18 ಲಕ್ಷ ರೂ.ಗಳಲ್ಲಿ ಪೂರ್ಣ ಪ್ರಮಾಣದ ಕಾಮಗಾರಿ ನಡೆದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರ ದೂರಿನ ಬಗ್ಗೆ ಬಡಗನ್ನೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಸೀಮ್ ಗಂಧದ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದ್ದಾರೆ.
ರಸ್ತೆ ದುರಸ್ತಿ ಸಂದರ್ಭ ಮೋರಿ ಅಳವಡಿಸಲಾಗಿದ್ದು, ಆದರೆ ಮೋರಿಗೆ ಸರಿಯಾದ ತಡೆಗೋಡೆ ನಿರ್ಮಾಣ ಮಾಡದೇ ಇರುವುದರಿಂದ ಮಣ್ಣು ತುಂಬಿ ಮೋರಿ ಮಣ್ಣಿನಡಿಗೆ ಬಿದ್ದು ಕಾಣದಂತಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ 2 ಅಡಿ ಮಣ್ಣು ತುಂಬಿಸಿರುವುದರಿಂದ ರಸ್ತೆಯ ಎರಡು ಬದಿಗೂ ತಡೆಗೋಡೆ ಕಟ್ಟದೇ ಇದ್ದರೆ ಮಳೆಗಾಲದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗುವ ಅಪಾಯವಿದೆ. ರಸ್ತೆ ಸಂಪರ್ಕ ಕಡಿತದ ಭೀತಿ ಉಂಟಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಎಂಜಿನಿಯರ್ ನಿರ್ಲಕ್ಷ್ಯ?
ಈ ಭಾಗದಲ್ಲಿ ಅಂಗವಿಕಲರಿರುವ ಎರಡು ಕುಟುಂಬಗಳಿದ್ದು, ಅನಾರೋಗ್ಯ ಇತ್ಯಾದಿ ತುರ್ತು ಸಂದರ್ಭ ಆಸ್ಪತ್ರೆಗೆ ಕರೆದೊಯ್ಯಲು ಕಷ್ಟಕರವಾಗಿದೆ. ರಸ್ತೆ ಕಾಮಗಾರಿ ಕಳಪೆಯಾಗಿದೆ ಮತ್ತು ಮೋರಿ ಹಾಕಿದ್ದು ಸರಿಯಾಗಿಲ್ಲ ಎಂದು ಎಂಜಿನಿಯರ್ ಗೋವರ್ಧನ ಭಟ್ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಳೆಗಾಲದ ಸಮಯದಲ್ಲಿ ಎತ್ತರದ ಗುಡ್ಡ ಪ್ರದೇಶದಿಂದ ಹೆಚ್ಚು ನೀರು ಚರಂಡಿಯಲ್ಲಿ ಹರಿದು ಬರುತ್ತದೆ. ಚಿಕ್ಕ ಗಾತ್ರದ ಮೋರಿ ಹಾಕಿದ್ದರಿಂದ ನೀರು ತುಂಬಿ ರಸ್ತೆ ಕೊಚ್ಚಿ ಹೋಗಬಹುದು. ದೊಡ್ಡ ಗಾತ್ರದ ಮೋರಿ ಅಳವಡಿಸಬೇಕು ಹಾಗೂ ರಸ್ತೆಯ 2 ಬದಿಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದ್ದೇವೆ. ಆದರೆ ಎಂಜಿನಿಯರ್, ಗುತ್ತಿಗೆದಾರರು ನಮ್ಮ ಮಾತನ್ನು ಲಕ್ಷ್ಯಕ್ಕೆ ತೆಗೆದುಕೊಂಡಿಲ್ಲ ಎಂದು ಸ್ಥಳೀಯ ಬಾಲು ಡಿ’ಸೋಜಾ ತಿಳಿಸಿದ್ದಾರೆ.
ಚರಂಡಿ ಕಾಮಗಾರಿ ಕಳಪೆ
ಚರಂಡಿ ದುರಸ್ತಿಗೆ 24 ಸಾವಿರ ರೂ. ಅನುದಾನ ಇಡಲಾಗಿದ್ದು, ಕೇವಲ 100 ಮೀ.ನಷ್ಟು ದೂರಕ್ಕೆ ಅರ್ಧ ಅಡಿ ಆಳದಲ್ಲಿ ಅಗೆಯಲಾಗಿದೆ. ಗುಡ್ಡದಿಂದ ನೀರು ಹರಿದು ಬಂದರೆ ಮೊದಲ ಮಳೆಗೇ ಮಣ್ಣು ಚರಂಡಿಯಲ್ಲಿ ತುಂಬಲಿದೆ. ಸಮಸ್ಯೆ ಉಂಟಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂಬುದು ಸ್ಥಳೀಯರ ಆಗ್ರಹ.
ಕೊಚ್ಚಿ ಹೋಗುವ ಭೀತಿ
ಕಾಮಗಾರಿ ಬಗ್ಗೆ ಪ್ರಾರಂಭದಿಂದ ಕೊನೆಯವರೆಗೂ ಕೆಲಸದ ಮಾಹಿತಿ ಇದೆ. ರಸ್ತೆ ನಿರ್ಮಾಣ ಹಂತದಲ್ಲಿ ಚಿಕ್ಕ ಗಾತ್ರದ ಮೋರಿ ಹಾಕಿದ್ದು, ಇದು ಮಣ್ಣಿನಡಿಗೆ ಬಿದ್ದು ಹೋಗಿದೆ. ಚರಂಡಿ ವ್ಯವಸ್ಥೆ ಸರಿಯಲ್ಲ. ಮಳೆ ನೀರು ರಸ್ತೆಗೆ ಹರಿದು ಮಣ್ಣು ಸಮೇತ ರಸ್ತೆ ಕೊಚ್ಚಿಕೊಂಡು ಹೋಗುವ ಭೀತಿಯಿದೆ. ರಸ್ತೆ ಕಾಮಗಾರಿ ಸರಿಪಡಿಸಿದ ಬಳಿಕ ಗುತ್ತಿಗೆದಾರರಿಗೆ ಬಿಲ್ ಪಾವತಿಸುವಂತೆ ಗ್ರಾ.ಪಂ. ಪಿಡಿಒ ಅವರಿಗೆ ಮನವಿ ಮಾಡಿದ್ದೇವೆ.
– ಬಾಲು ಡಿ’ಸೋಜಾ, ನಲಿಕೆಮಜಲು, ಸ್ಥಳೀಯರು
ಪರಿಶೀಲಿಸಿದ್ದೇನೆ
ಚರಂಡಿ ವ್ಯವಸ್ಥಿತವಾಗಿ ಆಗಿಲ್ಲ. ಮೋರಿ ಚಿಕ್ಕದಾಗಿದ್ದು, ಮಳೆ ನೀರು ಹರಿದು ಹೋಗಲು ಕಷ್ಟವಿದೆ. ರಸ್ತೆ ಬದಿಗೆ ತಡೆಗೋಡೆ ನಿರ್ಮಿಸಿಲ್ಲ. ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಪಂಚಾಯತ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.
– ವಸೀಮ್ ಗಂಧದ, ಪಿಡಿಒ, ಬಡಗನ್ನೂರು ಗ್ರಾ.ಪಂ.