“ಅಧಿಕಾರಿಗಳ ಲೋಪದಿಂದ ರೈತರು ಕಂಗಾಲು’
ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ
Team Udayavani, Jun 8, 2019, 5:50 AM IST
ವಿಟ್ಲ: ರೈತರು ಸಾಲ ಪಡೆಯುವ ಸಂದರ್ಭ ದಾಖಲೆಗಳನ್ನು ಸಮರ್ಪಕವಾಗಿ ಗಮನಿಸಬೇಕು. ಇಲ್ಲದಿದ್ದಲ್ಲಿ ಮೋಸ ಹೋಗುವ ಸಾಧ್ಯತೆ ಗಳಿದೆ. ಬ್ಯಾಂಕ್ ಅಧಿಕಾರಿಗಳು ಮಾಡುವ ಲೋಪದೋಷದಿಂದ ರೈತರು ಕಂಗಾಲಾಗುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಜ್ಞಾನ ಜ್ಯೋತಿ ಸೇವಾ ಕೇಂದ್ರದ ಬಂಟ್ವಾಳ ಸಂಯೋಜಕ ಜಯಂತ್ ಶೆಟ್ಟಿ ಹೇಳಿದರು.
ಶುಕ್ರವಾರ ವಿಟ್ಲ ಅತಿಥಿ ಗೃಹದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿ ವತಿಯಿಂದ ಜನಜ್ಯೋತಿ ಸಂಘಟನೆ ಮತ್ತು ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಮುದ್ರಾ ಸಾಲ ಮತ್ತು ಕೃಷಿಕರ ಸಾಲಗಳ ವಿವರ, ಕೇಂದ್ರ ಸರಕಾರದ ವಿಶೇಷ ಯೋಜನೆಗಳ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕಾರ್ಡ್ ಚಳವಳಿ
ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರವನ್ನು ಸರಕಾರ ಒದಗಿಸಬೇಕು. ರೈತರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಕೃಷಿಕರ ಸಭೆಯನ್ನು ಜಿಲ್ಲಾಡಳಿತ ನಡೆಸಬೇಕೆಂದು ಆಗ್ರಹಿಸಿ ರೈತರಿಂದ ಕಾರ್ಡ್ ಚಳವಳಿ ನಡೆಸುವ ಬಗ್ಗೆ ಕಾರ್ಯಾಗಾರದಲ್ಲಿ ರೈತರು ನಿರ್ಣಯ ಕೈಗೊಂಡರು. ಹಿರಿಯ ಕೃಷಿಕ ಈಶ್ವರ ಭಟ್ ಕೋಡ್ಲ, ನೆಲ ಜಲ ಹೋರಾಟ ಸಮಿತಿ ಅಧ್ಯಕ್ಷ ರಾಮಣ್ಣ ಪಾಲಿಗೆ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಬಂಟ್ವಾಳ ಘಟಕ ಕಾರ್ಯದರ್ಶಿ ಇದಿನಬ್ಬ ನಂದಾವರ, ವಿಟ್ಲ ಘಟಕ ಕಾರ್ಯದರ್ಶಿ ಸುದೇಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಅಧಿಕಾರಿಗಳು ಬರಲಿಲ್ಲ
ಬ್ಯಾಂಕ್ ಸಾಲ ಹಾಗೂ ರೈತಪರ ಯೋಜನೆಗಳನ್ನು ಆಯೋಜಿಸಲಾಗಿದ್ದರೂ ಪುತ್ತೂರು ಆರ್.ಎಂ. ಹಾಗೂ ಸ್ಥಳೀಯ ಬ್ಯಾಂಕ್ ಅಧಿಕಾರಿಗಳು ಮಾಹಿತಿ ಕಾರ್ಯಾಗಾರಕ್ಕೆ ಆಗಮಿಸಲಿಲ್ಲ. ಇದು ರೈತರನ್ನು ಕೆರಳಿಸಿತು. ಅಂತಹ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.