ಇಂದಿರಾ ಕ್ಯಾಂಟೀನ್ಗೆ ಬೇಕು ಸೌಕರ್ಯ
Team Udayavani, Jul 31, 2019, 5:00 AM IST
ನಗರ: ಪುತ್ತೂರಿನಲ್ಲಿ ಆರಂಭಿಸಲಾದ ಇಂದಿರಾ ಕ್ಯಾಂಟೀನ್ಗೆ ಬರುವ ಗ್ರಾಹಕರ ಅನುಕೂಲದ ದೃಷ್ಟಿಯಿಂದ ಇನ್ನಷ್ಟು ಮೂಲಸೌಕರ್ಯ ಅಳವಡಿಸಬೇಕಾಗಿದೆ.
ಊಟ-ಉಪಾಹಾರಕ್ಕಾಗಿ ಕ್ಯಾಂಟೀನ್ಗೆ ಪ್ರತಿದಿನ ನೂರಾರು ಮಂದಿ ಬರುತ್ತಿದ್ದು, ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕಾಗಿ ಜನರು ಹೊರಗಡೆ ಕಾಯಬೇಕಾಗುತ್ತದೆ. ಆದರೆ ಹೊರ ಭಾಗದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಯಾವುದೇ ವ್ಯವಸ್ಥೆಗಳಿಲ್ಲದ ಕಾರಣ ಗ್ರಾಹಕರು ಕೊಡೆ ಹಿಡಿದುಕೊಂಡು, ಮಳೆಯಲ್ಲಿ ತೋಯ್ದುಕೊಂಡು ನಿಲ್ಲಬೇಕಾದ ಅನಿವಾರ್ಯತೆ ಇದೆ. ಹೊರ ಭಾಗದ ಸುತ್ತಲೂ ನೀರು ನಿಂತು ಸೊಳ್ಳೆಗಳ ಉತ್ಪಾದನ ಕೇಂದ್ರವಾಗುತ್ತಿದೆ.
ಕ್ಯಾಂಟೀನ್ ಕಟ್ಟಡದ ಹೊರ ಭಾಗದಲ್ಲಿ ಊಟ, ಉಪಾಹಾರ ಸೇವಿಸಲು ಟೇಬಲ್ಗಳಿದ್ದರೂ ಮೇಲ್ಭಾಗದಲ್ಲಿ ಶೀಟ್ ಅಳವಡಿಸದ ಕಾರಣ ಇದ್ದ ವ್ಯವಸ್ಥೆ ಪ್ರಯೋಜನಕ್ಕೆ ಇಲ್ಲವಾಗಿದೆ. ಕೈ ತೊಳೆಯುವ ಸ್ಥಳದಲ್ಲಿಯೂ ಛಾವಣಿ ಇಲ್ಲದಿರುವ ಕಾರಣ ಮಳೆಗೆ ಒದ್ದೆಯಾಗಿಕೊಂಡು ಸಮಸ್ಯೆ ಅನುಭವಿಸಬೇಕಾಗಿದೆ.
ನೀರು ನಿಲ್ಲುತ್ತದೆ
ಕ್ಯಾಂಟೀನ್ ಸುತ್ತಲೂ ಅಳವಡಿಸ ಲಾಗಿರುವ ಇಂಟರ್ ಲಾಕ್ನಲ್ಲಿ ಸರಿಯಾಗಿ ಮಳೆ ನೀರು ಹರಿದು ಹೋಗುತ್ತಿಲ್ಲ. ಇದರಿಂದಾಗಿ ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪಾದನ ಕೇಂದ್ರವಾಗಿ ಮಾರ್ಪಾಡುಗೊಂಡಿದೆ. ಕ್ಯಾಂಟೀನ್ ತ್ಯಾಜ್ಯ ಸಂಗ್ರಹ ಪೈಪ್ ಬಳಿ ಅಳವಡಿಸಲಾಗಿದ್ದ ಇಂಟರ್ಲಾಕ್ ತೆರವುಗೊಳಿಸಿರುವುದರಿಂದ ಅಲ್ಲಿ ಗುಂಡಿ ನಿರ್ಮಾಣವಾಗಿದ್ದು, ಅದರಲ್ಲಿ ಮಳೆನೀರು ತುಂಬಿ ಕೊಂಡಿದೆ. ಕ್ಯಾಂಟೀನ್ ಸುತ್ತ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದ ಕಾರಣ ನೀರು ನಿಂತುಕೊಂಡು ಸೊಳ್ಳೆಗಳ ಉತ್ಪತ್ತಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ.
ಕ್ಯಾಂಟೀನ್ ಸುತ್ತಲೂ ನೀರು ನಿಲ್ಲದಂತೆ ಸಮರ್ಪಕ ನೀರು ಹರಿಯಲು ವ್ಯವಸ್ಥೆ, ಶೌಚಾಲಯ ಪೈಪ್ ದುರಸ್ತಿ ವ್ಯವಸ್ಥೆ ಸಹಿತ ಮೇಲ್ಭಾಗದ ಚಾವಣಿ ಅಳವಡಿಕೆ ತುರ್ತು ಅಗತ್ಯವಾಗಿದೆ ಎನ್ನುತ್ತಾರೆ ಸಾರ್ವಜನಿಕರು.