ಸುಳ್ಯದಲ್ಲಿ ಭಾರೀ ಮಳೆ: ರಸ್ತೆ, ತೋಟ ಜಲಾವೃತ, ಜನಜೀವನ ಅಸ್ತವ್ಯಸ್ತ
Team Udayavani, Sep 6, 2022, 9:14 AM IST
ಸುಳ್ಯ : ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು ವಿವಿಧ ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯದ ಬೊಳುಬೈಲಿನಲ್ಲಿ ರಸ್ತೆ ಪೂರ್ತಿ ನೀರು ತುಂಬಿದ್ದು ರಾಷ್ಟ್ರೀಯ ಹೆದ್ದಾರಿ ಹೊಳೆಯಾಗಿ ಮಾರ್ಪಾಡಾದ ಪರಿಣಾಮ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ವಾಹನ ದಾಟಿಸಲಾಗದಷ್ಟು ನೀರು ತುಂಬಿದ್ದು ರಸ್ತೆಯಲ್ಲಿ ಕಿಲೋ ಮೀಟರ್ಗಟ್ಟಲೆ ವಾಹನಗಳ ಉದ್ದ ಸಾಲು ಉಂಟಾಗಿತ್ತು.
ಹೊಳೆಯಾದ ರಸ್ತೆ
ಬೊಳುಬೈಲಿನಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ವಿವಿಧ ಕಡೆಗಳಿಂದ ಹರಿದು ಬಂದ ನೀರು ರಸ್ತಯಲ್ಲಿಯೇ ಶೇಖರಣೆಯಾಗಿ ಹೊಳೆಯಂತೆ ಹರಿಯುತ್ತಿದೆ.
ತೋಟಗಳಲ್ಲಿ ಪ್ರವಾಹ
ಬೊಳುಬೈಲು ಮತ್ತಿತರ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು ವಿವಿಧ ಕಡೆಗಳಲ್ಲಿ ಅಡಿಕೆ ತೋಟಗಳು ಜಲಾವೃತವಾಗಿವೆ. ಸುಳ್ಯ- ಬೆಳ್ಳಾರೆ ರಸ್ತೆಯಲ್ಲಿ ಸೋಣಂಗೇರಿ-ಪೈಚಾರು ಮಧ್ಯೆ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಪ್ರಯಾಣಿಕರು ಸಂಕಷ್ಟ ಅನುಭವಿಸಿದರು.
ಉಳಿದೆಡೆ ಮಳೆ ವಿರಳ
ಉಡುಪಿ/ಮಂಗಳೂರು: ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಇತರ ಪ್ರದೇಶಗಳಲ್ಲಿ ಮೋಡ ಹಾಗೂ ಬಿಸಿಲಿನ ವಾತಾವರಣ ಮುಂದುವರಿದಿದ್ದು, ಸೋಮವಾರ ಸಂಜೆ ಹಲವೆಡೆ ಸಾಧಾರಣ ಮಳೆಯಾಗಿದೆ. ಉಡುಪಿ, ಮಣಿಪಾಲ, ಮಲ್ಪೆ, ಪರ್ಕಳ, ಮಂಗಳೂರು, ಪುತ್ತೂರು, ಬೆಳ್ತಂಗಡಿ, ಬಂಟ್ವಾಳಗಳಲ್ಲಿ ಬಿಟ್ಟುಬಿಟ್ಟು ಮೋಡ ಹಾಗೂ ಬಿಸಿಲಿನ ವಾತಾವರಣದ ನಡುವೆ ಮಳೆ ಸುರಿದಿದೆ.
ಇದನ್ನೂ ಓದಿ : ಯಲ್ಲಾಪುರ ತಾಲೂಕಿನಾದ್ಯಂತ ಭಾರಿ ಮಳೆ : ತೋಟಗಳಿಗೆ ನುಗ್ಗಿದ ನೀರು, ಅಪಾರ ನಷ್ಟ